ಕರ್ನಾಟಕ

karnataka

ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ, ಮಕ್ಕಳ ರಕ್ಷಣೆ: ಬಾಲಕಿ ಸ್ಫೂರ್ತಿ ಸಮಯಪ್ರಜ್ಞೆ, ಮಾನವೀಯತೆಗೆ ಶೌರ್ಯ ಪ್ರಶಸ್ತಿಗೆ ಮನವಿ - Spoorthi Rescued mother children

By ETV Bharat Karnataka Team

Published : Sep 11, 2024, 1:56 PM IST

Updated : Sep 11, 2024, 4:55 PM IST

ತಾಯಿ ಹಾಗೂ ಮಕ್ಕಳನ್ನು ಸಾವಿನ ದವಡೆಯಿಂದ ರಕ್ಷಿಸಿರುವ ಬಾಲಕಿ ಸ್ಫೂರ್ತಿಯ ಮಾನವೀಯತೆಗೆ ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಬಾಲಿಕಾ ಆದರ್ಶ ವಿದ್ಯಾಲಯದ ಶಾಲೆ ಶಿಕ್ಷಕರು ಮನವಿ ಮಾಡಿದ್ದಾರೆ.

SPOORTHI RESCUED MOTHER CHILDREN
ಬಾಲಕಿ ಸ್ಫೂರ್ತಿ ಸಮಯಪ್ರಜ್ಞೆ (ETV Bharat)

ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ, ಮಕ್ಕಳ ರಕ್ಷಿಸಿದ ಬಾಲಕಿ ಸ್ಫೂರ್ತಿ (ETV Bharat)

ಬೆಳಗಾವಿ: ಜೀವನ ನಿರ್ವಹಣೆ ಕಷ್ಟ ಎನಿಸಿದಾಗ ಎಲ್ಲರಿಗೂ ನೆನಪಾಗುವುದೇ ಅತ್ಮಹತ್ಯೆಯ ದಾರಿ. ಹೀಗೆ ತಮ್ಮ ಜೀವನಕ್ಕೆ ಅಂತ್ಯವಾಡುವ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆದರೆ, ಸಾವಿನ ದವಡೆಯಲ್ಲಿ ಇದ್ದವರನ್ನು ಬದುಕಿಸುವ ಸಣ್ಣ ಪ್ರಯತ್ನವೂ ಆಗದಿರುವುದು ದುರದೃಷ್ಟಕರ. ಆದರೆ, ಇಲ್ಲೋರ್ವ ಶಾಲಾ ಬಾಲಕಿ, ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಬದುಕಿಸಿ ಸಮಾಜಕ್ಕೆ ಮಾದರಿಯಾಗಿದ್ದಾಳೆ.

ಮೊಬೈಲ್ ಗೀಳು ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಯಾರಾದರೂ ಸಂಕಷ್ಟದಲ್ಲಿದ್ದರೆ ಅದನ್ನು ತಡೆಯಲು ಮುಂದಾಗದೇ ವಿಡಿಯೋ ಮಾಡುವ ಧಾವಂತವೇ ಹೆಚ್ಚು. ಆದರೆ, ಬೆಳಗಾವಿಯ ಬಾಲಿಕಾ ಆದರ್ಶ ವಿದ್ಯಾಲಯದ‌ 9ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ವಿಶ್ವನಾಥ್ ಸವ್ವಾಶೇರಿ ಅವರು, ಚಲಿಸುವ ರೈಲಿಗೆ ಹೆತ್ತ ಕುಡಿಗಳೊಂದಿಗೆ ತಲೆ ಕೊಡಲು ಮುಂದಾಗಿದ್ದ ಗೃಹಿಣಿಯೋರ್ವರನ್ನು ತನ್ನ ಸಮಯಪ್ರಜ್ಞೆ ಮೂಲಕ ರಕ್ಷಿಸಿದ್ದಳು.

ಬಾಲಕಿ ಸ್ಫೂರ್ತಿಯನ್ನು ಸನ್ಮಾನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ (ETV Bharat)

ಹೌದು, ಕಳೆದ ಆಗಸ್ಟ್ 22ರಂದು ರಾತ್ರಿ 8.30ರ ಸಮಯದಲ್ಲಿ ಸ್ಫೂರ್ತಿ ತನ್ನ ತಂದೆ-ತಾಯಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ರಸ್ತೆಯ ರೈಲ್ವೆ ಫಸ್ಟ್ ಗೇಟ್ ಬಳಿ ಓರ್ವ ಅಪರಿಚಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡಿತ್ತು. ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಳೆಂದು ಅನುಮಾನಗೊಂಡ ಸ್ಫೂರ್ತಿ, ತಕ್ಷಣವೇ ಕಾರಿನಿಂದ ಇಳಿದು ಓಡೋಡಿ ಅವರ ಬಳಿ ಹೋಗಿದ್ದಳು. ಅಲ್ಲದೇ ಅಲ್ಲಿಯೇ ಹೋಗುತ್ತಿದ್ದ ಜನರನ್ನು ಕೂಗಿ ಕರೆದು, ಅವರ ಸಹಾಯದಿಂದ ಮೂವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ಬಾಲಕಿ ಯಶಸ್ವಿಯಾಗಿದ್ದಳು. ಆ ಬಳಿಕ ಸಂಬಂಧಿಕರ ಮೂಲಕ ಅವರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದ ನಂತರವೇ ಸ್ಫೂರ್ತಿ‌ ನಿಟ್ಟುಸಿರು ಬಿಟ್ಟಿದ್ದಳು. ಈ ರೀತಿ ಸ್ಫೂರ್ತಿಯ ಮಾನವೀಯತೆ ಆ ಬಡ ಜೀವಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಫೂರ್ತಿ, "ಆ ಮಹಿಳೆ ಮತ್ತು ಮಕ್ಕಳನ್ನು ನೋಡಿ ಸುಮ್ಮನೆ ಆಗಿದ್ದರೆ, ನನ್ನ ಜೀವ ಇರೋವರೆಗೂ ನಾನು ಕೊರಗಬೇಕಿತ್ತು. ಹಾಗಾಗಿ, ನನ್ನ ಈ ಸಣ್ಣ ಕಾರ್ಯ ಆ ಮೂವರನ್ನು ಬದುಕಿಸಿದೆ. ನನಗೆ ನಿಜಕ್ಕೂ ತುಂಬಾ ಸಂತೋಷ ಮತ್ತು ಸಂತೃಪ್ತಿ ಆಗುತ್ತಿದೆ. ನನ್ನ ತಂದೆ-ತಾಯಿ, ನಿರಾಶ್ರಿತರು-ನಿರ್ಗತಿಕರ ಒಳಿತಿಗೆ ಕೆಲಸ ಮಾಡುತ್ತಾರೆ. ಇಂಥ ಕಾರ್ಯಕ್ಕೆ ಅವರೇ ನನಗೆ ಪ್ರೇರೇಪಣೆ. ಇದರ ಸಂಪೂರ್ಣ ಶ್ರೇಯಸ್ಸು ತಂದೆ-ತಾಯಿಗೆ ಸಲ್ಲುತ್ತದೆ" ಎಂದು ಹೇಳಿದಳು.

ಪೋಷಕರ ಜೊತೆಗೆ ಬಾಲಕಿ ಸ್ಫೂರ್ತಿ (ETV Bharat)

ಸ್ಫೂರ್ತಿ ತಂದೆ ವಿಶ್ವನಾಥ ಸವ್ವಾಶೇರಿ ಮಾತನಾಡಿ, "ಆ ಸಂದರ್ಭವನ್ನು ನೆನಪಿಸಿಕೊಂಡರೆ ನನಗೆ ಈಗಲೂ ಕಾಲು ನಡುಗುತ್ತದೆ. ನಮ್ಮ ಮಗಳ ಧೈರ್ಯ, ಮಾನವೀಯತೆ ಮೆಚ್ಚಲೇಬೇಕು. ನನ್ನ ಮಗಳು ಬೇರೇನೋ‌ ದೊಡ್ಡ ಸಾಧನೆ ಮಾಡಿದ್ದರೂ ಇಷ್ಟು ಖುಷಿ ಆಗುತ್ತಿರಲಿಲ್ಲ. ಮೂರು ಮಂದಿ ಜೀವ ಉಳಿಸಿದ್ದಕ್ಕೆ ಬಹಳ ಸಂತೋಷ ಆಗುತ್ತಿದೆ. ಇದಕ್ಕೆ ಗುರುಗಳು ಕಲಿಸಿದ ಒಳ್ಳೆಯ ಸಂಸ್ಕಾರವೂ ಕಾರಣ" ಎಂದು ಹರ್ಷ ವ್ಯಕ್ತಪಡಿಸಿದರು.

ಶೌರ್ಯ ಪ್ರಶಸ್ತಿ ನೀಡಲಿ: "ಓರ್ವ ಅಪರಿಚಿತ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ತನ್ನ ಸಮಯಪ್ರಜ್ಞೆ ಮೂಲಕ ನಮ್ಮ ವಿದ್ಯಾರ್ಥಿನಿ ಸ್ಫೂರ್ತಿ ಸವ್ವಾಶೇರಿ ರಕ್ಷಿಸಿದ್ದು ನಮ್ಮ ಬಾಲಿಕಾ ಆದರ್ಶ ವಿದ್ಯಾಲಯ ಶಾಲೆಗೆ ಹೆಮ್ಮೆ ಮತ್ತು ಕೀರ್ತಿ ತಂದಿದೆ. ಕರ್ನಾಟಕ ಸರ್ಕಾರ ಸ್ಫೂರ್ತಿ ಮಹತ್ಕಾರ್ಯ ಗುರುತಿಸಿ ಆಕೆಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಬೇಕು" ಎಂಬುದು ಶಿಕ್ಷಕ ಮಂಜುನಾಥ ಗೋಲಿಹಳ್ಳಿ ಅಭಿಪ್ರಾಯ.

ಶಾಲೆಯಲ್ಲಿ ಬಾಲಕಿ ಸ್ಫೂರ್ತಿಗೆ ಸನ್ಮಾನ (ETV Bharat)

ಸಚಿವೆ ಕೊಟ್ಟ ನಗದು ಬಹುಮಾನದಿಂದ ಮಹಿಳೆಗೆ ನೆರವು: ಬಾಲಕಿ ಸ್ಫೂರ್ತಿ ಸವ್ವಾಶೇರಿ ಮಾನವೀಯ ಕಾರ್ಯವನ್ನು ಮೆಚ್ಚಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿನಂದಿಸಿ, 5 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ. ಇಲ್ಲೂ ಮಾನವೀಯತೆಯನ್ನೇ ಪ್ರದರ್ಶಿಸಿರುವ ಸ್ಫೂರ್ತಿ, "ಇದು ನಾನು ದುಡಿದ ಹಣವಲ್ಲ. ಹಾಗಾಗಿ, ಆ ಮಹಿಳೆಯ ಕಷ್ಟಕ್ಕೆ ನೆರವಾಗಲಿ" ಎಂದು ದಿನಬಳಕೆ ವಸ್ತುಗಳನ್ನು ಕೊಡಿಸಿ, ಉಳಿದ ಹಣವನ್ನೂ ಅವರಿಗೆ ನೀಡಿದ್ದಾಳೆ. ಅಲ್ಲದೇ ಇನ್ಮುಂದೆ ಆತ್ಮಹತ್ಯೆಯಂಥ ಕೆಟ್ಟ ನಿರ್ಧಾರಕ್ಕೆ ಎಂದೂ ಮುಂದಾಗಬಾರದು ಎಂದು ಧೈರ್ಯವನ್ನು ತುಂಬಿದ್ದಾಳೆ ಈ ಬಾಲಕಿ.

ಕೀರ್ತಿ ತಂದ ಸ್ಫೂರ್ತಿ: ವಿದ್ಯಾರ್ಥಿನಿ ಸ್ಫೂರ್ತಿ ಸವ್ವಾಶೇರಿ ಮಾನವೀಯ ಕಾರ್ಯಕ್ಕೆ ಬಾಲಿಕಾ ಆದರ್ಶ ವಿದ್ಯಾಲಯ ಶಾಲೆ ಶಿಕ್ಷಕರು ಸತ್ಕರಿಸಿದ್ದು, ವಿದ್ಯಾರ್ಥಿಗಳು ಅಭಿನಂದಿಸಿದರು.

ಇದನ್ನೂ ಓದಿ:ಮಂಗಳೂರು: ಅಪಘಾತದಿಂದ ಬಿದ್ದ ಆಟೋ ಮೇಲಕ್ಕೆತ್ತಿ ತಾಯಿ ರಕ್ಷಿಸಿದ ಬಾಲಕಿಗೆ ಡಿಸಿ ಸನ್ಮಾನ - DC Honors Brave Girl

Last Updated : Sep 11, 2024, 4:55 PM IST

ABOUT THE AUTHOR

...view details