ಕರ್ನಾಟಕ

karnataka

ETV Bharat / state

ಪಶುಸಂಗೋಪನಾ ಇಲಾಖೆಯ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸಿರುವುದಕ್ಕೆ ಕೋಟಾ ಖಂಡನೆ

ರಾಜ್ಯ ಸರ್ಕಾರ ಗೋಶಾಲೆಗಳನ್ನು ನಿರ್ಮಾಣ ಮಾಡುತ್ತಿಲ್ಲ. ಗೋವುಗಳಿಗೆ ಮೇವು, ನೀರು ಕೊಡುತ್ತಿಲ್ಲ. ಇದರ ನಡುವೆ ಪಶುಸಂಗೋಪನಾ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವರ್ಗಾಯಿಸಿದ್ದಾರೆ. ಈ ನಿರ್ಧಾರ ಸರಿಯಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

By ETV Bharat Karnataka Team

Published : Feb 29, 2024, 4:19 PM IST

Updated : Feb 29, 2024, 10:40 PM IST

Kota Srinivasa Pujari
ಕೋಟಾ ಶ್ರೀನಿವಾಸ ಪೂಜಾರಿ

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು:ಪಶುಸಂಗೋಪನೆ ಇಲಾಖೆಯ ಜಾಗವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವರ್ಗಾಯಿಸಿ ಆದೇಶಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಪಶು ಸಂಗೋಪನಾ ಇಲಾಖೆ ಸೇರಿದ ಹಲವಾರು ವರ್ಷಗಳಿಂದ ಗೋವುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಚಿಕಿತ್ಸಾ ನೀಡುತ್ತಿರುವ ಪಶು ಚಿಕಿತ್ಸಾಲಯ ಕೇಂದ್ರದ ಎರಡು ಎಕರೆ ಜಾಗವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿರುವುದು ಅತ್ಯಂತ ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಯಾವ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂಬುದರ ಕುರಿತು ಅವರಿಗೆ ನಿರ್ದಿಷ್ಟ ಆಲೋಚನೆಯಿಲ್ಲ. ಚಾಮರಾಜಪೇಟೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಾಗೂ ಹತ್ತಾರು ಪ್ರದೇಶಗಳಿಗೆ ಬೇಕಾಗುವ ಅನುಕೂಲಗಳನ್ನು ಒಳಗೊಂಡಿರುವ ಪಶುಸಂಗೋಪನಾ ಆಸ್ಪತ್ರೆಯ ಎರಡು ಎಕರೆ ಜಾಗವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವರ್ಗಾಯಿಸುವ ಬದಲು ಸರ್ಕಾರದ ಕಾಯ್ದಿರಿಸಿದ ಜಾಗವನ್ನು ಪರಭಾರೆ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪಶುಸಂಗೋಪನೆ ಇಲಾಖೆಯ ಜಾಗವನ್ನು ವರ್ಗಾಯಿಸುವುದು ಸರಿಯಲ್ಲ ಎಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರ ಗೋಶಾಲೆಗಳನ್ನು ನಿರ್ಮಾಣ ಮಾಡುತ್ತಿಲ್ಲ. ಗೋವುಗಳಿಗೆ ನೀರು, ಮೇವು ಕೊಡಿ ಅಂದ್ರೂ ಒದಗಿಸುತ್ತಿಲ್ಲ. ಅವುಗಳಿಗೆ ಮೀಸಲಿರಿಸಿದ ಜಾಗವನ್ನೂ ಪರಬಾರೆ ಮಾಡುತ್ತಿರುವ ಹಾಗೂ ಬೇರೆ ಇಲಾಖೆಗೆ ನೀಡುತ್ತಿರುವ ಕೆಟ್ಟ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿರುವುದನ್ನು ಖಂಡಿಸುತ್ತೇನೆ. ಇಂದು ಸದನದೊಳಗೆ ಪ್ರಸ್ತಾಪ ಮಾಡುವ ವಿಚಾರವೂ ಇದೆ ಎಂದು ತಿಳಿಸಿದರು.

ಚಾಮರಾಜಪೇಟೆಯ ಗೂಡ್‌ಶೆಡ್‌ ರಸ್ತೆಯಲ್ಲಿರುವ ಪಶುಸಂಗೋಪನಾ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವರ್ಗಾಯಿಸಿ‌ ಆದೇಶಿಸಿದೆ. ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಜಾಗವನ್ನು ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೇಳಿತ್ತು.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಾಯಕರು

Last Updated : Feb 29, 2024, 10:40 PM IST

ABOUT THE AUTHOR

...view details