ಬೆಂಗಳೂರು: ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡುವುದನ್ನು ನಿಲ್ಲಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೃಪಾಂಕ್ ನೀಡದಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ, ಮುಂದಿನ ವರ್ಷದಿಂದ ಕೃಪಾಂಕ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವರ್ಷ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶ ಶೇ.73.40 ಆಗಿದೆ. ಕಳೆದ ವರ್ಷ ಶೇ.83ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 2288 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ ಎಂದರು.
ಅಮೆರಿಕದ ಸಂಸ್ಥೆಯ ಜೊತೆ ಒಡಂಬಡಿಕೆ: ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಅಮೆರಿಕದ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಸಚಿವ ಮಧು ಬಂಗಾರಪ್ಪ ಸಮ್ಮುಖದಲ್ಲಿ ಇಂದು ಅಮೆರಿಕದ ಜೆ-ಪಾಲ್ಸೌತ್ ಏಷಿಯಾ ಸಂಸ್ಥೆಯೊಂದಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, "ಶಿಕ್ಷಣದಲ್ಲಿ ಮಹತ್ವದ ಸುಧಾರಣೆ ಮಾಡಲಾಗುತ್ತಿದೆ. ಗುಣಮಟ್ಟ, ಹೊಸತನ ಮತ್ತು ತಂತ್ರಜ್ಞಾನ ಅಳವಡಿಕೆಗೆ ಜೆ-ಪಾಲ್ ಸಂಸ್ಥೆಯೊಂದಿಗೆ ಒಪ್ಪಂದವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶುರುವಾಗಿರುವ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಚಿಲಿಪಿಲಿ ಪಠ್ಯ ಕ್ರಮವನ್ನು ಹೊಸದಾಗಿ ರೂಪಿಸಲಾಗುವುದು. ಪ್ರಾಯೋಗಿಕವಾಗಿ 6 ಸಾವಿರ ಮಕ್ಕಳಿಗೆ ಚಿಲಿಪಿಲಿ ಯೋಜನೆ ಅನ್ವಯವಾಗಲಿದೆ" ಎಂದು ಹೇಳಿದರು.
"3ರಿಂದ 5ನೇ ತರಗತಿಯ ಮಕ್ಕಳಿಗೆ ಗಣಿತ-ಗಣಕ ಹಾಗೂ 6ರಿಂದ 10ನೇ ತರಗತಿಯ ಮಕ್ಕಳಿಗೆ ಮರುಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ. ಗಣಿತ-ಗಣಕ ಕಾರ್ಯಕ್ರಮದಲ್ಲಿ ಶಿಕ್ಷಕರು, ಮಕ್ಕಳ ಪೋಷಕರ ಮೊಬೈಲ್ಗೆ ಕರೆ ಮಾಡಿ ಪ್ರತಿ ದಿನ 32ರಿಂದ 45 ನಿಮಿಷಗಳವರೆಗೂ ಗಣಿತ ಹೇಳಿಕೊಡಲಿದ್ದಾರೆ. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ" ಎಂದು ತಿಳಿಸಿದರು.
"ಗಣಿತ-ಗಣಕದಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆ ಇರುವ ಪೋಷಕರಿಗೂ ಗಣಿತದ ಜ್ಞಾನ ಹೆಚ್ಚಲಿದ್ದು, ಮಕ್ಕಳಿಗೆ ಮನೆಯಲ್ಲಿ ಮತ್ತಷ್ಟು ಕಲಿಕೆಗೆ ಪ್ರೋತ್ಸಾಹಿಸಲು ಅನುಕೂಲವಾಗಲಿದೆ. ಕಲಿಕಾ ಗುಣಮಟ್ಟ ಕಡಿಮೆ ಇರುವ ಮಕ್ಕಳಿಗಾಗಿ ಮರು ಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ಅವರ ಹಿಂದಿನ ಪಠ್ಯ ಕ್ರಮಗಳನ್ನು ಪುನರ್ಮನನ ಮಾಡಿಕೊಡಲಾಗುವುದು. ಇದರಿಂದ ಹಳೆಯ ಕಲಿಕೆ ಹಾಗೂ ಹೊಸ ಜ್ಞಾನದ ಜೊತೆ ಸುಧಾರಣೆ ಕಾಣುವ ನಿರೀಕ್ಷೆಯಿದೆ. ಪ್ರಾಯೋಗಿಕವಾಗಿ 9 ಸಾವಿರ ಶಾಲೆಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ" ಎಂದರು.