ಬೆಂಗಳೂರು : ''ದೆಹಲಿಯಲ್ಲಿ ಈ ಹಿಂದೆಯೂ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕಾಗಿ ರಚನೆಯಾದ ಪಕ್ಷವಲ್ಲ. ಅದು ಜನಸೇವೆಗಾಗಿ, ಸ್ವಾತಂತ್ರ್ಯಕ್ಕಾಗಿ ರೂಪುಗೊಂಡ ಆಂದೋಲನ'' ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಕಾವೇರಿ ಆಸ್ಪತ್ರೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ಸ್ವೀಕರಿಸಿ ಮಾತನಾಡಿದ ಅವರು, ದೆಹಲಿ ಚುನಾವಣೆ ಕುರಿತಂತೆ ಮತಗಟ್ಟೆ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿ, ''ನಾವು ಅಧಿಕಾರದಲ್ಲಿದ್ದರೂ ಜನ ಸೇವೆ ಮಾಡುತ್ತೇವೆ. ಪ್ರತಿಪಕ್ಷದಲ್ಲಿದ್ದರೂ ಜನರಿಗಾಗಿ ಹೋರಾಟ ಮಾಡುತ್ತೇವೆ'' ಎಂದರು.
![CAUVERY HOSPITA DONATES AMBULANCE](https://etvbharatimages.akamaized.net/etvbharat/prod-images/06-02-2025/kn-bng-01-minister-ishwar-khandre-talk-script-7208083_06022025142052_0602f_1738831852_177.jpg)
''ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯವಾಣಿಗೆ ಯಾವುದೇ ಬೆಲೆ ಇಲ್ಲ. ಬಿಜೆಪಿಯ ಆಂತರಿಕ ಜಗಳ ಹಾದಿ, ಬೀದಿಗೆ ಬಂದಿದ್ದು, ಅವಾಚ್ಯ ಶಬ್ದಗಳಲ್ಲಿ ಬೈದಾಡಿಕೊಳ್ಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?'' ಎಂದು ಪ್ರಶ್ನಿಸಿದರು.
ಕಾವೇರಿ ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಕೊಡುಗೆ : ''ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಕೊಡುಗೆಯಾಗಿ ಬಂದಿರುವ ಆಂಬ್ಯುಲೆನ್ಸ್, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಪ್ರಯೋಜನ ಒದಗಿಸಲಿದೆ. ತುರ್ತು ಆರೋಗ್ಯ ಸಂದರ್ಭದಲ್ಲಿ ಸ್ಥಳೀಯ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಿಗೆ, ಉದ್ಯಾನದ ಸಿಬ್ಬಂದಿಗೆ ಮತ್ತು ಪ್ರವಾಸಿಗರಿಗೆ ಈ ಆಂಬ್ಯುಲೆನ್ಸ್ ನೆರವು ಲಭಿಸುವಂತಾಗಬೇಕು'' ಎಂದು ಖಂಡ್ರೆ ಹೇಳಿದರು.
''ಬನ್ನೇರುಘಟ್ಟ ಬೆಂಗಳೂರು ಬಳಿಯೇ ಇರುವ ದೊಡ್ಡ ಕಾನನ ಪ್ರದೇಶವಾಗಿದ್ದು, 1970ರಲ್ಲಿ ಉದ್ಯಾನ ಸ್ಥಾಪಿಸಲಾಯಿತು. 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು. ಪ್ರಸ್ತುತ ಇಲ್ಲಿ ಮೃಗಾಲಯ, ಚಿಟ್ಟೆ ಪಾರ್ಕ್, ಕರಡಿ ಸಫಾರಿ, ಹುಲಿ ಸಫಾರಿ, ಸಿಂಹ ಸಫಾರಿ ಇದ್ದು, ಇತ್ತೀಚೆಗೆ ತಾವೇ ಚಿರತೆ ಸಫಾರಿಯನ್ನೂ ಉದ್ಘಾಟಿಸಿದ್ದು, ಇದು ಪ್ರವಾಸಿಗರಿಗೆ ಜನಾಕರ್ಷಣೆ ಕೇಂದ್ರವಾಗಿದೆ'' ಎಂದು ತಿಳಿಸಿದರು.
ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ಅಂಬ್ಯುಲೆನ್ಸ್ : ''ರಾಷ್ಟ್ರೀಯ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ತುರ್ತು ಆರೋಗ್ಯ ಸೇವೆ ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆ ತರಲು ಆಂಬ್ಯುಲೆನ್ಸ್ ವಾಹನದ ಅಗತ್ಯವಿತ್ತು. ಅದನ್ನು ಮನಗಂಡು ಕಾವೇರಿ ಆಸ್ಪತ್ರೆಯವರು ಇಂದು ಒಂದು ಆಂಬ್ಯುಲೆನ್ಸ್ ಅನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ನೀಡಿದ್ದಾರೆ'' ಎಂದು ಸಚಿವರು ಅಭಿನಂದಿಸಿದರು.
ಕಾವೇರಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ವಿಜಯಭಾಸ್ಕರನ್, ಉಪಾಧ್ಯಕ್ಷ ವಿಲ್ಫ್ರೆಡ್ ಸ್ಯಾಮ್ಸನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಬೆಂಗಳೂರಿನ ಕಾವೇರಿ ಆಸ್ಪತ್ರೆ ಸಮೂಹ ಬನ್ನೇರುಘಟ್ಟ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ವಾಹನವನ್ನು ಇಲಾಖೆಯ ಪರವಾಗಿ ಸ್ವೀಕರಿಸಿದ ಸಚಿವ ಖಂಡ್ರೆ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ಟಿಬಿ ಡ್ಯಾಂನಿಂದ ಮಾರ್ಚ್ ಅಂತ್ಯದವರೆಗೆ ಮಾತ್ರ ಬೆಳೆಗಳಿಗೆ ನೀರು: ಅಲ್ಪಾವಧಿ ಬೆಳೆ ಬೆಳೆಯುವಂತೆ ಅಧಿಕಾರಿಗಳ ಸಲಹೆ