ಕರ್ನಾಟಕ

karnataka

ETV Bharat / state

ಸುಧಾಕರ್ ನನಗೆ ಯಾವುದೇ ಫೋನ್ ಕರೆ ಮಾಡಿಲ್ಲ, ಆದ್ರೆ ಅವರ ಹೇಳಿಕೆ ಅಚ್ಚರಿ ತಂದಿದೆ : ವಿಜಯೇಂದ್ರ - VIJAYENDRA ON SUDHAKAR

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಜೆಯೇಂದ್ರ ಅವರು, ಎಲ್ಲಾ ಹಂತಗಳಲ್ಲೂ ಚುನಾವಣೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಸಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡೋಣ ಎಂದಿದ್ದಾರೆ.

VIJAYENDRA ON SUDHAKAR
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ETV Bharat)

By ETV Bharat Karnataka Team

Published : Jan 30, 2025, 2:02 PM IST

ಮೈಸೂರು: ಬಿಜೆಪಿಯ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಕುರಿತು ಸಂಸದ ಡಾ.ಸುಧಾಕರ್‌ ಅವರು ನಿನ್ನೆ ನೀಡಿದ ಹೇಳಿಕೆ ಕೇಳಿ ನನಗೂ ಅಚ್ಚರಿ ತಂದಿದೆ. ಜಿಲ್ಲಾಧ್ಯಕ್ಷರ ಆಯ್ಕೆ ನಾನು ಮಾಡಿದಲ್ಲ. ಅದು ಚುನಾವಣಾ ಪ್ರಕ್ರಿಯೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ನೇಮಕದಲ್ಲಿ ನನ್ನ ಯಾವ ಪತ್ರವೂ ಇಲ್ಲ. ನನ್ನ ಯಾವ ಪಾತ್ರವೂ ಬರುವುದಿಲ್ಲ. ಅಧ್ಯಕ್ಷರ ನೇಮಕದಲ್ಲಿ ಸುಧಾಕರ್ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಏಕಂದರೆ ಅದರ ಚುನಾವಣೆ ಉಸ್ತುವಾರಿ ಹೊತ್ತವರೇ ಬೇರೆ. ಬಿಜೆಪಿ ಸಂಘಟನೆ ಪರ್ವ ಕಳೆದ 4-5 ತಿಂಗಳಿನಿಂದ ನಡೆದುಕೊಂಡು ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತವಾಗಿ ಹೇಳುವುದಾದರೆ, ನಮ್ಮ ಚುನಾವಣೆಯ ಉಸ್ತುವಾರಿಗಳು ಜಿಲ್ಲೆಗೆ ಭೇಟಿ ನೀಡಿ, ಎಲ್ಲರ ಅಭಿಪ್ರಾಯ ಪಡೆದೇ ಮೂವರು ಹೆಸರುಗಳನ್ನು ಆಯ್ಕೆ ಮಾಡಿದ್ದರು. ಅವರು ನೀಡಿದ ಹೆಸರುಗಳನ್ನೇ ದೆಹಲಿಗೆ ಕಳುಹಿಸಲಾಗಿತ್ತು. ದೆಹಲಿಯಿಂದ ಬಂದ ನಂತರ ಆ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಯಾವ ಹಂತದಲ್ಲೂ ನನ್ನ ಪಾತ್ರ ಬರುವುದಿಲ್ಲ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ. ಹಾಗಾಗಿ ಈ ರೀತಿ ಮಾತನಾಡಿರಬಹುದು. ಮುಂದೆ ನಾನು ಸುಧಾಕರ್‌ ಅವರನ್ನು ಭೇಟಿ ಮಾಡಿ ಮಾತನಾಡುವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ETV Bharat)

ಟೀಕೆಗಳಿಂದ ಪಾಠ : ಬಿಜೆಪಿಯಲ್ಲಿಯೇ ವಿಜಯೇಂದ್ರ ಟಾರ್ಗೆಟ್ ಆಗುತ್ತಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ, ಯಡಿಯೂರಪ್ಪ ಮಗ ಅನ್ನುವ ಕಾರಣಕ್ಕೆ ಟಾರ್ಗೆಟ್ ಆಗಿದ್ದೇನೆ ಎಂಬುವುದೆನ್ನಲ್ಲ ನಾನು ಹೇಳುವುದಿಲ್ಲ. ನನಗೆ ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅವರ ಏಳು-ಬೀಳುಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ ಎಲ್ಲರ ಟೀಕೆಗಳಿಂದ ಪಾಠ ಕಲಿತಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲುವ ಪ್ರಯತ್ನ ಮಾಡುವೆ ಎಂದರು.

ಸುಧಾಕರ್‌ ನನಗೆ ಫೋನ್‌ ಮಾಡಿಲ್ಲ :ನನಗೆ ಸುಧಾಕರ್ ಅವರು ಯಾವುದೇ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೇಸೆಜ್ ಮಾಡಿದ್ದರು. ನಾನು ಅನಿವಾರ್ಯವಾಗಿ ದೆಹಲಿಗೆ ಹೋಗಬೇಕಿತ್ತು. ಹೀಗಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕರೆ ಮಾಡಿಲ್ಲ. ಅಂತಹ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನು ನಾನಲ್ಲ. ಯಾವ ಅರ್ಥದಲ್ಲಿ ಸುಧಾಕರ್ ಅವರು ಟೀಕೆ ಮಾಡಿದ್ದಾರೋ ಗೊತ್ತಿಲ್ಲ. ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ, ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸುತ್ತಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮುಖ್ಯ. ನಾನು ಯಡಿಯೂರಪ್ಪನವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ನಾನು ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷವಾಗಿದ್ದೇನೆ ಅಷ್ಟೇ. ಸುಧಾಕರ್ ಅವರ ಬಾಯಿಲ್ಲಿ ಯುದ್ಧದ ಮಾತು ಯಾಕೆ ಬಂತು ಅನ್ನೋದು ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ ಎಂದು ವಿಜಯೇಂದ್ರ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ : ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲಾ ಹಂತಕ್ಕೂ ಚುನಾವಣೆ ನಡೆಯುತ್ತಿದೆ. ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಎಲ್ಲದಕ್ಕೂ ನಮ್ಮಲ್ಲಿ ಆಂತರಿಕ ಚುನಾವಣೆಗಳು ಇವೆ. ರಾಜ್ಯಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಾಗಿದೆ. ಮುಂದೆ ಏನಾಗುತ್ತದೋ ಕಾದು ನೋಡೋಣ ಎಂದರು.

ಕಾಂಗ್ರೆಸ್​ನವರು ಆಯ್ಯೋಗರು : ಮಹಾಕುಂಭಮೇಳದ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ ವಿಜಯೇಂದ್ರ, ''ಕುಂಭಮೇಳವನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್​ನವರೆಲ್ಲ ಅಯ್ಯೋಗರು. 144 ವರ್ಷದ ನಂತರ ನಡೆಯುತ್ತಿರುವ ಕುಂಭಮೇಳವನ್ನು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದೇ ಇವರ ಉದ್ದೇಶ. ಆದರೆ, ನಿನ್ನೆಯ ಕಾಲ್ತುಳಿತ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವೆ'' ಎಂದರು.

ಪ್ರಧಾನಮಂತ್ರಿ ಬಣ್ಣದ ಬಗ್ಗೆ ಸಂತೋಷ್ ಲಾಡ್ ಟೀಕೆ : ಸಂತೋಷ್ ಲಾಡ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ವಿಜಯೇಂದ್ರ, ''ಪಿಎಂ ಅವರನ್ನ ಟೀಕೆ ಮಾಡಲು ಯಾವನ್ ರೀ ಅವನು? ಸಂತೋಷ್ ಲಾಡ್, ಯಾರ್ ರೀ ಅವನು? ಬಾಯಿಗೆ ಬಂದಂತೆ ಮಾತನಾಡಿದರೆ ನಡೆಯುತ್ತದೆ ಅಂದುಕೊಂಡಿದ್ದಾನೆ. ಇವನು ಮಾತನಾಡಿದ ತಕ್ಷಣ ಪ್ರಧಾನಮಂತ್ರಿಗಳ ಘನತೆ ಕಡಿಮೆಯಾಗುವುದಿಲ್ಲ. ಹಾದಿ ಬೀದಿಯಲ್ಲಿ ಇಂತಹವರು ಮಾತನಾಡುವುದರಿಂದ ಪ್ರಧಾನಿ ಘನತೆಗೆ ಚ್ಯುತಿ ಬರುವುದಿಲ್ಲ'' ಎಂದು ಗರಂ ಆದರು.

ಇದನ್ನೂ ಓದಿ:ವಿಜಯೇಂದ್ರ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ: ಸಂಸದ ಡಾ.ಕೆ.ಸುಧಾಕರ್ - DR K SUDHAKAR

ABOUT THE AUTHOR

...view details