ಕರ್ನಾಟಕ

karnataka

ಉಡುಪಿ ಜಿಲ್ಲಾದ್ಯಂತ ಮಳೆ ಅಬ್ಬರ: ಮನೆ, ಬೆಳೆ, ಕೃಷಿಭೂಮಿಗೆ ಹಾನಿ - ನಾಳೆಯೂ ಶಾಲೆಗೆ ರಜೆ - heavy rain fall in udupi

By ETV Bharat Karnataka Team

Published : Jul 19, 2024, 6:28 PM IST

Updated : Jul 19, 2024, 7:45 PM IST

ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಗಾಳಿ - ಮಳೆಯಿಂದ ಮನೆ ಹಾನಿ, ಬೆಳೆ ಹಾನಿಯ 40ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಮಳೆಯಬ್ಬರದ ಹಿನ್ನೆಲೆ ನಾಳೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ವರುಣಾರ್ಭಟ
ಉಡುಪಿ ಜಿಲ್ಲೆಯಾದ್ಯಂತ ವರುಣಾರ್ಭಟ (ETV Bharat)

ಉಡುಪಿ ಜಿಲ್ಲಾದ್ಯಂತ ಮಳೆಯ ಅಬ್ಬರ (ETV Bharat)

ಉಡುಪಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಇಂದು ಸಹ ದಿನವಿಡೀ ಮಳೆ ಸುರಿಯುತಿದ್ದು, ಉಡುಪಿ- ಕುಂದಾಪುರ- ಬೈಂದೂರು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯ ವಾತಾವರಣ ಮತ್ತು ತಗ್ಗು ಪ್ರದೇಶಗಳಲ್ಲಿ ನೆರೆಯ ವಾತಾವರಣ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಗಾಳಿ - ಮಳೆಯಿಂದ ಮನೆ ಹಾನಿ, ಬೆಳೆ ಹಾನಿಯ 40ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಸತತ ಮಳೆ ಹಾಗೂ ಆಗಾಗ ಬೀಸುವ ಗಾಳಿಯಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಅಕ್ಕ ಪಕ್ಕದ ತಗ್ಗು ಪ್ರದೇಶಗಳಿಗೆ ಆಗಾಗ ನೀರು ನುಗ್ಗಿ ಜನ - ಜಾನುವಾರುಗಳಿಗೆ ಆತಂಕದ ಕ್ಷಣಗಳು ಸೃಷ್ಟಿ ಯಾಗುತ್ತಿವೆ. ಬೆಳಗಿನಿಂದ ಬಿಟ್ಟು ಬಿಟ್ಟು ಸುರಿಯುತಿದ್ದ ಮಳೆ ಸಂಜೆಯಾಗುತಿದ್ದಂತೆ ಬಿರುಸಿನಿಂದ ಸುರಿಯುತ್ತಿದೆ. ಹೀಗಾಗಿ ನದಿಪಾತ್ರದ ಜನತೆ ನೆರೆಯ ಭೀತಿಯಲ್ಲಿ ರಾತ್ರಿಯಿಡೀ ಕಳೆಯುವಂತಾಗಿದೆ. ಬ್ರಹ್ಮಾವರ – ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಬಿರುಸಿನ ಗಾಳಿಯೊಂದಿಗೆ ದಿನವಿಡೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಪ್ರಮುಖ ನದಿಗಳು, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿದೆ.

ಶನಿವಾರವೂ ಶಾಲೆಗೆ ರಜೆ:ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯು ನಾಳೆಯೂ ರೆಡ್ ಅಲರ್ಟ್ ನೀಡಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಮತ್ತು ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜುಲೈ 20ರಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ರಜೆ ಘೋಷಿಸಿದ್ದಾರೆ. ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆ ಇರುವುದಿಲ್ಲ.

ಮಳೆಯ ಆರ್ಭಟಕ್ಕೆ ಬೆಳೆ, ಮನೆ, ಶಾಲೆಗೆ ಹಾನಿ: ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಕೊಳ್ಕೆರೆ ಎಂಬಲ್ಲಿ ಸರ್ಕಾರಿ ಶಾಲೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಆದರೆ, ಇದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಕುಂದಾಪುರ ಹರ್ಕೂರಿನ ಸಂತೋಷ್ ಶೆಟ್ಟಿ ಹಾಗೂ ಬೈಂದೂರು ಕಾಲ್ತೋಡಿನ ವಿನೋದ ಎಸ್.ಶೆಟ್ಟಿ ಅವರ ತೋಟಗಾರಿಕಾ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಒಟ್ಟು 40 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಇನ್ನು ಕುಂದಾಪುರ ತಾಲೂಕು ಬೇಳೂರಿನ ಪ್ರಕಾಶ್ ಶೆಟ್ಟಿ ಹಾಗೂ ಹೊಸಂಗಡಿಯ ಸುಬ್ರಾಯ ಭಂಡಾರಿ ಇವರ ಜಾನುವಾರು ಕೊಟ್ಟಿಗೆ ಮಳೆ ಯಿಂದ ಭಾಗಶಃ ಹಾನಿಗೊಳಗಾಗಿದೆ. ಇದನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಮನೆ ಹಾನಿಯ 33 ಪ್ರಕರಣಗಳು ವರದಿಯಾಗಿವೆ. ಇದರಿಂದ 35ರಿಂದ 40 ಲಕ್ಷ ರೂ.ನಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.

ಮೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯ ವೈಖರಿಗೆ ವ್ಯಾಪಕ ಪ್ರಶಂಸೆ:ಮಳೆಯನ್ನು ಲೆಕ್ಕಿಸದೇ ನೆರೆಪೀಡಿತ ಪ್ರದೇಶಗಳಲ್ಲಿ ಮರದ ಕೊಂಬೆಗಳನ್ನು ತೆರವು ಮಾಡಲು ಹಾಗೂ ರಸ್ತೆಯಲ್ಲಿ ಬಿದ್ದ ಮರಗಳನ್ನು ತೆಗೆಯುವಲ್ಲಿ ಸಹಕರಿಸುತ್ತಿರುವ ಮೆಸ್ಕಾಂ ಸಿಬ್ಬಂದಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಸಹಾಯ ಮಾಡುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಬೆಳೆ ನಾಶ: ಉಡುಪಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ಸೌಪರ್ಣಿಕಾ, ಕುಬ್ಜಾ, ಸೀತಾನದಿ, ಸುವರ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕೃಷಿ ಭೂಮಿಗಳು ಮುಳುಗಡೆಯಾಗಿ ಅಪಾರ ಪ್ರಮಾಣದ ಭತ್ತ ಕೃಷಿ ನಾಶವಾಗಿದೆ. ಮಾತ್ರವಲ್ಲ ಮುಳುಗಡೆಯ ಭೀತಿಯಲ್ಲಿರುವ ಮಾಣೈ ಸೇತುವೆಯಲ್ಲಿ ನದಿಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದಾಗಿ ಶಿರೂರು ಮೂಲಮಠ - ಹಿರಿಯಡ್ಕ ರಸ್ತೆ ಸಂಪರ್ಕ ಕಡಿತವಾಗಿದೆ.

ಪ್ರವಾಸಿ ತಾಣಗಳಿಗೆ ಬ್ರೇಕ್:ಜಿಲ್ಲೆಯಲ್ಲಿ ವರಣುನ ಆರ್ಭಟ ಹೆಚ್ಚಾಗಿದ್ದು, ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಾದ ಜೊಮ್ಲು ತೀರ್ಥ, ಹುಲಿಕಲ್ ಪ್ರವಾಸಿ ತಾಣ ಸೇರಿದಂತೆ ಸೋಮೆಶ್ವರ, ಮಲ್ಪೆ ಬೀಚ್​ಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಕಡಲು ಪ್ರಕ್ಷ್ಯುಬ್ದ, ಬಂದರುಗಳಲ್ಲಿ ಸೈಕ್ಲೋನ್ ಎಚ್ಚರಿಕೆ: ರಾಜ್ಯದ ಪಶ್ಚಿಮ ಕರಾವಳಿಯಲ್ಲಿರುವ ಬಂದರುಗಳಾದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ ಬಂದರುಗಳಲ್ಲಿ ಸೈಕ್ಲೋನ್ ಎಚ್ಚರಿಕೆಯ ಸೂಚನೆ ಹಾಕಿಸುವಂತೆ ಸಂಬಂಧಿತ ಬಂದರು ಅಧಿಕಾರಿಗಳಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಡಲು ಪ್ರಕ್ಷ್ಯುಬ್ದವಾಗಿದ್ದು, ದೊಡ್ಡದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪಶ್ಚಿಮ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪಗಳ ತೀರದ ಬಂದರುಗಳಿಗೆ ಈ ಸೂಚನೆಗಳನ್ನು ನೀಡಲಾಗಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಇದೇ ವೇಳೆ, ರಾಜ್ಯದ ಕರಾವಳಿ ತೀರದ ಮೀನುಗಾರರಿಗೂ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲು ಪ್ರಕ್ಷುಬ್ಧ ವಾಗಿರಲಿದ್ದು, ತೀರದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ತಿಳಿಸಲಾಗಿದೆ. ನಾಳೆಗೂ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ.

ಕಡಲ್ಕೊರೆತದಿಂದಾಗಿ ಅಪಾಯಕ್ಕೆ ಸಿಲುಕಿದ ಮೀನುಗಾರಿಕಾ ಶೆಡ್:ಕಡಲ್ಕೊರೆತದಿಂದಾಗಿ ಪಡುಬಿದ್ರಿಯ ನಡಿಪಟ್ಟ ಪ್ರದೇಶದಲ್ಲಿ ಮೀನುಗಾರಿಕಾ ಶೆಡ್ ಒಂದು ಅಪಾಯಕ್ಕೆ ಸಿಲುಕಿದೆ. ಕಾಪು ತಾಲೂಕಿನಲ್ಲಿರುವ ಮಹೇಶ್ವರಿ ಡಿಸ್ಕೋ ಫಂಡ್ ಮೀನುಗಾರಿಕಾ ಶೆಡ್‌ ಅಪಾಯಕ್ಕೆ ಸಿಲುಕಿದ್ದು, ಶೇಖರಿಸಿಟ್ಟಿದ್ದ 25 ಸಾವಿರ ಲೀಟರ್ ನಷ್ಟು ಸೀಮೆ ಎಣ್ಣೆಯನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ.

ಅಲ್ಲದೇ ಐವತ್ತು ಲಕ್ಷ ರೂಪಾಯಿಯಷ್ಟು ಮೌಲ್ಯದ ಮೀನುಗಾರಿಕಾ ಪರಿಕರಗಳನ್ನು ಕೂಡಾ ಬೇರೆಡೆಗೆ ಸ್ಥಳಾಂತರಿಸಲಾಗಿದೆ. 60ಕ್ಕೂ ಅಧಿಕ ಮೀನುಗಾರಿಕಾ ಕುಟುಂಬಗಳು ಈ ಶೆಡ್ ಅನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದು, ಕಡಲ್ಕೊರೆತ ತಡೆಗೆ ಹಾಕಲ್ಪಟ್ಟಿದ್ದ ಕಲ್ಲುಗಳು ಸಮುದ್ರ ಪಾಲಾಗಿವೆ. ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮತ್ತೆರಡು ದಿನ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ; ಎಲ್ಲೆಲ್ಲಿ ಎಷ್ಟು ಮಳೆ? - Red alert for Six district

Last Updated : Jul 19, 2024, 7:45 PM IST

ABOUT THE AUTHOR

...view details