ಕರ್ನಾಟಕ

karnataka

ETV Bharat / state

ಕುಮಾರ ಪರ್ವತ ಚಾರಣ ಆರಂಭ: ಆನ್​ಲೈನ್ ಬುಕ್ಕಿಂಗ್, ಈ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ! - Kumar Parvatha Trek

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತ ಚಾರಣ ಇಂದಿನಿಂದ ಆರಂಭವಾಗಿದೆ. ಈ ಬಾರಿ ಒಂದೇ ದಿನದಲ್ಲಿ ಚಾರಣ ಪೂರ್ಣಗೊಳಿಸವಂತೆ ಅರಣ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

By ETV Bharat Karnataka Team

Published : 4 hours ago

ಕುಮಾರ ಪರ್ವತ ಚಾರಣ
ಕುಮಾರ ಪರ್ವತ ಚಾರಣ (ETV Bharat)

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಕುಕ್ಕೆ ಸುಬ್ರಹ್ಮಣ್ಯ ಸಮೀಪದ 'ಪುಷ್ಪಗಿರಿ ಚಾರಣ' ಎಂದು ಕರೆಯಲ್ಪಡುವ ಪ್ರಕೃತಿಯ ಸೌಂದರ್ಯದ 'ಕುಮಾರ ಪರ್ವತ' ಚಾರಣ ಇಂದಿನಿಂದ (ಅ.6) ಚಾರಣ ಪ್ರಿಯರಿಗೆ ಮುಕ್ತವಾಗಲಿದೆ. ಆದರೆ ಆನ್‌ಲೈನ್ ಮೂಲಕ ನೋಂದಾಯಿಸಿದವರಿಗೆ ಮಾತ್ರವೇ ಇಲ್ಲಿ ಚಾರಣಕ್ಕೆ ಅವಕಾಶ ಇರಲಿದೆ.

ಕುಮಾರ ಪರ್ವತ ಚಾರಣ ಹಾದಿ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತ ಚಾರಣಕ್ಕೆ ತೆರಳಲು ಕುಕ್ಕೆ ಸಮೀಪದ ದೇವರಗದ್ದೆ ಎಂಬಲ್ಲಿಂದ ದಟ್ಟಾರಣ್ಯ ಪ್ರವೇಶಿಸಬೇಕು. ಮಾತ್ರವಲ್ಲದೇ ಸೋಮವಾರಪೇಟೆ ಬಳಿಯಿಂದಲೂ ಚಾರಣಕ್ಕೆ ಪ್ರವೇಶಿಸಬಹುದು. ಕಳೆದ ವರ್ಷ ಕುಮಾರಪರ್ವತ ಚಾರಣಕ್ಕೆ ಭಾರೀ ಸಂಖ್ಯೆಯ ಚಾರಣಿಗರು ಆಗಮಿಸಿದ್ದರಿಂದ ಬಳಿಕ ಸೀಮಿತ ಚಾರಣಿಗರ ಭೇಟಿಗೆ ಅವಕಾಶ ನೀಡಲಾಗಿತ್ತು. ನಂತರ ಮತ್ತೆ ಮಳೆ ಆರಂಭವಾಗಿದ್ದರಿಂದ ಬೇಸಿಗೆಯಿಂದ ಚಾರಣಕ್ಕೆ ನಿರ್ಬಂಧಿಸಲಾಗಿತ್ತು.

ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್, ಹೊಸ ಮಾರ್ಗಸೂಚಿಯೊಂದಿಗೆ ಪರಿಸರ ಸ್ನೇಹಿ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಕಳೆದ ಬೇಸಿಗೆಯಲ್ಲಿ ಸುಬ್ರಹ್ಮಣ್ಯದಲ್ಲಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ವರ್ಷದಿಂದ ಅರಣ್ಯ ಇಲಾಖೆಯ ಅರಣ್ಯ ವಿಹಾರ ಎಂಬ ವೆಬ್‌ಸೈಟ್​​ನಲ್ಲಿ ನೋಂದಾಯಿಸಿ ಚಾರಣ ಕೈಗೊಳ್ಳಬಹುದು.

ದಿನಕ್ಕೆ 335 ಚಾರಣಿಗರಿಗೆ ಮಾತ್ರ ಅವಕಾಶ ಇರಲಿದೆ. ಕುಕ್ಕೆ ಸುಬ್ರಹ್ಮಣ್ಯ - ಕುಮಾರಪರ್ವತ, ಕೊಡಗಿನ ಬೀದಹಳ್ಳಿ - ಕುಮಾರಪರ್ವತ - ಬೀದಹಳ್ಳಿ, ಬೀದಹಳ್ಳಿ- ಕುಮಾರಪರ್ವತ - ಸುಬ್ರಹ್ಮಣ್ಯ ಎಂಬ ಮೂರು ಆಯ್ಕೆಗಳನ್ನು ಚಾರಣ ಮಾರ್ಗ ಆಯ್ಕೆಗೆ ಆನ್ಲೈನ್ ಬುಕ್ಕಿಂಗ್​​ನಲ್ಲಿ ಸೂಚಿಸಲಾಗಿದೆ.

ಗಿರಿಗದ್ದೆಯಲ್ಲಿ ವಾಸ್ತವ್ಯಕ್ಕೆ ಬ್ರೇಕ್: ಇಷ್ಟು ಮಾತ್ರವಲ್ಲದೇ ಪ್ರತಿ ಬಾರಿ ಕುಮಾರ ಪರ್ವತ ಚಾರಣ ಕೈಗೊಳ್ಳುವವರು ಗಿರಿಗದ್ದೆಯಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ಕುಮಾರಪರ್ವತದ ಮೇಲಿನ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ನಿರ್ಬಂಧಿಸಲಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆಯ ಕುಮಾರಪರ್ವತ ಚಾರಣ ಪ್ರವೇಶಕ್ಕೆ ಬೆಳಗ್ಗೆ ಗಂಟೆ 6ರಿಂದ 9ರ ಅವಧಿಯಲ್ಲಿ ಪ್ರವೇಶಿಸಬೇಕು. ಬೆಳಗ್ಗೆ 11 ಗಂಟೆಗೆ ಗಿರಿಗದ್ದೆಯಿಂದ ಮೇಲಿನ ಪ್ರದೇಶಕ್ಕೆ ತೆರಳಬೇಕು. ಸಂಜೆ 6 ಗಂಟೆ ಮೊದಲು ಚಾರಣದಿಂದ ಕಡ್ಡಾಯವಾಗಿ ನಿರ್ಗಮಿಸಬೇಕು. ಚಾರಣದ ಮಧ್ಯೆ ಎಲ್ಲಿಯೂ ತಂಗಲು ಅವಕಾಶ ಇಲ್ಲ. ಒಂದೇ ದಿನದಲ್ಲಿ ಚಾರಣ ಮಾಡಿ ಹಿಂದಿರುಗಬೇಕು ಎಂದು ಮಾರ್ಗಸೂಚಿಗಳನ್ನು ಅರಣ್ಯ ಇಲಾಖೆ ಹೊರಡಿಸಿದೆ. ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಹಿತಿ ನೀಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ಗಿರಿಗದ್ದೆಯಲ್ಲಿ ಈ ಬಾರಿ ತಂಗಲು ಅವಕಾಶ ನಿರ್ಬಂಧಿಸಲಾಗಿರುವುದರಿಂದ ಸುಬ್ರಹ್ಮಣ್ಯದಿಂದ ಸುಮಾರು 12 ಕಿಮೀ ದೂರದ ಕಠಿಣ ಹಾದಿಯ ಕುಮಾರಪರ್ವತವನ್ನು ಗರಿಷ್ಠ 12 ಗಂಟೆಯೊಳಗೆ (ಬೆಳಗ್ಗೆ 6ರಿಂದ - ಸಂಜೆ 6 ಗಂಟೆ) ವೀಕ್ಷಿಸಿ ಹಿಂದಿರುಗಬೇಕಾಗಿದೆ.

ಇದನ್ನೂ ಓದಿ: ಐತಿಹಾಸಿಕ ನಗರಿ ಬಾರ್ಕೂರಿನಲ್ಲಿದೆ ಮಹಿಷ ದೇವಸ್ಥಾನ: ದಸರಾ ಸಂದರ್ಭ ಮಹಿಷನಿಗೆ ವಿಶೇಷ ಪೂಜೆ - Mahishasura Temple

ABOUT THE AUTHOR

...view details