ಗಂಗಾವತಿ(ಕೊಪ್ಪಳ): ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ನಿರೀಕ್ಷೆಯಲ್ಲಿದ್ದ ಪೊಲೀಸರು, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ವಾಹನವನ್ನು ಕೆಲಕಾಲ ತಡೆದು ನಿಲ್ಲಿಸಿದ ಘಟನೆ ನಗರದಲ್ಲಿ ಶನಿವಾರ ರಾತ್ರಿ ನಡೆಯಿತು. ಈ ವೇಳೆ ಶಾಸಕ ರೆಡ್ಡಿ ಕೆಲಹೊತ್ತು ಕಾಯ್ದಿದ್ದಾರೆ. ಬಳಿಕ ವಾಹನವನ್ನು ರಸ್ತೆ ಡಿವೈಡರ್ ಹತ್ತಿಸಿ ಸಿಎಂ ಬರುತ್ತಿದ್ದ ಮಾರ್ಗದಲ್ಲೇ ಹೋಗಲಾಗಿದೆ.
ರಾಯಚೂರು ಪ್ರವಾಸ ಮುಗಿಸಿ ಗಂಗಾವತಿ ಮಾರ್ಗದಿಂದ ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದರು. ಮುಖ್ಯಮಂತ್ರಿಗಳ ವಾಹನ ಬರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಪೊಲೀಸರು, ಸಿಬಿಎಸ್ ವೃತ್ತದ ಸಮೀಪ ಎಲ್ಲ ವಾಹನಗಳನ್ನು ರಸ್ತೆ ಬದಿಯಲ್ಲಿ ತಡೆದು ನಿಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಶಾಸಕ ಜನಾರ್ದನ ರೆಡ್ಡಿ ಅವರಿಗೂ ಕೆಲಕಾಲ ಕಾಯುವಂತಾಗಿತ್ತು.
ವಡ್ಡರಹಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮುಗಿಸಿಕೊಂಡು ಶಾಸಕ ರೆಡ್ಡಿ ನಗರದತ್ತ ಪ್ರಯಾಣ ಮಾಡುತ್ತಿದ್ದರು. ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ನಾಗರಿಕರಂತೆಯೇ ಪೊಲೀಸರ ಸೂಚನೆ ಪಾಲಿಸಿದರು. ಆದರೆ ಕೆಲವು ನಿಮಿಷಗಳ ಕಾಲ ಕಾಯ್ದ ಅವರು, ಬಳಿಕ ತಮ್ಮ ವಾಹನವನ್ನು ರಸ್ತೆ ಡಿವೈಡರ್ ಹತ್ತಿಸಿ, ಕೊಂಡೊಯ್ದರು. ಈ ವೇಳೆ ಶಾಸಕ ರೆಡ್ಡಿ ಚಾಲಕನ ಪಕ್ಕದಲ್ಲಿನ ಸೀಟ್ನಲ್ಲಿ ಕುಳಿತಿದ್ದರು. ರೆಡ್ಡಿ ವಾಹನ ಸಂಚರಿಸುತ್ತಿದ್ದಂತೆಯೇ, ಎದುರಿನಿಂದ ಅದೇ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿದ್ದ ವಾಹನ ತೆರಳಿತು.

ಇದನ್ನೂ ಓದಿ: ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing