ಹುಬ್ಬಳ್ಳಿ:ಕರ್ನಾಟಕ ರಾಜ್ಯ ಈಗ ಸಂಪೂರ್ಣ ಗೂಂಡಾ ರಾಜ್ಯವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಪೊಲೀಸ್ ವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು.
ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇತ್ತೀಚಿಗೆ ನೇಹಾ ಹಿರೇಮಠ ಕೊಲೆಯಾದಾಗ ರಾಜ್ಯ ತಲ್ಲಣಗೊಂಡಿತ್ತು. ಕಾಲೇಜ್ ಕ್ಯಾಂಪಸ್ನಲ್ಲೇ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಇಲ್ಲ ಅನ್ನೋ ಚರ್ಚೆ ನಡೆದಿತ್ತು. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಕೊಲೆ, ಸುಲಿಗೆ, ದರೋಡೆ ನಡೀತಿದೆ. ಇದನ್ನು ಸರ್ಕಾರಕ್ಕೆ ಕಂಟ್ರೋಲ್ ಮಾಡೋಕೆ ಆಗುತ್ತಿಲ್ಲ. ಸಚಿವರು ನೇಹಾ ಹತ್ಯೆಯಾದಾಗ ಬೇಜಾವ್ದಾರಿಯಾಗಿ ಮಾತನಾಡಿದ್ದರು. ಆದರೆ ಈಗ ಅಂಜಲಿ ಮರ್ಡರ್ ಕೇಸ್ ಆಗಿದೆ ಎಂದರು.
ನಾನು ಅವರ ಅಮ್ಮನ ಜೊತೆ ಮಾತಾಡಿದೆ. ಮೊದಲೇ ಅವರಿಗೆ ಬೆದರಿಕೆ ಇತ್ತು. ಅವರ ಅಮ್ಮ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದರು. ಪೊಲೀಸರು ಕುಚೇಷ್ಠೆ ಮಾಡಿ ಕಳುಹಿಸಿದ್ದರು. ಸರ್ಕಾರದ ವ್ಯವಸ್ಥೆ ಕುಸಿದು ಹೋಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವ್ಯವಧಾನದಿಂದ ಹೇಳೋ ಮಾತೇ ಇಲ್ಲ. ಜನರ ನೆಮ್ಮದಿ ಕೆಡಿಸೋ ಕೆಲಸವನ್ನು ಸರ್ಕಾರ ಮಾಡಿದೆ. ಆರೋಪಿ ಗಿರೀಶ್ ಬಂಧನವಾಗಿದ್ದಾನೆ. ಆದ್ರೆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಂಜಲಿ ಆತ್ಮಕ್ಕೆ ಶಾಂತಿ ಸಿಗಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.