ಬೆಳಗಾವಿ:ಜಿಲ್ಲೆಯಲ್ಲಿ ಜು.29ರವರೆಗೆ ವಾಡಿಕೆಯಂತೆ 141 ಎಂಎಂ ಮಳೆ ಆಗಬೇಕಿತ್ತು. ಆದರೆ, 148 ಎಂಎಂ ಮಳೆ ಆಗಿದ್ದರಿಂದ ಬಿತ್ತನೆ ಮಾಡಿದ್ದ ಭೂಮಿಯಲ್ಲಿನ ಬೆಳೆಗಳಿಗೆ ಗೊಬ್ಬರ ಕಟ್ಟುವುದು, ಕಳೆ ಕೀಳುವುದು ಹಾಗೂ ಎಡೆ ಹೊಡೆಯುವುದರಲ್ಲಿ ರೈತರು ಮಗ್ನರಾಗಿದ್ದಾರೆ. ಇನ್ನು ರೈತರಿಗೆ ನೆರವಾಗುವ ಉದ್ದೇಶದಿಂದ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮುಂದಾಗಿದ್ದಾರೆ.
2024ರ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಯೂನಿವರ್ಸಲ್ ಸೊಂಪೋ ಜನರಲ್ ಇನ್ಶೂರೆನ್ಸ್ ಕಂಪನಿ ಎಂಬ ಸಂಸ್ಥೆ ನೇಮಿಸಲಾಗಿದೆ. ಕೃಷಿ ಬೆಳೆಗಳಿಗೆ ವಿಮಾ ಮೊತ್ತಕ್ಕೆ ಶೇ.2ರಷ್ಟು ಹಾಗೂ ತೋಟಗಾರಿಕೆ ಬೆಳೆಗಳಿಗೆ ವಿಮಾ ಮೊತ್ತಕ್ಕೆ ಶೇ.5ರಷ್ಟು ವಿಮಾ ಕಂತನ್ನು ನಿಗದಿಪಡಿಸಲಾಗಿದೆ. ಅತಿ ಕಡಿಮೆ ದರದಲ್ಲಿ ಕಂತುಗಳನ್ನು ಕಟ್ಟಿಸಿಕೊಂಡು ಪ್ರಕೃತಿ ವಿಕೋಪದಿಂದ ಬೆಳೆಗಳು ಹಾಳಾದರೆ ಹೆಚ್ಚಿನ ಮೊತ್ತದ ಹಣ ರೈತರ ಕೈಗೆ ಸಿಗಲಿದೆ.
ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಾಗಿರುವ ಹೆಸರು, ಸೋಯಾಬೀನ್, ಭತ್ತ, ಗೋವಿನಜೋಳ, ಶೇಂಗಾ, ಉದ್ದು, ಹತ್ತಿ, ಬಟಾಣಿ, ಜೋಳ, ತೊಗರಿ, ರಾಗಿ, ಸಜ್ಜೆ, ಸೂರ್ಯಕಾಂತಿ, ನವನೆ, ಹುರಳಿ, ಬಟಾನೆ, ಆಲೂಗಡ್ಡೆ, ಈರುಳ್ಳಿ, ಅರಿಷಿನ, ಎಲೆಕೋಸು, ಟೊಮೆಟೊ ಸೇರಿದಂತೆ ಒಟ್ಟು ಬೆಳೆಗಳಿಗೆ ವಿಮಾ ಯೋಜನೆಯಡಿ ವಿಮೆ ಸೌಲಭ್ಯ ಅನುಷ್ಠಾನಗೊಳಿಸಲಾಗುತ್ತಿದೆ.
ಬೆಳೆವಿಮೆಗೆ ಪ್ರತಿವರ್ಷ ಜಿಲ್ಲೆಯಲ್ಲಿ 45 ಸಾವಿರ ರೈತರು ನೋಂದಾಯಿಸಿಕೊಳ್ಳುತ್ತಿದ್ದು, ಈ ಬಾರಿ ಜಿಲ್ಲಾದ್ಯಂತ ಈವರೆಗೆ ಕೇವಲ 15 ಸಾವಿರ ರೈತರಷ್ಟೇ ತಮ್ಮ ಬೆಳೆಗಳ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಹೆಸರು ಬೆಳೆಗೆ 9200 ಸಾವಿರ ಹೆಕ್ಟೇರ್ ಪ್ರದೇಶಕ್ಕೆ 3050 ರೈತರು ವಿಮೆ ಮಾಡಿಸಿದ್ದರೆ, 3 ಸಾವಿರ ರೈತರು 3600ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಸೋಯಾಬೀನ್ ಬೆಳೆಗೆ ವಿಮೆ ನೋಂದಾಯಿಸಿಕೊಂಡಿದ್ದಾರೆ. 1619 ರೈತರು ಗೋವಿನಜೋಳದ 1985 ಹೆಕ್ಟೇರ್ ಹಾಗೂ 1960 ರೈತರು 1949 ಹೆಕ್ಟೇರ್ ಪ್ರದೇಶದ ಬೆಳೆಗೆ ವಿಮೆ ಕಂತು ಪಾವತಿಸಿದ್ದಾರೆ. ಬೆಳೆಗಳ ವಿಮೆಗೆ ನೋಂದಾಯಿಸಲು ಜುಲೈ 31ರವರೆಗೆ ರೈತರಿಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯೊಳಗೆ ವಿಮೆ ಕಂತು ಪಾವತಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.