ಕರ್ನಾಟಕ

karnataka

ಎಡೆಬಿಡದ ಮಳೆಗೆ ತತ್ತರಿಸಿದ ಶೃಂಗೇರಿ; ಡ್ರೋನ್ ಕ್ಯಾಮರಾದಲ್ಲಿ ನೀರಿನ ಆರ್ಭಟ ಸೆರೆ - heavy rainfall in sringeri

By ETV Bharat Karnataka Team

Published : Aug 4, 2024, 9:11 PM IST

Updated : Aug 4, 2024, 11:02 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನೂರಾರು ಎಕರೆ ಹೊಲ-ಗದ್ದೆ ತೋಟಗಳು ಜಲಾವೃತವಾಗಿವೆ.

Chikkamagaluru
ಚಿಕ್ಕಮಗಳೂರು (ETV Bharat)

ಎಡೆಬಿಡದ ಮಳೆಗೆ ತತ್ತರಿಸಿದ ಶೃಂಗೇರಿ (ETV Bharat)

ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆ ಮುಂದುವರೆದಿದೆ. ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಶೃಂಗೇರಿಯಲ್ಲಿನ ಜನ ವರುಣನ ಆರ್ಭಟದಿಂದ ಅಕ್ಷರಶಃ ಕಂಗಾಲಾಗಿದ್ದಾರೆ.

ತುಂಗೆಯ ಅಬ್ಬರಕ್ಕೆ ನೂರಾರು ಎಕರೆ ಹೊಲ-ಗದ್ದೆ-ತೋಟಗಳು ಜಲಾವೃತವಾಗಿವೆ. ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಗಾಂಧಿ ಮೈದಾನವೂ ಜಲಾವೃತವಾಗಿದೆ. ಶೃಂಗೇರಿ ದೇಗುಲದ ಕಪ್ಪೆಶಂಕರ ನಾರಾಯಣ ದೇಗುಲ, ಗುರುಗಳ ಸಂಧ್ಯಾ ವಂದನೆ ಮಂಟಪವೂ ಜಲಾವೃತವಾಗಿದೆ. ಅನಾಹುತದ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಸಿರು ಮಿಶ್ರಿತ ನೀರು ಹರಿದು ಹೋಗುತ್ತಿದೆ. ಈ ವರ್ಷದ ಮಳೆಯ ಅಬ್ಬರ ನೋಡಿ ಮಲೆನಾಡು ಭಾಗದ ಜನರು ಭಯಭೀತರಾಗಿದ್ದಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಒಂದು ಕಡೆ ಗುಡ್ಡ ಕುಸಿತ, ರಸ್ತೆ ಕುಸಿತ, ತೋಟ ಕುಸಿತ ಸೇರಿದಂತೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ಆದರೆ ಇತ್ತ ಯಾವುದೇ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸುಳಿಯುತ್ತಿಲ್ಲ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಮೇಲೆ ಗುಡ್ಡ ಕುಸಿತದಿಂದ ಸಂಚಾರ ಬಂದ್ : ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ, ಸಾತ್ ಕೊಡಿಗೆ ಸಮೀಪ ಎರಡು ದಿನದ ಹಿಂದೆ ರಸ್ತೆಗೆ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಕೂಡಲೇ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ರಸ್ತೆ ಮೇಲೆ ಮತ್ತಷ್ಟು ಗುಡ್ಡದ ಮಣ್ಣು ಜರುಗಿ ಬೀಳಲು ಪ್ರಾರಂಭಿಸಿದೆ. ಈ ಘಟನೆಯಿಂದಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಶಾಲಾ ವಿದ್ಯಾರ್ಥಿಗಳು, ಸ್ಥಳೀಯರು ಪಟ್ಟಣಕ್ಕೆ ತೆರಳಲು ಪರದಾಟ ನಡೆಸುವಂತಾಗಿದೆ.

ಮಣ್ಣು ತೆರವು ಮಾಡದೆ ಇರುವ ಕಾರಣ ಆ ಭಾಗದ ಜನರು ಅಲ್ಲೇ ಉಳಿಯುವಂತಾಗಿದೆ. ಈ ಭಾಗದ ಜನರು ಯಾವುದೇ ಕೆಲಸ ಕಾರ್ಯವನ್ನು ಮಾಡಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಯಾರಿಗಾದರೂ ಆರೋಗ್ಯ ಕೆಟ್ಟರೂ ಅವರು ಆಸ್ಪತ್ರೆಗೂ ಹೋಗದ ಪರಿಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡದ ಮಣ್ಣು ಬಂದು ಕುಳಿತಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಈ ಸಮಸ್ಯೆಗೆ ಸ್ಪಂದಿಸದೆ ಮಣ್ಣು ತೆರವುಗೊಳಿಸುವ ಕೆಲಸವನ್ನು ಮಾಡುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಮಣ್ಣನ್ನು ತೆರವು ಮಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಕೊಡಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಮಳೆಹಾನಿ: ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ಗಾಗಿ ಸಿಎಂಗೆ ಸಚಿವ ಕೆ.ಜೆ. ಜಾರ್ಜ್ ಮನವಿ - Chikkamagaluru Rain Damage

Last Updated : Aug 4, 2024, 11:02 PM IST

ABOUT THE AUTHOR

...view details