ಮುಂಬೈ: ನಾಗರಿಕ ಸೇವಾ ದಿನವಾದ ಇಂದು ಕರ್ತವ್ಯ ನಿರತ ನಾಗರಿಕ ಸೇವಾ ಅಧಿಕಾರಿಗಳಿಗೆ ನಟ ರಣದೀಪ್ ಹೂಡಾ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಬರೆದಿರುವ ಅವರು, ದೇಶದ ಭಾರತೀಯ ನಾಗರಿಕ ಸೇವೆ ಅಧಿಕಾರಿಗಳ ಸೇವೆ ಕೊಂಡಾಡಿದ್ದಾರೆ.
"ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ, ದೇಶದ ನಿತ್ಯ ಕೆಲಸಗಳು ಸತತವಾಗಿ ಮುಂದುವರಿಯುವಂತೆ ನೋಡಿಕೊಳ್ಳುವವರು ನಾಗರಿಕ ಸೇವಾ ಅಧಿಕಾರಿಗಳು. ನಾಗರಿಕ ಸಮಾಜಕ್ಕೆ ಇವರು ಮಾದರಿಯಾಗಿದ್ದಾರೆ. ದೇಶಕ್ಕಾಗಿ ಕರ್ತವ್ಯ ನಿರತ ಎಲ್ಲ ಅಧಿಕಾರಿಗಳಿಗೆ ನನ್ನ ನಮನ" ಎಂದು ಹೂಡಾ ಟ್ವೀಟ್ ಮಾಡಿದ್ದಾರೆ.
ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲರು ಇದೇ ದಿನ ಭಾರತೀಯ ಆಡಳಿತಾತ್ಮಕ ಸೇವೆ ಮೊದಲ ಬ್ಯಾಚಿನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ನಾಗರಿಕ ಸೇವಾ ಅಧಿಕಾರಿಗಳು ಭಾರತದ ಉಕ್ಕಿನ ರಕ್ಷಣಾ ಕವಚದಂತೆ ಎಂದು ಹೇಳಿದ್ದನ್ನು ಹೂಡಾ ಸ್ಮರಿಸಿದ್ದಾರೆ.