ಕರ್ನಾಟಕ

karnataka

2015ರ ಪೂರ್ವದಲ್ಲಿ ಕಟ್ಟಡ ನಿರ್ಮಿಸಿಕೊಂಡು ವಾಸಿಸುತ್ತಿರುವ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ : ಸಚಿವ ಕೃಷ್ಣಬೈರೇಗೌಡ

By ETV Bharat Karnataka Team

Published : Feb 19, 2024, 5:29 PM IST

ರಾಜ್ಯದಲ್ಲಿ ಭೂ ಮಂಜೂರಾತಿಗಾಗಿ 9.85 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸಚಿವ ಕೃಷ್ಣಭೈರೇಗೌಡ
ಸಚಿವ ಕೃಷ್ಣಭೈರೇಗೌಡ

ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ 2015ರ ಪೂರ್ವದಲ್ಲಿ ವಾಸದ ಮನೆ ಕಟ್ಟಡ ನಿರ್ಮಿಸಿಕೊಂಡು ವಾಸಿಸುತ್ತಿರುವ ಮನೆಗಳನ್ನು ಸಕ್ರಮಗೊಳಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಪ್ರಶ್ನೆ ಕೇಳಿ, 94 ಸಿ ಮತ್ತು 94 ಸಿಸಿ ಕಾನೂನಿನಡಿ ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು, 2016, 2018, 2019, 2021, 2022 ರ ಮಾರ್ಚ್ 31ರೊಳಗೆ 5 ಬಾರಿ ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಮಾಹಿತಿ ಕೊರತೆ ಎಂದು ಹಲವು ಬಾರಿ ಕಾಲಾವಕಾಶ ನೀಡಿದ್ದೇವೆ ಎಂದರು.

ಔಚಿತ್ಯ ತಿರಸ್ಕಾರಗೊಳ್ಳುವ ಸಾಧ್ಯತೆ : ನ್ಯಾಯಾಲಯಗಳು ಒಂದು ಬಾರಿ ಎಂದು ಎಷ್ಟು ಬಾರಿ ಕಾಲಾವಾಕಾಶ ನೀಡುತ್ತೀರಾ? ಎಂದು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಕಾಲಾವಕಾಶ ನೀಡುವ ಮೂಲಕ ಅಕ್ರಮಗಳನ್ನು ಸಕ್ರಮಗೊಳಿಸಲಾಗುತ್ತಿದೆ ಎಂಬ ಆಕ್ಷೇಪವು ನ್ಯಾಯಾಲಯದಿಂದ ಬಂದಿದೆ. ವಕೀಲರು ನನಗೆ ನೀಡಿರುವ ಮಾಹಿತಿ ಪ್ರಕಾರ, ಸುಪ್ರೀಂಕೋರ್ಟ್ ತಡೆ ನೀಡಿದ್ದ ಅಕ್ರಮ-ಸಕ್ರಮ ಕಾಯ್ದೆ ವಿಚಾರಣೆ ಮಹತ್ವದ ಘಟ್ಟ ತಲುಪಿದೆ. ಬಹುತೇಕ ಕಾಯ್ದೆಯ ಔಚಿತ್ಯ ತಿರಸ್ಕಾರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.

94 ಸಿ ಅಡಿ ರಾಜ್ಯಾದ್ಯಂತ 6,26,058 ಜನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1.63 ಲಕ್ಷ ಅರ್ಜಿಗಳು ಮಂಜೂರಾಗಿವೆ. 4,12,056 ಅರ್ಜಿಗಳು ಅನರ್ಹ ಎಂದು ತಿರಸ್ಕರಿಸಲಾಗಿದೆ. 94 ಸಿಸಿ ಅಡಿ 2,12,727 ಅರ್ಜಿಗಳು ಸ್ವೀಕಾರವಾಗಿದ್ದು, 69,236 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 1,28,531 ಅರ್ಜಿಗಳನ್ನು ಅನರ್ಹ ಎಂದು ತಿರಸ್ಕರಿಸಲಾಗಿದೆ. ಬಾಕಿ 50 ಸಾವಿರ ಉಳಿದಿದ್ದು, ಅವುಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ತಿರಸ್ಕಾರಗೊಂಡಿರುವುದರಲ್ಲಿ ಪಕ್ಷಭೇದವಿಲ್ಲ. ಬಿಜೆಪಿ ಸರ್ಕಾರವೇ ಹೆಚ್ಚು ಅರ್ಜಿ ತಿರಸ್ಕರಿಸಿದೆ. ಅರ್ಜಿ ಸಲ್ಲಿಸಿದವರಲ್ಲಿ ಮತ್ತು ಮಂಜೂರು ಪಡೆದವರಲ್ಲಿ ಅನರ್ಹರೇ ಹೆಚ್ಚಿದ್ದಾರೆ. ಇತ್ತೀಚೆಗೆ ಪರಿಶೀಲನೆ ವೇಳೆ ನೆಲಮಂಗಲದಲ್ಲಿ ಒಂದು ನಿಯಮ ಬಾಹಿರ ಮಂಜೂರಾತಿ ಕಂಡುಬಂದಿತ್ತು. ಇದಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರರನ್ನು ಅಮಾನತುಪಡಿಸಿದ್ದಾಗಿ ಹೇಳಿದರು.

2015ರವರೆಗೆ ಮನೆ ನಿರ್ಮಿಸಿಕೊಂಡವರಿಗೆ ಮಂಜೂರಾತಿ ನೀಡಬೇಕು ಎಂಬ ನಿಯಮ ಇದೆ. ಈಗ ಶಾಸಕರು 2019 ರವರೆಗೂ ಮನೆ ನಿರ್ಮಿಸಿದವರಿಗೆ ಅವಕಾಶ ಮಾಡಿಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ 2015 ರ ನಂತರವೂ ಉದ್ದೇಶಪೂರಕವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ ಅಲ್ಲವೇ?. ಈ ರೀತಿ ಎಷ್ಟು ಬಾರಿ ಅವಕಾಶ ನೀಡುವುದು ಎಂದು ಪ್ರಶ್ನಿಸಿದರು. ಈ ಬಾರಿ ಹಲವು ಶಾಸಕರು ಮತ್ತೊಂದು ಅವಕಾಶ ನೀಡುವಂತೆ ಹೇಳಿದ್ದಾರೆ ಎಂದು ಪುನರ್ ಉಚ್ಚರಿಸಿದರು.

ಭೂ ಮಂಜೂರಾತಿಗೆ 9.85 ಲಕ್ಷ ಮಂದಿ ಅರ್ಜಿ : ರಾಜ್ಯದಲ್ಲಿ ಭೂ ಮಂಜೂರಾತಿಗಾಗಿ 9.85 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಒಟ್ಟು 54 ಲಕ್ಷ ಎಕರೆ ಮಂಜೂರಾತಿಗೆ ಮನವಿ ಮಾಡಿದ್ದಾರೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಪಿ ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದರು.

ಫಾರಂ ನಂ. 50, 53 ಮತ್ತು 57 ರ ಅಡಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮೀಕರಣ ಕೋರಿ ರಾಜ್ಯಾದ್ಯಂತ 9.85 ಲಕ್ಷ ಅರ್ಜಿಗಳು ಬಂದಿವೆ. ಅದರಲ್ಲಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಒಂದು ವೇಳೆ ಶಾಸಕರು ಹೇಳಿದಂತೆ ಅರ್ಹರು ಭೂ ಮಂಜೂರಾತಿಯಿಂದ ವಂಚಿತರಾಗಿದ್ದರೆ, ಅರ್ಜಿಗಳ ಪುನರ್ ಪರಿಶೀಲನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯಾದ್ಯಂತ 138 ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಲಾಗಿದೆ. ಅರ್ಜಿ ಸಲ್ಲಿಕೆದಾರರ ಬೇಡಿಕೆಯನ್ನು ಪರಿಗಣಿಸಿದರೆ 54 ಲಕ್ಷ ಎಕರೆ ಭೂಮಿಯನ್ನು ಫಲಾನುಭವಿಗಳಿಗೆ ಮಂಜೂರು ಮಾಡಬೇಕು. ಆದರೆ, ಅಷ್ಟು ಭೂಮಿ ನಮ್ಮಲ್ಲಿ ಲಭ್ಯವಿಲ್ಲ. ಅರ್ಜಿದಾರರಲ್ಲಿ ಅನರ್ಹರ ಸಂಖ್ಯೆ ಹೆಚ್ಚಿದೆ. 2005ರ ವೇಳೆಗೆ 18 ವರ್ಷ ತುಂಬಿದವರು ಅರ್ಜಿ ಸಲ್ಲಿಸಬೇಕು ಎಂದು ನಿಯಮವಿದೆ.

ಆದರೆ ಆಗಿನ್ನೂ ಹುಟ್ಟದೇ ಇದ್ದವರು 18 ವರ್ಷ ಆಗಿದೆ ಎಂದು ಈಗ ಅರ್ಜಿ ಸಲ್ಲಿಸಿದ್ದಾರೆ. ನಗರ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಭೂಮಿಯನ್ನು ಸಾಗುವಳಿ ಸಕ್ರಮೀಕರಣದಡಿ ಪರಿಗಣಿಸಲು ಸಾಧ್ಯವಿಲ್ಲ. ಬಡವರಿಗಾಗಿ ರೂಪಿಸಲಾದ ಯೋಜನೆ ದುರುಪಯೋಗಗೊಳ್ಳುತ್ತದೆ. ಬಹಳಷ್ಟು ಮಂದಿ ದುರುದ್ದೇಶ ಪೂರಕವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು.

ಉತ್ತರ ನೀಡಲು ಸರ್ಕಾರ ಸಿದ್ಧವಿದೆ : ಬಿಜೆಪಿ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ, ಸುರೇಶ್​ಗೌಡ ಸೇರಿದಂತೆ ಅನೇಕರು ಈ ವಿಚಾರದ ಕುರಿತಂತೆ ವಿಷಯ ಪ್ರಸ್ತಾಪಿಸಿದಾಗ ಸಭಾಧ್ಯಕ್ಷ ಯು. ಟಿ ಖಾದರ್, ಇದು ಗಂಭೀರ ವಿಚಾರ ಎಂದು ಒಪ್ಪಿಕೊಂಡರು. ಸಚಿವ ಕೃಷ್ಣಬೈರೇಗೌಡ ಕಂದಾಯ ಇಲಾಖೆಯ ಮೇಲಿನ ಚರ್ಚೆಗೆ 2 ದಿನಗಳ ಕಾಲಾವಕಾಶ ನಿಗದಿ ಮಾಡಿದರು. ಸದಸ್ಯರ ಅಭಿಪ್ರಾಯ ಆಲಿಸಲು ಮತ್ತು ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ಜೊತೆಗೆ ಬಾಕಿ ಇರುವ ಜಿಲ್ಲೆಗಳಿಂದ ವರದಿ ಪಡೆದು ಈ ತಿಂಗಳ ಅಂತ್ಯದೊಳಗೆ ಎಲ್ಲಾ ಕ್ಷೇತ್ರಗಳಲ್ಲೂ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಲಾಗುವುದು. ಈ ಹಿಂದೆ ಯಾವ ಸರ್ಕಾರಗಳು 6 ತಿಂಗಳ ಅವಧಿಯಲ್ಲಿ 130 ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿದ ಉದಾಹರಣೆಗಳಿಲ್ಲ ಎಂದು ಹೇಳಿದರು. ಸದರಿ ವಿಚಾರ ಕುರಿತು ಅಧಿವೇಶನ ಮುಗಿದ ನಂತರ ಸಮಯ ನಿಗದಿ ಮಾಡಲಾಗುವುದು. ಆಗ ಆಸಕ್ತರು ಬಂದು ಚರ್ಚೆ ಮಾಡಿ ಎಂದು ಸಭಾಧ್ಯಕ್ಷರು ಹೇಳಿದರು.

ಇದನ್ನೂ ಓದಿ :ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಭೂಮಿಯ ಪರಿಷ್ಕೃತ ಮಾರ್ಗಸೂಚಿ ದರ ಜಾರಿ: ಸಚಿವ ಕೃಷ್ಣ ಬೈರೇಗೌಡ

ABOUT THE AUTHOR

...view details