ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮನುಷ್ಯರು ತಲೆ ತಗ್ಗಿಸುವ ಕೆಲಸ ನಡೆದಿದೆ: ಸಚಿವ ಕೆ.ಎನ್.ರಾಜಣ್ಣ - K N Rajanna

ಡಾ.ಸೂರಜ್ ರೇವಣ್ಣ ವಿರುದ್ಧದ ಯುವಕನ ಮೇಲಿನ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

By ETV Bharat Karnataka Team

Published : Jun 23, 2024, 2:32 PM IST

Minister KN Rajanna
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ (ETV Bharat)

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ (ETV Bharat)

ಬಾಗಲಕೋಟೆ: "ಹಾಸನದಲ್ಲಿ ಮನುಷ್ಯರು ತಲೆ ತಗ್ಗಿಸುವ ಕೆಲಸ ನಡೆದಿದೆ" ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಬಾಗಲಕೋಟೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, "ಸಂತ್ರಸ್ತರಿಗೆ ಆಚೆ ಬಂದು ಹೇಳೋಕೆ ಧೈರ್ಯ ಇರಲಿಲ್ಲ. ನಾನು ಉಸ್ತುವಾರಿ ಸಚಿವನಾದ ಬಳಿಕ ಧೈರ್ಯ ತುಂಬಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆಯಲ್ಲಿ ನಿಮ್ಮ ಜೊತೆ ನಾವಿರುತ್ತೇವೆ ಎಂದಿದ್ದೇವೆ. ಹೀಗೆ ಧೈರ್ಯ ತುಂಬಿದ ಪರಿಣಾಮ‌ ಸಂತ್ರಸ್ತರು ಒಬ್ಬೊಬ್ಬರೇ ಆಚೆ ಬಂದು ಹೇಳಿಕೆ ನೀಡುತ್ತಿದ್ದಾರೆ" ಎಂದು ತಿಳಿಸಿದರು.

"ಈ ಪ್ರಕರಣಗಳು ನಿನ್ನೆ ಮೊನ್ನೆಯದ್ದಲ್ಲ. ಬಹಳಷ್ಟು ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಆಗ ಸಂತ್ರಸ್ತರಿಗೆ ದನಿ ಎತ್ತುವ ಧೈರ್ಯ ಇರಲಿಲ್ಲ. ಈಗ ಧೈರ್ಯವಾಗಿ ಮುಂದೆ ಬರುತ್ತಿದ್ದಾರೆ. ಕಾನೂನು ತನ್ನ ಕೆಲಸ ಮಾಡುತ್ತಿದೆ" ಎಂದರು.

ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಡಿ ಎಂಎಲ್​ಸಿ ಸೂರಜ್ ರೇವಣ್ಣ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, "ಕಾನೂನಾತ್ಮಕವಾಗಿ ಏನು ನಡೆಯಬೇಕೋ ಅದು ನಡೆಯುತ್ತದೆ. ಯಾರೂ ಕೂಡಾ ಹಸ್ತಕ್ಷೇಪ, ಒತ್ತಡ ಹಾಕಲು ನಾವು ಬಿಡಲ್ಲ. ತನಿಖಾಧಿಕಾರಿಗಳು ತನಿಖೆ ಮಾಡುತ್ತಾರೆ. ಸರ್ಕಾರದ ಮೇಲಾಗಲಿ, ಎಸ್ಐಟಿ, ಅಧಿಕಾರಿಗಳ ಮೇಲಾಗಲಿ ನಾವು ಒತ್ತಡ ಹಾಕಲ್ಲ. ತನಿಖಾಧಿಕಾರಿಗಳು ಸ್ವತಂತ್ರರಿದ್ದಾರೆ. ಕಾನೂನು ಪ್ರಕಾರ, ಕ್ರಮ ಕೈಗೊಳ್ಳಬೇಕೆಂಬುದೇ ನಮ್ಮ ಉದ್ದೇಶ" ಎಂದು ಹೇಳಿದರು.

ಸೂರಜ್, ಪ್ರಜ್ವಲ್ ಪ್ರಕರಣದಿಂದ ದೇವೇಗೌಡರಿಗೆ ಈ ವಯಸ್ಸಿನಲ್ಲಿ ಎಷ್ಟು ಆಘಾತ, ನೋವಾಗಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿ, "ಇದೊಂದು ದುರದೃಷ್ಟಕರ ವಿಚಾರ. ಇಳಿ ವಯಸ್ಸಿನಲ್ಲಿ ಮಾನಸಿಕವಾಗಿ ಹಿಂಸೆ ಆಗುತ್ತಿರಬಹುದು" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕರ ಅಪಸ್ವರಕ್ಕೆ, "ಇವೆಲ್ಲವೂ ಮಾಧ್ಯಮಗಳ ಸೃಷ್ಠಿ. ಸಂಪುಟ ಸಭೆಯಲ್ಲಿ ಯಾರೊಬ್ಬರೂ ಕೂಡಾ ಗ್ಯಾರಂಟಿ ನಿಲ್ಲಿಸಬೇಕೆಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಸಿಎಂ ಕೂಡಾ ಗ್ಯಾರಂಟಿ ನಿಲ್ಲಿಸುವುದಿಲ್ಲ. ಬಡವರಿಗೆ ನೀಡಿದ ಸೌಲಭ್ಯಗಳು ಕುಂಠಿತವಾಗಲ್ಲ, ಕಡಿತವೂ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ" ಎಂದರು.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಈವರೆಗಿನ ಪ್ರಮುಖ ಬೆಳವಣಿಗೆಗಳು - Renukaswamy Murder Case

ನೀವು ಡಿಸಿಎಂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ನಾನು ಆಕಾಂಕ್ಷಿಯಲ್ಲ. ಇನ್ಮುಂದೆ ಯಾವ ಚುನಾವಣೆಯಲ್ಲಿಯೂ ನಿಲ್ಲುವವನೂ ಅಲ್ಲ. ಅಧಿಕಾರ ಹಂಚಿಕೊಂಡಾಗ ಎಲ್ಲಾ ಸಮುದಾಯಗಳಿಗೂ ಕೂಡ ಆ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಬರುತ್ತದೆ. ಆದ್ರೆ ಯಾರೋ ಕೆಲವೇ ಜನರು ಅಧಿಕಾರ ಇಟ್ಟುಕೊಂಡು, ಬೇರೆಯವರಿಗೆ ಅಧಿಕಾರ ಇಲ್ಲದಿದ್ದಾಗ ಆ ಪಕ್ಷದ ಬಗ್ಗೆ ಪ್ರೀತಿ ಕಡಿಮೆಯಾಗುತ್ತದೆ. ಆ ದೃಷ್ಟಿಯಿಂದ ‌ನಾನು ಪ್ರತಿಪಾದಿಸಿದ್ದೆ. ಲಿಂಗಾಯತ ಸಮುದಾಯ, ಎಸ್​ಸಿ-ಎಸ್​ಟಿ ಅಲ್ಪಸಂಖ್ಯಾತ ಸಮುದಾಯ ಎಂಬಂತೆ ಈ ಸಮುದಾಯಗಳಿಗೆ ಒಬ್ಬರು ಡಿಸಿಎಂ ಮಾಡಬೇಕು. ಹಿಂದೆ‌ ಬಿಜೆಪಿಯವರೂ ಮಾಡಿರುವ ಉದಾಹರಣೆಗಳಿವೆ" ಎಂದು ಹೇಳಿದರು.

ಇದನ್ನೂ ಓದಿ:ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ಬಂಧನ - Suraj Revanna Arrest

"ಡಿಸಿಎಂ ಮಾಡಿದಾಕ್ಷಣ ಹೊಸದಾಗಿ ಬೇರೆ ಯಾವ ಸೌಲಭ್ಯವೂ ಇರುವುದಿಲ್ಲ. ಕ್ಯಾಬಿನೆಟ್ ಮಂತ್ರಿಗೆ ಏನಿರುತ್ತದೋ ಅವರಿಗೂ ಅದೇ ಸೌಲಭ್ಯ. ಆದರೆ ನಮ್ಮ‌ ಸಮುದಾಯಕ್ಕೂ ಪ್ರಾತಿನಿಧ್ಯ ದೊರೆತಿದೆ ಎಂಬ ಮನಸ್ಥಿತಿಯಲ್ಲಿ ಇರುತ್ತಾರೆ. ಈ ಮೂಲಕ ಆಯಾ ಸಮುದಾಯದ ಜನರ ಪ್ರೀತಿ ಗಳಿಸಿಕೊಳ್ಳಲು ಇದೊಂದು ಉತ್ತಮ ಸಾಧನ. ಅದಕ್ಕಾಗಿ ನಾನು ಡಿಸಿಎಂ ಮಾಡಬೇಕು ಅಂತ ಹೇಳಿದ್ದೆ. ಮೊನ್ನೆ ಜಮೀರ್, ಸತೀಶ್ ಜಾರಕಿಹೊಳಿ ಕೂಡ ಹೇಳಿದ್ದಾರೆ. ಬಹಳಷ್ಟು ಸಚಿವರ ಸಹಮತವೂ ಇದಕ್ಕಿದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ‌ಬದ್ಧ" ಎಂದು ಸ್ಪಷ್ಟನೆ ನೀಡಿದರು.

ABOUT THE AUTHOR

...view details