ತ್ರಿಶೂರ್(ಕೇರಳ): ತಮ್ಮ ಸೇವೆಯ ಕೊನೆಯ ದಿನದಂದು ಕೂಡಾ ಕೆಲಸಕ್ಕೆ ಬಂದ ಸ್ವಚ್ಛತಾ ಸಿಬ್ಬಂದಿಯೊಬ್ಬರಿಗೆ ಪೊಲೀಸರು ಗಾರ್ಡ್ ಆಫ್ ಹಾನರ್ ಕೊಟ್ಟು ಬೀಳ್ಕೊಟ್ಟಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.
ವರಂದರಪಿಳ್ಳಿ ಪೊಲೀಸ್ ಸ್ಟೇಶನ್ನಲ್ಲಿ ಸ್ವಚ್ಛತೆಗೆ ಬಂದಿದ್ದ ಆಕೆಗೆ ಠಾಣೆಯ ಪೊಲೀಸರು ಅಭಿನಂದಿಸಿ ಬಿಳ್ಕೊಟ್ಟರು.
30 ವರ್ಷಗಳ ಕಾಲ ಈ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿರುವ ರಾಧಾ ನಿವೃತ್ತಿಯ ದಿನದಂದು ಕೂಡಾ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಸಮಾರಂಭಗಳನ್ನು ರದ್ದುಗೊಳಿಸಿರುವ ಕಾರಣ ರಾಧಾ ಅವರನ್ನು ಠಾಣೆಯ ಸಿಬ್ಬಂದಿ ಸರಳವಾಗಿ ಬಿಳ್ಕೊಟ್ಟರು.
ತಮ್ಮ ಸೇವಾನಿವೃತ್ತಯ ದಿನದಂದು ರಾಧಾ ಪೊಲೀಸ್ ಠಾಣೆಯ ಕೊಠಡಿಗಳನ್ನು ಗುಡಿಸಿ, ಆವರಣವನ್ನು ಶುಚಿಗೊಳಿಸಿದರು. ರಾಧಾ ಎಂದಿನಂತೆ ತನ್ನ ಕೆಲಸದಲ್ಲಿ ತೊಡಗಿಕೊಂಡು, ಮಧ್ಯಾಹ್ನದವರೆಗೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದರು.
ತನ್ನ ಕೆಲಸ ಮುಗಿಸಿ ರಾಧಾ ಹೊರಟಾಗ, ಸ್ಟೇಷನ್ ಹೌಸ್ ಅಧಿಕಾರಿ ಎಸ್.ಜಯಕೃಷ್ಣನ್, ಸಬ್ ಇನ್ಸ್ಪೆಕ್ಟರ್ ಜೆ.ಚೀತಾರಂಜನ್ ಹಾಗೂ ಪೊಲೀಸ್ ಸಿಬ್ಬಂದಿ ಅವರಿಗೆ ಸ್ಮರಣಿಕೆ ನೀಡಿದರು. ಬಳಿಕ ಕರ್ತವ್ಯದಲ್ಲಿದ್ದ ಎಲ್ಲಾ ಪೊಲೀಸರು ಆಕೆಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಿದರು.
30 ವರ್ಷಗಳ ಕಾಲ ಸೇವೆ ಸಲ್ಲಿಸಿದ ರಾಧಾ ಅವರನ್ನು ಸ್ಟೇಶನ್ ವಾಹನದಲ್ಲೇ ಮನೆವರೆಗೆ ಕಳುಹಿಸಲಾಯಿತು.