ಕರ್ನಾಟಕ

karnataka

ರಾಯಚೂರು ಬಸ್​ ಅಪಘಾತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಶರಣಪ್ರಕಾಶ್ ಪಾಟೀಲ್ - Raichur Bus Accident

By ETV Bharat Karnataka Team

Published : Sep 6, 2024, 1:19 PM IST

ರಾಯಚೂರಿನಲ್ಲಿ ಗುರುವಾರ ಸಂಭವಿಸಿದ ಬಸ್​ ಅಪಘಾತದಿಂದ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಚಾಲಕ ರಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ವಿದ್ಯಾರ್ಥಿಯ ಆರೊಗ್ಯದ ಬಗ್ಗೆ ಪರಿಶೀಲಿಸುತ್ತಿರುವ ಸಚಿವ ಶರಣಪ್ರಕಾಶ್ ಪಾಟೀಲ್
ಗಾಯಾಳು ವಿದ್ಯಾರ್ಥಿಯ ಆರೋಗ್ಯ ವಿಚಾರಿಸುತ್ತಿರುವ ಸಚಿವ ಶರಣಪ್ರಕಾಶ್ ಪಾಟೀಲ್ (ETV Bharat)

ಸಚಿವ ಶರಣಪ್ರಕಾಶ್ ಪಾಟೀಲ್ ಮಾಹಿತಿ (ETV Bharat)

ರಾಯಚೂರು:ಖಾಸಗಿ ಶಾಲಾ ಬಸ್​ ಮತ್ತು ಸಾರಿಗೆ ಬಸ್​​ ನಡುವಿನ ಭೀಕರ ರಸ್ತೆ ಅಪಘಾತ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಿಮ್ಸ್​ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ವೈದ್ಯರೊಂದಿಗೆ ಚರ್ಚಿಸಿದ್ದಾರೆ.

ಮಾನವಿ ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ಗುರುವಾರ ಖಾಸಗಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಶಾಲಾ ಬಸ್‌ನಲ್ಲಿದ್ದ 40 ವಿದ್ಯಾರ್ಥಿಗಳಲ್ಲಿ ಚಾಲಕ ಸೇರಿ 17 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಶ್ರೀಕಾಂತ್​, ಸಮರ್ಥ ಎಂಬಿಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 23 ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶಾಲಾ ಬಸ್ ಚಾಲಕ, ಇನ್ನಿಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ.

ಈ ಹಿನ್ನೆಲೆಯಲ್ಲಿ ಸಚಿವರು ಗಾಯಗೊಂಡಿರುವವರಿಗೆ ನೀಡುತ್ತಿರುವ ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತ‌ನಾಡಿದ ಸಚಿವರು, "ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತ ಮಕ್ಕಳಿಗೆ 5 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 3 ಲಕ್ಷ ರೂಪಾಯಿ ಪರಿಹಾರಧನವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಮಂಜುನಾಥ, ಮಧುಶ್ರೀ, ಚಾಲಕ ಬಲವಂತ ಮೂವರು ತ್ರೀವವಾಗಿ ಗಾಯಗೊಂಡಿದ್ದಾರೆ. ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ತೀವ್ರ ನಿಗಾ ವಹಿಸಲಾಗಿದೆ" ಎಂದರು.

"ಓರ್ವ ವಿದ್ಯಾರ್ಥಿಗೆ ತಲೆ ಬಲವಾದ ಪೆಟ್ಟು ಬಿದ್ದಿದೆ. ಈ ಬಗ್ಗೆ ಬೆಂಗಳೂರಿನ ನುರಿತ ತಜ್ಞರೊಂದಿಗೆ ಚರ್ಚೆ ಮಾಡಿದ್ದೇನೆ. ನಂದೀಶ್ ಎನ್ನುವ ವಿದ್ಯಾರ್ಥಿಯ ಕೈ ಮುರಿತ ಹಾಗೂ ಚಾಲಕ ಬಲವಂತನಿಗೆ ಕಾಲು ಮುರಿತವಾಗಿದೆ. ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳದ ರಸ್ತೆಯನ್ನು ಕೆಆರ್‌ಡಿಎಲ್​ಗೆ ಹಸ್ತಾಂತರಿಸಲಾಗಿದೆ. ರಸ್ತೆಯಲ್ಲಿ ತಗ್ಗು, ಗುಂಡಿಗಳು, ಹಾಳಾಗಿರುವುದು ಸೇರಿದಂತೆ ಎಲ್ಲ ಮಾಹಿತಿಯ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುತ್ತೇನೆ" ಎಂದು ಸಚಿವರು ತಿಳಿಸಿದರು.

ಶಾಸಕರಾದ ಬಸವನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ವಸಂತ ಕುಮಾರ್ ಜೊತೆಗಿದ್ದರು.

ಇದನ್ನೂ ಓದಿ:ರಾಯಚೂರಿನಲ್ಲಿ ಶಾಲಾ ಬಸ್ - ಸಾರಿಗೆ ಬಸ್​ ನಡುವೆ​​ ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸಾವು, ಮೂವರ ಸ್ಥಿತಿ ಚಿಂತಾಜನಕ - Raichur Bus Accident

ABOUT THE AUTHOR

...view details