ಬೆಂಗಳೂರು:ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಕಂಠೇಶ್ವರನಗರದ ಮನೆಯೊಂದರಲ್ಲಿ ನಡೆದ ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮಹಿಳೆಯದ್ದು ಆತ್ಮಹತ್ಯೆಯಲ್ಲ, ಪತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪತ್ನಿ ಹೇಮಲತಾ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಪತಿ ಶಿವಶಂಕರ್ ಹಾಗೂ ಈತನ ಸ್ನೇಹಿತ ಕೊಲೆ ಆರೋಪಿ, ನಗರದ ಹುಣಸಮಾರನಹಳ್ಳಿಯ ನಿವಾಸಿ ವಿನಯ್ ಎಂಬವನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ವಿನಯ್ ಈ ಹಿಂದೆ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಆರೋಪದಡಿ ಜೈಲಿಗೆ ಹೋಗಿ ಬಂದಿರುವುದು ಬಹಿರಂಗವಾಗಿದೆ.
ಪೊಲೀಸರಿಗೆ ಮೂಡಿತ್ತು ಅನುಮಾನ:ಫೆಬ್ರವರಿ 5ರಂದು ಪ್ರೇಮಲತಾ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ಪತಿ ಶಿವಶಂಕರ್ ಮಾಹಿತಿ ನೀಡಿದ್ದ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಸೇರಿದಂತೆ ಸಿನ್ ಆಫ್ ಕ್ರೈಂ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯಲ್ಲ ಎಂಬುದು ರುಜುವಾತಾಗಿತ್ತು. ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದರು.
ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವಶಂಕರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಎರಡು ದಿನವಾದರೂ ಸುಪಾರಿ ಹತ್ಯೆ ಸಂಗತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಮನೆಯನ್ನು ಪರಿಶೀಲಿಸಿದಾಗ ಬೆಡ್ ರೂಮ್ ಸೇರಿದಂತೆ ಮೂಲೆಮೂಲೆಯಲ್ಲಿ ಸಿಸಿಟಿವಿ ಹಾಕಿಕೊಂಡಿದ್ದ. ಸಂಪೂರ್ಣವಾಗಿ ಪರಿಶೀಲನೆ ಜೊತೆಗೆ, ಏರಿಯಾ ಸುತ್ತಮುತ್ತಲಿನ ಸುಮಾರು 200 ಸಿಸಿಟಿವಿ ಕ್ಯಾಮರಾಗಳನ್ನು ಶೋಧಿಸಿದಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಬಗ್ಗೆ ಶಿವಶಂಕರ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಆತ ತನ್ನ ಸ್ನೇಹಿತ ವಿನಯ್ ಎಂದು ಒಪ್ಪಿಕೊಂಡಿದ್ದ. ಅದರ ಮೇರೆಗೆ ವಿನಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಗೆ ಸ್ನೇಹಿತ ಶಿವಶಂಕರ್ ಸುಪಾರಿ ನೀಡಿರುವುದನ್ನು ಬಾಯ್ಬಿಟ್ಟಿದ್ದಾನೆ.