ಕರ್ನಾಟಕ

karnataka

ETV Bharat / state

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆ: ಹಳ್ಳದಂತಾದ ತೋಟಗಳು.. ಇಲ್ಲಿದೆ ಜಿಲ್ಲಾವಾರು ಮಾಹಿತಿ! - Rains in various Districts

ರಾಜ್ಯದಲ್ಲಿ ನಿನ್ನೆ ಸುರಿದ ಮಳೆಗೆ ಕಾದು ಕೆಂಡವಾಗಿದ್ದ ಕೆಲವು ಜಿಲ್ಲೆಗಳು ತಂಪಾಗಿದೆ. ಇನ್ನು ಅಧಿಕ ಮಳೆಯಾಗುವ ಸಾಧ್ಯತೆಗಳಿಂದಾಗಿ ಹವಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಿದೆ.

By ETV Bharat Karnataka Team

Published : Jun 3, 2024, 11:39 AM IST

ರಾಜ್ಯದ ವಿವಿಧ ಜಿಲ್ಲೆಯಲ್ಲಿ ಭರ್ಜರಿ ಮಳೆ
ಹಳ್ಳದಂತಾದ ತೋಟಗಳು (ETV Bharat)

ದಾವಣಗೆರೆ ಸುತ್ತ ಮುತ್ತ ಭಾರಿ ಮಳೆ (ETV Bharat)

ದಾವಣಗೆರೆ:ತಡರಾತ್ರಿ ದಾವಣಗೆರೆ ಸುತ್ತ ಮುತ್ತ ಭಾರಿ ಮಳೆಯಾಗಿದೆ. ಮಳೆಯಿಂದ ಕೆರೆಕಟ್ಟೆಗಳಿಗೆ ಜೀವ ಕಳೆ ಬರುತ್ತಿದೆ. ರೈತ ಮೊಗದಲ್ಲಿ ಮಂದಹಾಸ ಮೂಡಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಎರಡು ಗಂಟೆಗೂ ಅಧಿಕವಾಗಿ ಸುರಿದ ಮಳೆಗೆ ಗ್ರಾಮದ ಕೆರೆಗೆ ಜೀವಜಲ ಹರಿದು ಬರುತ್ತಿದೆ. ಭೀಕರ ಬರಗಾಲದಿಂದ ಬೇಸತ್ತಿದ್ದ ಈ ಭಾಗದ ರೈತರ ಮೊಗದಲ್ಲಿ ಸ್ವಂತ ಮನೆ ಮಾಡಿದೆ. ಬರಗಾಲಕ್ಕೆ ತುತ್ತಾಗಿ ಈ ಕೆರೆ ಸಂಪೂರ್ಣವಾಗಿ ನೀರಿಲ್ಲದೇ ಭಣಗುಡುತ್ತಿತ್ತು.‌ ಆದರೆ ಇದೀಗ ಒಂದೇ ಮಳೆಗೆ ಅರ್ಧದಷ್ಟು ಕೆರೆ ತುಂಬಿದೆ.‌

ಹಾಗೇ ನಿನ್ನೆ ಸುರಿದ ಮಳೆಗೆ ಅಡಿಕೆ ತೋಟಗಳಲ್ಲಿ ನದಿಯಂತೆ ನೀರು ನಿಂತುಕೊಂಡಿದ್ದು, ಕೆಲ ರೈತರಿಗೆ ತಲೆನೋವಾಗಿದೆ. ಇದಲ್ಲದೇ ಆನಗೋಡು, ಹೆಬ್ಬಾಳು, ಹುಣಸೆಕಟ್ಟೆ, ಮಂಡ್ಲೂರು ಗ್ರಾಮದಲ್ಲೂ ಮಳೆರಾಯ ಕೃಪೆ ತೋರಿದ್ದು, ಅ ಭಾಗದ ರೈತರು ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ನೀರು ಜೊತೆ ತ್ಯಾಜ್ಯ: ನೀರು ಹರಿದು ಬರುತ್ತಿರುವ ಜೊತೆ ಜೊತೆಗೆ ತ್ಯಾಜ್ಯ ಕೂಡ ಹರಿದು ಬರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ತ್ಯಾಜ್ಯ ಎಸೆಯಿತ್ತಿರುವ ಅಂಗಡಿ ಮಾಲೀಕರಿಗೆ ತಾಕೀತು ಮಾಡಬೇಕು ಎಂದೂ ಗ್ರಾಮ ಪಂಚಾಯತ್​ಗೆ ಮನವಿ ಮಾಡಿದ್ದಾರೆ. ಹೆಬ್ಬಾಳು ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ ಟೋಲ್​ ಇರುವ ಕಾರಣ ಪೆಟ್ಟಿಗೆ ಅಂಗಡಿಗಳು ಹೆಚ್ಚಿವೆ. ಪೆಟ್ಟಿಗೆ ಅಂಗಡಿಯವರ ಪೇಪರ್​ ಲೋಟಗಳು ಮತ್ತು ನೀರಿನ ಬಾಟಲ್ ಗಳ​​​ ತ್ಯಾಜ್ಯ ಹೆಚ್ಚು ಸುರಿಯುತ್ತಿದ್ದರಿಂದ ಇವುಗಳು ಹೆಬ್ಬಾಳ ಕೆರೆಗೂ ಹರಿದು ಬರುತ್ತಿದೆ. ಹೋಟೆಲ್​ನವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ‌.

ವಿಜಯಪುರದ ಹಲವಡೆ ಮಳೆ ಅವಾಂತರ (ETV Bharat)

ವಿಜಯಪುರದ ಹಲವೆಡೆ ಮಳೆ ಅವಾಂತರ:ಜಿಲ್ಲೆಯಲ್ಲಿ ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಲ ರಸ್ತೆಗಳು ಕೆರೆಯಂತಾಗಿದ್ದು, ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಗರದ ಮೀನಾಕ್ಷಿ ವೃತ್ತ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಜುಮನಾಳ, ಸಾರವಾಡ, ಹೊನಗನಹಳ್ಳಿ ಸೇರಿ ಹಲವೆಡೆ ಭಾರಿ ಮಳೆಯಾಗಿದ್ದು, ರೈತನ ಮೊಗದಲ್ಲಿ ಸಂತಸ ಮೂಡಿದೆ. ನಿನ್ನೆ ಸಾಯಂಕಾಲದಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಇದುವರೆಗೆ 87.4 ಮಿ.‌ಮೀ. ಸುರಿದ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಡಿಲು ಬಡಿದು ಹಸು ಸಾವು: ಸಿಡಿಲು ಬಡಿದು ಹಸು ಅಸುನೀಗಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಯೋಗಿ ಹೊಸಮನಿ ಎಂಬವರಿಗೆ ಸೇರಿದ ಹಸು ಹೊಲದಲ್ಲಿ ಕಟ್ಟಿದ್ದ ವೇಳೆ ಮೃತಪಟ್ಟಿದೆ.

ರಸ್ತೆ ಸಂಪರ್ಕ ಕಡಿತ:ಭಾರೀ ಮಳೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣಕ್ಕೆ ಸಂಪರ್ಕ ನೀಡುವ ಅಡವಿಹುಲಗಬಾಳ ಗ್ರಾಮ ಹಾಗೂ ತಾಂಡಾದ ರಸ್ತೆ ಸಂಚಾರ ಕಡಿತಗೊಂಡಿದೆ. ಹಳ್ಳವು ತುಂಬಿ ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಈ ಭಾಗದಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಬರಲು ಇರುವ ಏಕೈಕ ರಸ್ತೆ ಇದಾಗಿದೆ.

ಮಳೆಯಿಂದ ದೋಣಿ ನದಿಯೂ ಉಕ್ಕಿ ಹರಿಯುತ್ತಿದೆ. ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಹಾಗೂ ಯಾಳವಾರ ಗ್ರಾಮದಲ್ಲಿರುವ ದೋಣಿ ನದಿ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಈ ನಡುವೆ ಪ್ರವಾಸಿಗರು ಮಳೆಯನ್ನು ಲೆಕ್ಕಿಸದೆ ಗೋಲ್ ಗುಂಬಜ್ ನೋಡಲು ಬರುತ್ತಿದ್ದಾರೆ. ವಿವಿಧೆಡೆಗಳಿಂದ ಜನರು ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಬರುತ್ತಿರುವುದು ಕಂಡು ಬಂತು.

ಬಳ್ಳಾರಿಯಲ್ಲಿ ಭಾರಿ ಮಳೆ:ಮಳೆ ಅವಾಂತರಕ್ಕೆ ಗಣಿನಾಡಿನಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಬಳ್ಳಾರಿ, ಸಂಡೂರು, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಮಳೆ ಅಬ್ಬರಿಸಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ನಿರಿನ ರಭಸಕ್ಕೆ ಸೇತುವೆಗಳು.ಕೊಚ್ಚಿಕೊಂಡು ಹೋಗಿವೆ. ಮೋಕಾ ಗ್ರಾಮದಲ್ಲಿ 110 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೋಕಾ ಗ್ರಾಮದ ಶಾಲೆಯ ನಾಲ್ಕು ಎಕರೆ ಆವರಣ ಜಲಾವೃತ‌ವಾಗಿದೆ.

ಡಿಸಿಎಂ ಹೇಳಿದ್ದೇನು?: ''ಬೆಂಗಳೂರು ನಗರದಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಮಳೆ ಬರಲಿ. ಮಳೆಯಿಂದ ಆಗಿರುವ ಹಾನಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇವೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು‌. ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ''ಮಳೆಯಿಂದ ಆಗಿರುವ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ‌. ಬೆಂಗಳೂರಿನಲ್ಲಿ ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತೇನೆ, ಇನ್ನೂ ಹೆಚ್ಚಿನ ಮಳೆ ಬರಲಿ'' ಎಂದರು.

ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್:ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಧಾರಾಕಾರ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Monsoon Entry

ABOUT THE AUTHOR

...view details