ವಿಶೇಷ ವರದಿ - ಕಿರಣ್ಕುಮಾರ್ ಎಸ್. ಇ.
ಶಿವಮೊಗ್ಗ : ನಗರದೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಅಂಗವಾಗಿ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿರುವ ಶಿವಲಿಂಗಕ್ಕೆ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಈಶ್ವರವನದಲ್ಲಿ ಅಳಿವನಂಚಿನಲ್ಲಿರುವ ವಿವಿಧ ಮರ- ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಪ್ರಕೃತಿ ಆರಾಧನೆ ಮಾಡುವ ಮೂಲಕ ಶಿವರಾತ್ರಿ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.
ಈಶ್ವರವನದ ಹಿನ್ನೆಲೆ ಏನು ? ಎಂಟು ವರ್ಷಗಳ ಹಿಂದೆ ನವ್ಯಶ್ರೀ ನಾಗೇಶ್ ಅವರು ತಮ್ಮ ಸ್ವಂತ ಹಣದಲ್ಲಿ ಅಬ್ಬಲಗೆರೆಯಲ್ಲಿ ಒಂದು ಎಕರೆ ಜಮೀನು ಖರೀದಿಸಿ, ಅಲ್ಲಿ ಪ್ರಕೃತಿಯ ಉಳಿವಿಗಾಗಿ ಏನಾದರೂ ಮಾಡಬೇಕೆಂಬ ಆಶಯದಿಂದ ಅನೇಕ ಅರಣ್ಯಾಧಿಕಾರಿಗಳನ್ನು ಸಂರ್ಪಕಿಸಿ ಕಾಡಿನಲ್ಲಿಯೂ ಅಳಿವಿನಂಚಿನಲ್ಲಿರುವ ಗಿಡಗಳನ್ನು ತಂದು ನೆಟ್ಟು, ಸಂರಕ್ಷಿಸುತ್ತಿದ್ದಾರೆ. ಈಶ್ವರವನದಲ್ಲಿ ಬಿಲ್ವಪತ್ರೆ, ರುದ್ರಾಕ್ಷಿ, ಅತ್ತಿ, ಬಿಲ್ವಾರ, ತಾರೆ, ಶಿವನಿ, ಹೈಗಾ, ಬೈನೆ, ಬಿದಿರು, ರಂಜಲು ಸೇರಿದಂತೆ ಸುಮಾರು 90 ವಿವಿಧ ಪ್ರಭೇದದ ಮರಗಳನ್ನು ಇಲ್ಲಿ ಬೆಳೆಯಲಾಗಿದೆ.
ನವ್ಯಶ್ರೀ ನಾಗೇಶ್ ಅವರು, ತಾವೇ ಸ್ಥಾಪಿಸಿರುವ ನವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಶ್ವರ ವನದಲ್ಲಿನ ಮರಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಇವರು ಟ್ರಸ್ಟಿಗಳಿಂದಲೇ ಹಣ ಸಂಗ್ರಹ ಮಾಡಿ ಈಶ್ವರ ವನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಈ ಟ್ರಸ್ಟ್ ಜಿಲ್ಲೆಯ ಪ್ರಕೃತಿ, ಪರಿಸರ, ನೆಲ, ಜಲದ ಉಳಿವಿಗಾಗಿ ಅಭಿಯಾನ, ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದೆ.

ಪ್ರಕೃತಿ ಅಂದರೆ ದೇವರು, ಪ್ರಕೃತಿಯ ಜೊತೆ ಶಿವರಾತ್ರಿ ಆಚರಣೆ : ಈಶ್ವರ ವನದಲ್ಲಿರುವ ಶಿವಲಿಂಗಕ್ಕೆ ಪ್ರಯಾಗ್ರಾಜ್ನಿಂದ ತಂದ ನೀರಿನಿಂದ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ಗಿಡ ಮರಗಳ ಸಂರಕ್ಷಣೆ ಎಷ್ಟು ಮುಖ್ಯ ಎಂಬುದರ ಕುರಿತು ಅರಿವು ಮೂಡಿಸಲಾಗುತ್ತಿದೆ. ಇಲ್ಲಿರುವ ಪ್ರತಿ ಗಿಡ ಮರಗಳ ಪರಿಚಯವಾಗಬೇಕೆಂದು ಮರಗಳ ಮೇಲೆ ನಾಮಫಲಕ ಹಾಕಲಾಗಿದೆ.

ಇಲ್ಲಿ ಮೊದಲು ಗಿಡ - ಮರಗಳ ದರ್ಶನದ ನಂತರ ಈಶ್ವರನನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಗಿಡ - ಮರಗಳ ದರ್ಶನದ ನಂತರ ಪ್ರಕೃತಿ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರು, ಮಣ್ಣಿನ ರಕ್ಷಣೆ ಬಗ್ಗೆ ಪ್ರತಿಜ್ಞೆ ಮಾಡಿ ನಂತರ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಳಗ್ಗೆಯಿಂದಲೇ ಶಿವನಿಗೆ ರುದ್ರಾಭಿಷೇಕ, ರುದ್ರ ಪಠಣ, ಶಿವನ ಭಕ್ತಿ ಗೀತೆಗಳ ಆರಾಧನೆ ನಡೆಯುತ್ತಿದೆ. ಪ್ರಕೃತಿಯ ಕುರಿತು ಜನರಲ್ಲಿ ಹಾಗೂ ಯುವಕರಲ್ಲಿ ಆಸಕ್ತಿ ಮೂಡಿಸಲು ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೇವಲ ಶಿವನ ಆರಾಧನೆಯೊಂದೇ ಸಾಲದು ಎಂದು ರಕ್ತ ಸಂಗ್ರಹ ಕಾರ್ಯ ಸಹ ನಡೆಸಿಕೊಂಡು ಬರಲಾಗುತ್ತಿದೆ. ಈಶ್ವರವನಕ್ಕೆ ಬರುವ ಎಲ್ಲರಿಗೂ ಬೆಳಗ್ಗೆಯಿಂದ ಸಂಜೆವರೆಗೆ ನವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಪ್ರಸಾದ ವಿತರಣೆ ಮಾಡುತ್ತಿದೆ. ಕಳೆದ ಐದಾರು ವರ್ಷಗಳಿಂದ ನೂರಾರು ಶಾಲಾ ಮಕ್ಕಳು ಈಶ್ವರವನಕ್ಕೆ ಭೇಟಿ ನೀಡಿ ಪ್ರಕೃತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ.
ನಾವು ಶಿವ ತತ್ವದ ಅಡಿಯಲ್ಲಿ ಶಿವರಾತ್ರಿ ಆಚರಣೆ ಮಾಡುತ್ತೇವೆ. ಶಿವ ಅಂದರೆ ಪ್ರಕೃತಿಯ ಪರೋಪಕಾರ, ಭಕ್ತಿ, ತ್ಯಾಗ ಮತ್ತು ವೈರಾಗ್ಯವಾಗಿದೆ. ಪ್ರಕೃತಿಯೇ ದೇವರ ಸೃಷ್ಟಿ. ಇಂದು ಶಿವನ ಆರಾಧನೆಯ ಜೊತೆಗೆ ಪರೋಪಕಾರಕ್ಕಾಗಿ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ಭಕ್ತಿ ಪೂರ್ವಕವಾಗಿ ಇಲ್ಲಿಗೆ ಬರುವವರಿಗೆ ಶಿವನಿಗೆ ಅಭಿಷೇಕ ಮಾಡಲು ಅವಕಾಶ ನೀಡಲಾಗಿದೆ. ಶಿವನ ಅಭಿಷೇಕಕ್ಕೂ ಮುನ್ನ ಪ್ರಕೃತಿ ಉಳಿಸುವ ಒಂದು ಸಂಕಲ್ಪ ಮಾಡಿ, ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಿಂದ ತಂದ ಜಲದಿಂದ ಜಲಾಭಿಷೇಕ ಮಾಡಲು ಅವಕಾಶ ಕೊಡಲಾಗಿದೆ. ಪ್ರಕೃತಿಯ ಪೂಜೆಯನ್ನು ನಾವು ಕಳೆದ ಎಂಟು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಜನರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಎಲ್ಲಾ ಕಡೆ ಇಂದು ಪೂಜೆ ಪುನಸ್ಕಾರ ಭಜನೆ ಇರುತ್ತದೆ. ಇಲ್ಲಿ ಪ್ರಕೃತಿಯೊಂದಿಗೆ ಪರಮಾತ್ಮನನ್ನು ಕಾಣುವ, ಪ್ರಕೃತಿಯನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಈಟಿವಿ ಭಾರತ ಪ್ರತಿನಿಧಿ ಕಿರಣ್ ಕುಮಾರ್ ಅವರೊಂದಿಗೆ ಮಾತನಾಡಿದ ಈಶ್ವರವನದ ಸ್ಥಾಪಕರಾದ ನವ್ಯಶ್ರೀ ನಾಗೇಶ್ ತಿಳಿಸಿದರು.
ಭಕ್ತರಾದ ವಾಸವಾಂಬ ಮಾತನಾಡಿ, ಶಿವರಾತ್ರಿಯ ಪ್ರಯುಕ್ತ ಈಶ್ವರವನಕ್ಕೆ ಬಂದಿದ್ದೇವೆ. ಇಲ್ಲಿ ಪ್ರಕೃತಿಯ ನಡುವೆ ಈಶ್ವರನ ಆರಾಧನೆಗೆ ಬಂದಿದ್ದೇವೆ. ಇಲ್ಲಿ ನಮಗೆ ಈಶ್ವರನಿಗೆ ಅಭಿಷೇಕ ಮಾಡಲು ಅವಕಾಶ ನೀಡಲಾಗಿದೆ. ಇದು ನಮ್ಮ ಪೂರ್ವಜನ್ಮದ ಪುಣ್ಯ ಅನಿಸುತ್ತದೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಈ ವನಕ್ಕೆ ಕಾಲಿಟ್ಟರೆ ಸಾಕು, ಒಂದು ರೀತಿ ಪಾಸಿಟಿವ್ ಎನರ್ಜಿ ಸಿಗುತ್ತದೆ. ಪ್ರಕೃತಿಯ ತಾಣದಲ್ಲಿ ನಾವು ದೇವರನ್ನು ಪೂಜಿಸುತ್ತೇವೆ ಎಂದರು.
ಭಕ್ತರಾದ ಲಕ್ಷ್ಮೀ ಮಾತನಾಡಿ, ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಬಂದ ತಕ್ಷಣ ಇಲ್ಲಿನ ವಾತಾವರಣ ನೋಡಿ ಖುಷಿಯಾಯಿತು. ಪ್ರಕೃತಿಯ ನಡುವೆ ಶಿವನ ಆರಾಧನೆ ನಡೆಯುತ್ತಿದೆ. ದೇವಾಲಯದಲ್ಲಿ ಪೂಜೆ, ಭಜನೆ ಜರುಗುತ್ತದೆ. ಇಲ್ಲಿ ಅಳಿವನಂಚಿನ ಮರಗಳ ನಡುವೆ ಪೂಜೆ ನಡೆಯುತ್ತಿರುವುದು ಸಂತಸ ತಂದಿದೆ. ಪೂಜೆಯ ಜೊತೆಗೆ ರಕ್ತದಾನ, ಪ್ರಕೃತಿಗಾಗಿಯೇ ಥಟ್ ಅಂತ ಹೇಳಿ ಕಾರ್ಯಕ್ರಮ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಾಶಿ ವಿಶ್ವನಾಥನ ದರ್ಶನ: ಮಾದರಿ ಶಿವಲಿಂಗ ನೋಡಲು ಹರಿದು ಬಂದ ಭಕ್ತಗಣ
ಇದನ್ನೂ ಓದಿ: ರಾಜ್ಯಾದ್ಯಂತ ಶಿವರಾತ್ರಿ ಸಂಭ್ರಮ: ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆ