ಕಾನ್ಪುರ: ಆರೋಪಿಯನ್ನು ಗುರುತಿಸುವಲ್ಲಿ ಪೊಲೀಸರು ಮಾಡಿದ ತಪ್ಪಿನಿಂದ ವ್ಯಕ್ತಿಯೊಬ್ಬ ಯಾವುದೇ ತಪ್ಪು ಮಾಡದಿದ್ದರೂ 10 ದಿನಗಳ ಕಾಲ ಜೈಲಿನಲ್ಲಿ ಕಳೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಘಟಂಪುರ ಪೊಲೀಸರ ಪ್ರಮಾದದಿಂದ ಅಮಾಯಕ ವ್ಯಕ್ತಿ ಜೈಲು ಶಿಕ್ಷೆ ಅನುಭವಿಸಿದ್ದಾನೆ.
ಪ್ರಕರಣದ ವಿವರ: ಅಕ್ರಮ ಬಂದೂಕು ಹೊಂದಿದ್ದಕ್ಕಾಗಿ 2021ರಲ್ಲಿ ಪ್ರಮೋದ್ ಸಂಖ್ವಾರ್ ಎಂಬಾತ ಬಂಧನಕ್ಕೊಳಗಾಗಿ ಹೊರಬಂದಿದ್ದ. ಸದ್ಯ ಆತನ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು. ಆದರೆ ಪೊಲೀಸರು ಕಾನ್ಪುರದ ವಸಂತ್ ವಿಹಾರ್ ನಿವಾಸಿ ಪ್ರಮೋದ್ ಸಾಹು ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದರು.
ಪೊಲೀಸರು ಹುಡುಕುತ್ತಿರುವ ವ್ಯಕ್ತಿ ತಾನು ಅಲ್ಲ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಹಾಜರುಪಡಿಸಿದ ನಂತರವೂ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಹೀಗಾಗಿ 10 ದಿನಗಳ ಜೈಲುವಾಸದ ನಂತರ ಸೆಪ್ಟೆಂಬರ್ 22 ರಂದು ಸಾಹುಗೆ ಜಾಮೀನು ನೀಡಲಾಯಿತು. ಪ್ರಕರಣದ ಗಂಭೀರತೆಯನ್ನು ಒಪ್ಪಿಕೊಂಡಿರುವ ಜಂಟಿ ಪೊಲೀಸ್ ಆಯುಕ್ತ (ಜೆಸಿಪಿ) ಆನಂದ್ ಪ್ರಕಾಶ್ ತಿವಾರಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
2021ರಲ್ಲಿ ಬಂಧನಕ್ಕೊಳಗಾದ ನಂತರ ದುರ್ಗಾ ಪ್ರಸಾದ್ ಎಂಬವರ ಪುತ್ರ ಸಂಖ್ವಾರ್ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ಆತನ ವಿರುದ್ಧ ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ಈ ವರ್ಷದ ಆಗಸ್ಟ್ 24 ರಂದು ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಂಖ್ವಾರ್ಗೆ ಜಾರಿಯಾಗಬೇಕಿದ್ದ ವಾರಂಟ್ ಅನ್ನು ತಪ್ಪಾಗಿ ಸಾಹು ಎಂಬುವರಿಗೆ ನೀಡಲಾಯಿತು.
ಸಾಹು ಅವರ ಹೆಸರು ಮತ್ತು ಅವರ ತಂದೆಯ ಹೆಸರು ಆರೋಪಿಯ ಹಾಗೂ ಆತನ ತಂದೆಯ ಹೆಸರಿಗೆ ಹೋಲಿಕೆಯಾಗುತ್ತವೆ ಎಂಬ ಒಂದೇ ಕಾರಣದಿಂದ ಪೊಲೀಸರು ಸಾಹುವನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಾನು ಪೊಲೀಸರಿಗೆ ಬೇಡಿಕೊಳ್ಳುತ್ತಲೇ ಇದ್ದೆ, ನನ್ನ ಗುರುತಿನ ದಾಖಲೆಗಳನ್ನು ಸಹ ಅವರಿಗೆ ತೋರಿಸಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದು ಜೈಲಿನಿಂದ ಬಿಡುಗಡೆಯಾದ ಸಾಹು ಹೇಳಿದರು. ಈ ಪ್ರಕರಣವು ಸದ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಸಾಹು ಅವರು ಪೊಲೀಸ್ ಆಯುಕ್ತ ಆರ್.ಕೆ.ಸ್ವರ್ಣಕರ್ ಅವರ ಮುಂದೆ ಹಾಜರಾಗಿದ್ದು, ಘಟನೆಯ ಬಗ್ಗೆ ಅಧಿಕೃತ ತನಿಖೆ ಆರಂಭಿಸಲಾಗಿದೆ.