ಧಾರವಾಡ: ಇಲ್ಲಿನ ಕೃ.ವಿ.ವಿ ಆವರಣದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಕೃಷಿಮೇಳ ಮಂಗಳವಾರ ಮುಕ್ತಾಯಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಮೇಳದ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರಮುಖವಾಗಿ, ಜಾನುವಾರುಗಳ ಮೇಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ವಿವಿಧ ತಳಿಯ ಜಾನುವಾರುಗಳ ಕುರಿತು ರೈತರು ಮಾಹಿತಿ ಪಡೆದರು.
ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿತ್ತು. ಸೆ.21ರಿಂದ 24ರವರೆಗೆ ಮೇಳ ನಡೆದಿದೆ. ರೈತಾಪಿ ವರ್ಗದ ಗಮನ ಸೆಳೆಯಲು ಜಾನುವಾರು ಮೇಳವನ್ನು ಆಯೋಜಿಸಲಾಗಿತ್ತು. ಕುದುರೆ, ಕುರಿ, ಟಗರು, ಎಮ್ಮೆ, ಆಕಳು ಹಾಗು ಎತ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ದೊಡ್ಡ ಗಾತ್ರದ ಪಂಜಾಬ್ ರಾಜ್ಯದ ಮುರ್ರಾ ಎಮ್ಮೆ ತಳಿ ಹಾಗೂ ಗುಜರಾತ್ನ ಜಾಫ್ರಾಬಾದಿ ತಳಿಗಳು ವಿಶೇಷವಾಗಿ ಗಮನ ಸೆಳೆದವು. ಹಾವೇರಿಯ ಜನನಾಯಕ ಹಾಗೂ 300 ಕೊಲೆಗಾರ ಹೆಸರಿನ ಹೋರಿಗಳು ನೋಡುಗರನ್ನು ತನ್ನತ್ತ ಸೆಳೆದವು. ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾಗಿರುವ ಈ ಹೋರಿಗಳು ಕೃಷಿ ವಿವಿಯ ಆವರಣದಲ್ಲಿ ಕಂಡುಬಂದವು. ಅವುಗಳ ಆರ್ಭಟ ನೋಡಿದ್ದ ಜನರು ಪ್ರದರ್ಶನದಲ್ಲಿ ಅವುಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
"ನಮ್ಮ ಹಾವೇರಿಯಲ್ಲಿ ನಡೆಯುವ ಹೋರಿ ಹಬ್ಬ ಎಲ್ಲೆಡೆ ಪರಿಚಯವಾಗಲಿ ಹಾಗೂ ಎಲ್ಲೆಡೆ ನಡೆಯಲಿ ಎಂಬುದು ನಮ್ಮ ಆಶಯ" ಎಂದು ಹೋರಿ ಮಾಲೀಕ ಪ್ರಜ್ವಲ್ ಆಶಿಸಿದರು.
ಇದನ್ನೂ ಓದಿ: ಧಾರವಾಡ ಕೃಷಿಮೇಳ: ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ - Dharwad Krishi Mela