ಪುದುಚೇರಿ: ಕೊರೊನಾ ಸೋಂಕಿಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮೊದಲ ಬಲಿಯಾಗಿದ್ದು, ಸೋಂಕಿತನ ಮೃತದೇಹದ ಅಂತ್ಯ ಸಂಸ್ಕಾರದ ವೇಳೆ ಯಾವುದೇ ನಿಯಮ ಪಾಲಿಸದೆ ಕಾರ್ಮಿಕರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇದು ತೀವ್ರ ಟೀಕೆಗೆ ಗುರಿಯಾಗಿದೆ.
ಜೂನ್ 4ರಂದು ಚೆನ್ನೈನ ಥೌಸಂಡ್ ಲೈಟ್ಸ್ ಮೂಲದ 44 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಬಂದಿದೆ. ನಂತರ ಮೃತದೇಹವನ್ನು ಸರ್ಕಾರದ ವಶಕ್ಕೆ ಒಪ್ಪಿಸಲಾಗಿದೆ. ಈ ರೋಗಿಯ ಮೃತದೇಹವನ್ನು ಸರಿಯಾಗಿ ನೆರವೇರಿಸದೆ, ಅಮಾನವೀಯವಾಗಿ ಗುಂಡಿಯಲ್ಲಿ ಎಸೆಯಲಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ನಾಲ್ವರು ಕಾರ್ಮಿಕರು ಆಂಬುಲೆನ್ಸ್ನಿಂದ ಬಟ್ಟೆಯಲ್ಲಿ ಸುತ್ತಿದ ಶವವನ್ನು ಇಳಿಸಿ ಮೊದಲೇ ತೋಡಿದ್ದ ಗುಂಡಿಯಲ್ಲಿ ಎಸೆಯುತ್ತಿರುವುದು ಕಂಡು ಬಂದಿದೆ.
ಸ್ವತಃ ಕುಟುಂಬದವರೇ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದ ಕಾರಣ ಕಾರ್ಮಿಕರು ಭಯಗೊಂಡು ಹೀಗೆ ಮಾಡಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ನಾವು ನಮ್ಮ ಕಾರ್ಮಿಕರಿಗೆ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರವನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಹೊಸದಾಗಿ ತರಬೇತಿ ನೀಡುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.