ಕರ್ನಾಟಕ

karnataka

ETV Bharat / state

ಕುಂದಾಪುರ ಕೋಡಿ ಕಿನಾರೆಯಲ್ಲಿ 1 ಟನ್ ಪಾದರಕ್ಷೆ! ಸಮುದ್ರ ಜೀವಿಗಳ ಪ್ರಾಣಕ್ಕೆ ಕುತ್ತು - Kundapura Kodi Beach

ಕುಂದಾಪುರದ ಕೋಡಿ ಕಿನಾರೆಯಲ್ಲಿ ಒಂದು ಟನ್‌ ಪಾದರಕ್ಷೆಯ ಜೊತೆಗೆ ವೈದ್ಯಕೀಯ ತ್ಯಾಜ್ಯ, ಇತರ ತ್ಯಾಜ್ಯಗಳೂ ದೊರೆತಿವೆ.

By ETV Bharat Karnataka Team

Published : Aug 9, 2024, 6:15 PM IST

Footwear Collection at Kundapura Kodi Beach
ಕುಂದಾಪುರ ಕೋಡಿ ಕಿನಾರೆಯಲ್ಲಿ ಪಾದರಕ್ಷೆ ಸಂಗ್ರಹ (ETV Bharat)

ಉಡುಪಿ:ಕುಂದಾಪುರದಲ್ಲಿ ಕಳೆದ ಕೆಲ ಸಮಯದಿಂದ ಪ್ರತೀ ವಾರ ಕೋಡಿ ಕಿನಾರೆಯ ಪರಿಸರ ಸ್ವಚ್ಛಗೊಳಿಸುವ 'ಕ್ಲೀನ್‌ ಕುಂದಾಪುರ ಯೋಜನೆ'ಯ ಸ್ವಯಂ ಸೇವಕರು, ಬೀಚ್‌ನ 200-300 ಮೀ. ವಿಸ್ತಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಸಿದ ಸ್ವಚ್ಛತಾ ಕಾರ್ಯದಲ್ಲಿ ಕನಿಷ್ಠ 1 ಟನ್‌ ಪಾದರಕ್ಷೆಗಳೊಂದಿಗೆ ವೈದ್ಯಕೀಯ, ಇತರ ತ್ಯಾಜ್ಯಗಳನ್ನು ಗುರುತಿಸಿ ಸಂಗ್ರಹಿಸಿದ್ದಾರೆ. ಕಳೆದ ವಾರವೂ ಇದೇ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು.

ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಬೀಳುತ್ತಿರುವ ಮಹಾ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ, ಹಳ್ಳ ಹಾಗೂ ತೋಡುಗಳ ಸಂಗ್ರಹಿತ ತ್ಯಾಜ್ಯ ನೀರಿನೊಂದಿಗೆ ಹರಿದು ಸಮುದ್ರ ಸೇರುತ್ತಿದೆ. ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿರುವುದರಿಂದ ಅಲ್ಲಿಂದ ಹೊರಬರುವ ನೀರು ಸಹ ಸಮುದ್ರ ಸೇರುತ್ತಿದೆ. ನೀರಿನೊಂದಿಗೆ ಸಮುದ್ರ ಸೇರುವ ಈ ತ್ಯಾಜ್ಯಗಳನ್ನು ಅಲೆಗಳು ಮತ್ತೆ ತೀರ ಪ್ರದೇಶಕ್ಕೆ ತರುವುದರಿಂದ ಸಮುದ್ರ ಕಿನಾರೆಯ ಪರಿಸರದಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್‌, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ ಬಿದ್ದಿವೆ.

ತ್ಯಾಜ್ಯ ಸಂಗ್ರಹ (ETV Bharat)

ನಿರಂತರವಾಗಿ ತ್ಯಾಜ್ಯ ಸಂಗ್ರಹಣೆಯ ಮೂಲಕ ಕಿನಾರೆಯ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಕ್ಷೀನ್‌ ಕುಂದಾಪುರದ ಕಾರ್ಯಕರ್ತರು ಪಂಚ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ತ್ಯಾಜ್ಯದ ಹಠಾತ್‌ ಏರಿಕೆಯನ್ನು ಗಮನಿಸಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುವ ವರಾಹಿ, ಸೌಪರ್ಣಿಕಾ, ಖೇಟಾ, ಕುಬ್ಜಾ ಚಕ್ರಾ ನದಿಗಳ ನೀರು, ಪಂಚ ಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲು ಸೇರುವುದರಿಂದ ಸಹಜವಾಗಿ ಎರಡು ತಾಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚ ಗಂಗಾವಳಿಯಲ್ಲಿ ಸೇರಿ ಅರಬ್ಬಿ ಕಡಲು ಪ್ರವೇಶಿಸುತ್ತದೆ.

ಕ್ಲೀನ್‌ ಕುಂದಾಪುರ ಸ್ವಯಂ ಸೇವಕರಿಂದ ಸ್ವಚ್ಛತೆ:ಸಮುದ್ರ ಕಿನಾರೆ ಸ್ವಚ್ಛವಾಗಿಡುವ ಮೂಲಕ ಸುಂದರ ಕುಂದಾಪುರದ ಕನಸುಗಳನ್ನು ಕಾಣುತ್ತಿರುವ ಕ್ಲೀನ್‌ ಕುಂದಾಪುರ ಸ್ವಯಂ ಸೇವಾ ಸಂಘಟನೆಯಲ್ಲಿ ಸೀಮಿತ ಕಾರ್ಯಕರ್ತರಿದ್ದರೂ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ಥಳೀಯ ಪುರಸಭೆ, ಅರಣ್ಯ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡದವರ ಕಾರ್ಯಶೈಲಿಯನ್ನು ಮೆಚ್ಚಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯಾಧೀಶರು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ್ದಾರೆ.

ಸಮುದ್ರ ಜೀವಿಗಳಿಗೆ ಅಪಾಯ:ಸಮುದ್ರ ಕಿನಾರೆಗಳನ್ನು ಮಳೆಗಾಲದ ಸಮಯದಲ್ಲಿ ಸ್ವಚ್ಛಗೊಳಿಸುವುದು ಅತ್ಯಂತ ಗಮನಾರ್ಹ. ಮಳೆಗಾಲದ ಸಂದರ್ಭದಲ್ಲಿ ಒಟ್ಟಾಗುವ ತ್ಯಾಜ್ಯಗಳ ವಿಲೇವಾರಿ ಆಗದೇ ಇದ್ದಲ್ಲಿ, ಹಳೆಯ ತ್ಯಾಜ್ಯದ ಮೇಲೆ ಕೂತು, ಪದರಗಳಾಗಿ ಅವು ಕಿನಾರೆಯ ಮರಳಲ್ಲಿ ಹೂತು ಹೋಗುತ್ತವೆ. ಇದರಿಂದ ಸಮುದ್ರದ ಮತ್ಸ್ಯ ಸಂತತಿ, ಜಲಚರಗಳು, ಕಡಲಾಮೆ, ವಲಸೆ ಹಕ್ಕಿಗಳು ಹಾಗೂ ಇತರ ಜೀವಿಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.

ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ಕ್ಲೀನ್‌ ಕುಂದಾಪುರ ಸ್ವಯಂ ಸೇವಕರು (ETV Bharat)

ಮರುಬಳಕೆಯಾಗದ ತ್ಯಾಜ್ಯ:ಬಹುತೇಕ ತ್ಯಾಜ್ಯಗಳು ಮರು ಬಳಕೆ ಮಾಡಲಾಗದ ಹಾಗೂ ಮಾರುಕಟ್ಟೆಯಲ್ಲಿ ಕನಿಷ್ಠ ಮೌಲ್ಯವನ್ನು ಹೊಂದದೇ ಇರುವ ತ್ಯಾಜ್ಯವಾಗಿರುವುದರಿಂದ ಒಟ್ಟಾದ ತ್ಯಾಜ್ಯಗಳ ವಿಲೇವಾರಿ ಮಾಡುವುದು ಸ್ವಯಂ ಸೇವಕರಿಗೆ ಸವಾಲಿನ ಕೆಲಸವಾಗಿದೆ. ಸೀಮಿತ ಬೇಡಿಕೆ ಇರುವ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಕಳುಹಿಸುವುದು ಕೂಡ ಆರ್ಥಿಕ ವೆಚ್ಚವನ್ನು ಹೆಚ್ಚು ಮಾಡುತ್ತದೆ.

ಅಸಮರ್ಪಕ ನಿರ್ವಹಣೆಯ ಪರಿಣಾಮ:ಪರಿಸರ ಹಾಗೂ ಕಡಲಿನ ಬಗ್ಗೆ ಆಸಕ್ತಿ ಇರುವ ಒಂದಷ್ಟು ಸ್ವಚ್ಛ ಮನಸ್ಸುಗಳು ಒಗ್ಗೂಡಿದಾಗ, ಕ್ಲೀನ್‌ ಕುಂದಾಪುರ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಅಂತೆಯೇ ಸಾರ್ವಜನಿಕರು, ವ್ಯಾಪಾರಿಗಳು, ತ್ಯಾಜ್ಯ ಸಂಗ್ರಹಿಸುವವರು, ಕಸ ಸಂಗ್ರಹಿಸುವವರು ಮಾರಾಟದಿಂದ ಲಾಭ ಬರದೇ ಇದ್ದರೆ ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದಿಲ್ಲ. ಅದೆಲ್ಲವೂ ಹೀಗೆ ನದಿಯ ಮೂಲಕ ಸಮುದ್ರ ಸೇರುತ್ತದೆ. ಇಲ್ಲದಿದ್ದರೆ ಏಕಾಏಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಪ್ಪಲಿಯಂತಹ ಒಂದೇ ಮಾದರಿಯ ತ್ಯಾಜ್ಯ ಸಂಗ್ರಹವಾಗುವುದು ಕಷ್ಟ ಎಂಬುದು ಸಾರ್ವಜನಿಕರ ಮಾತು.

ಇದನ್ನೂ ಓದಿ:ಗ್ರಾಮೀಣ ಭಾರತದಲ್ಲಿ ಜೀವನ ಮಟ್ಟ ಸುಧಾರಿಸಲಿದೆ ಹೊಸ ತ್ಯಾಜ್ಯ ನಿರ್ವಹಣೆ ತಂತ್ರಜ್ಞಾನ

ABOUT THE AUTHOR

...view details