ಕರ್ನಾಟಕ

karnataka

By ETV Bharat Karnataka Team

Published : Mar 7, 2024, 12:39 PM IST

ETV Bharat / state

ವಸತಿ ಸಮುಚ್ಚಯಗಳ ನಿರ್ವಹಣೆಯನ್ನು ಸಹಕಾರ ಸಂಘ ಮಾಡಲು ಸಾಧ್ಯವಿಲ್ಲ : ಹೈಕೋರ್ಟ್

ವಸತಿ ಸಮುಚ್ಚಯದ ನಿರ್ವಹಣೆಯನ್ನು ಸಹಕಾರ ಸಂಘಗಳ ಕಾಯ್ದೆಯಡಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

High Court
ಹೈಕೋರ್ಟ್

ಬೆಂಗಳೂರು:ವಸತಿ ಸಮುಚ್ಚಯದ(ಅಪಾರ್ಟ್ಮೆಂಟ್​) ನಿರ್ವಹಣೆಯನ್ನು ಕರ್ನಾಟಕ ಅಪಾರ್ಟ್​ಮೆಂಟ್​ ಓನರ್​ ಶಿಪ್​ ಕಾಯ್ದೆ 1972ರಡಿ (ಕೆಎಒಎ) ಸಂಘವು ನೋಡಿಕೊಳ್ಳಬಹುದೇ ವಿನಾ ಸಹಕಾರ ಸಂಘಗಳ ಕಾಯ್ದೆ 1959ರಡಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕೆಂಗೇರಿ ಬಳಿಯ ಡಿಎಸ್​​ ಮ್ಯಾಕ್ಸ್​ ಸ್ಟಾರ್​ ನೆಸ್ಟ್​ನ ಕೆಲವು ಫ್ಲಾಟ್​ಗಳ ಮಾಲೀಕರಾದ ಆರ್​. ಅರುಣ್​ ಕುಮಾರ್​ ಮತ್ತಿತರರು ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಅನಂತ ರಾಮನಾಥ್​ ಹೆಗಡೆ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅರ್ಜಿದಾರರಿಗೆ ಸಂಘವನ್ನು ನೋಂದಣಿ ಮಾಡಿಕೊಳ್ಳಲು ಪ್ರತಿವಾದಿ ಬಿಲ್ಡರ್​ ಹಾಗೂ ಇನ್ನಿತರರು ಸಹಕಾರ ನೀಡಬೇಕು ಎಂದು ಹೇಳಿರುವ ನ್ಯಾಯಾಲಯ ಸೊಸೈಟಿ ಕಾಯ್ದೆಯಡಿ ಸಂಘದ ನೋಂದಣಿಗೆ ಸಹಕಾರ ಸಂಘಗಳ ರಿಜಿಸ್ಟ್ರಾರ್​ ನೀಡಿದ್ದ ಅನುಮತಿ ರದ್ದುಗೊಳಿಸಿದೆ.

ಅರ್ಜಿದಾರರು ಹೇಳಿರುವಂತೆ ಇದು ವಸತಿ ಸಂಕೀರ್ಣದ ಯೋಜನೆಯಾಗಿದ್ದು, ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶದ ಜಾಗವಿಲ್ಲ. ಖರೀದಿದಾರರ ಪರವಾಗಿ ನೀಡಲಾಗಿರುವ ಕ್ರಯ ಪತ್ರ (ಸೇಲ್ ಡೀಡ್)ಗಳಲ್ಲೂ ಅವುಗಳನ್ನು ಕರ್ನಾಟಕ ಅಪಾರ್ಟ್ ಮೆಂಟ್ ಓನರ್ ಶಿಪ್ ಕಾಯ್ದೆ 1972ರಡಿ ನೋಂದಣಿ ಮಾಡಿಕೊಡಲಾಗಿದೆ. ಹಾಗಾಗಿ ಫ್ಲಾಟ್​ಗಳ ನಿರ್ವಹಣೆಯನ್ನು ಕೈಗೊಳ್ಳಲು ಅರ್ಜಿದಾರರು ಹಾಗೂ ಉದ್ದೇಶಿತ ಸಂಘದ ಸದಸ್ಯರು ಅಸೋಸಿಯೇಷನ್​ನ್ನು 1972ರ ಕೆಎಒಎ ಕಾಯ್ದೆ ಅನ್ವಯವೇ ನೋಂದಣಿ ಮಾಡಿಸಬೇಕಾಗುತ್ತದೆ. ನಿಯಮ ಪ್ರಕಾರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಅಡಿ ನೋಂದಣಿಗೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಕರ್ನಾಟಕ ಓನರ್​ ಶಿಪ್ ಫ್ಲಾಟ್ಸ್ (ನಿರ್ಮಾಣ, ಮಾರಾಟ ನಿರ್ವಹಣೆ ಮತ್ತು ವರ್ಗಾವಣೆ ಉತ್ತೇಜನ ನಿಯಂತ್ರಣ) ಕಾಯ್ದೆ 1972 ಮತ್ತು ಅದರಡಿ ಬರುವ 1975ರ ನಿಯಮಗಳು ವಸತಿ ಸಂಕೀರ್ಣದಲ್ಲಿ ವಸತಿ ಘಟಕ ಮತ್ತು ವಾಣಿಜ್ಯ ಘಟಕಗಳಿದ್ದರೆ ಮಾತ್ರ ಅನ್ವಯಿಸುತ್ತದೆ. ಆದರೆ, ಈ ಪ್ರಕರಣದಲ್ಲಿ ವಾಣಿಜ್ಯ ಉದ್ದೇಶದ ಜಾಗವಿಲ್ಲ. ಎಲ್ಲಾ ವಸತಿ ಫ್ಲಾಟ್​ಗಳೇ ಇರುವುದರಿಂದ ಸೊಸೈಟಿ ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉದ್ದೇಶಿತ ಸ್ಟಾರ್​ ನೆಸ್ಟ್​ ಅಪಾರ್ಟ್​ಮೆಂಟ್ ಓನರ್ಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಸಹಕಾರ ಸಂಘಗಳ ಕಾಯ್ದೆ ಅಡಿ ನೋಂದಣಿ ಮಾಡಿಸಲಾಗುತ್ತಿದೆ. ಅದಕ್ಕೆ ಈಗಾಗಲೇ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕೂಡ ಅನುಮತಿ ನೀಡಿದ್ದಾರೆ. ಆದರೆ ಕ್ರಯಪತ್ರದ ಪ್ರಕಾರ ಫ್ಲಾಟ್​ಗಳನ್ನು ಖರೀದಿ ಮಾಡಲಾಗಿದೆ ಮತ್ತು 1972ರ ಕೆಎಒಎ ಕಾಯ್ದೆ ಅನ್ವಯ ಸಂಘವನ್ನು ನೋಂದಣಿ ಮಾಡಲು ಬಯಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರತ್ಯೇಕ ಹೈಕೋರ್ಟ್ ಸುದ್ದಿ:ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಪದಾಧಿಕಾರಿಗಳ ಅವಧಿ ವಿಸ್ತರಿಸುವುದನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಬಾರ್​ ಕೌನ್ಸಿಲ್​ ಆಫ್​ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಹೈಕೋರ್ಟ್​ ತುರ್ತು ನೋಟಿಸ್ ಜಾರಿಗೊಳಿಸಿದೆ.

ವಕೀಲ ರಹ್ಮತುಲ್ಲಾ ಕೊತ್ವಾಲ್​ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನೋಟಿಸ್​ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ರಾಜ್ಯ ವಕೀಲರ ಪರಿಷತ್ತಿನ ಪದಾಧಿಕಾರಿಗಳ ಅವಧಿಯನ್ನು 2 ವರ್ಷ ವಿಸ್ತರಿಸಿ 2023ರ ಜೂನ್ 23ರಂದು ಅಧಿಸೂಚನೆ ಹೊರಡಿಸಲಾಗಿದೆ. 5 ವರ್ಷ ಮೀರಿ ಅವಧಿಯನ್ನು ವಿಸ್ತರಿಸಿರುವ ಬಾರ್​ ಕೌನ್ಸಿಲ್​ ಆಫ್​ ಇಂಡಿಯಾದ ಕ್ರಮ ಏಕ ಪಕ್ಷೀಯವಾಗಿದ್ದು, ವಕೀಲರ ಕಾಯ್ದೆ-1961 ಸೆಕ್ಷನ್​ 8ರ ಹಾಗೂ ಸುಪ್ರೀಂಕೋರ್ಟ್‌ನ ಹಲವು ಪೂರ್ವನಿದರ್ಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕ್ರಮ ವಕೀಲ ಸಮುದಾಯ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕುರಿತು ಅಪನಂಬಿಕೆ ಮತ್ತು ಅಸಮಾಧಾನಕ್ಕೆ ಕಾರಣವಾಗಲಿದೆ.

ಅಲ್ಲದೇ ಕೌನ್ಸಿಲ್​ನ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಮುಖ್ಯವಾಗಿ ರಾಜ್ಯ ವಕೀಲರ ಪರಿಷತ್ತಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯದೆ ಅಕ್ರಮವಾಗಿ ಅಧಿಕಾರ ಅನುಭವಿಸುವ ಕೆಲವರಿಗೆ ಇದು ಅಸ್ತ್ರವಾಗಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಆದ್ದರಿಂದ, ಈ ವಿಚಾರವಾಗಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಬಾರ್ ಕೌನ್ಸಿಲ್​ ಆಫ್ ಇಂಡಿಯಾ ಹಾಗೂ ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ:ಪತಿಯ ಉಪಯೋಗಕ್ಕಾಗಿ ಆಗುವ ವೆಚ್ಚ ಪರಿಗಣಿಸಿ ಪತ್ನಿಗೆ ಜೀವನಾಂಶ ಕಡಿತಗೊಳಿಸಲಾಗದು: ಹೈಕೋರ್ಟ್

ABOUT THE AUTHOR

...view details