2025ರ ಮಹಾ ಕುಂಭಮೇಳ ಮೂಲಕ ಆನ್ಲೈನ್ ಸಂಚಲನ ಸೃಷ್ಟಿಸಿರುವ ಇಂದೋರ್ನ ಮೊನಾಲಿಸಾ ಬಹುತೇಕ ನೆಟ್ಟಿಗರ ಚರ್ಚೆಯ ವಿಷಯವಾಗಿದ್ದಾರೆ. ಬಹುತೇಕರು ಈ ಚೆಲುವೆಯನ್ನು ನ್ಯಾಚುರಲ್ ಬ್ಯೂಟಿ ಎಂದು ಹಾಡಿ ಹೊಗಳಿದ್ದಾರೆ. ವೈರಲ್ ಬ್ಯೂಟಿಯನ್ನೀಗ ಬಾಲಿವುಡ್ ಬ್ಯೂಟಿ, ರಾಜಕಾರಣಿ ಕಂಗನಾ ರಣಾವತ್ ಕೂಡಾ ಹೊಗಳಿದ್ದಾರೆ.
ನೆಟ್ಟಿಗರು ಇಂದೋರ್ ಮೊನಾಲಿಸಾರ ಕಣ್ಣುಗಳು ಮತ್ತು ಅವರ ಸೌಂದರ್ಯವನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ಅವರನ್ನು ಅತಿಲೋಕ ಸುಂದರಿ ಮೊನಾಲಿಸಾಗೆ ಹೋಲಿಸಲು ಪ್ರಾರಂಭಿಸಿದರು. ಇದೀಗ ಇಂದೋರ್ ಚೆಲುವೆಯನ್ನು ಹೊಗಳಿರುವ ಕಂಗನಾ ರಣಾವತ್, ಸಿನಿಮಾ ಎಂಬ ಗ್ಲ್ಯಾಮರ್ ಲೋಕದಲ್ಲಿ ಹಾಲ್ಗೆನ್ನೆ ಚೆಲುವೆಯರಿಗೆ ಮಾತ್ರ ಪ್ರಾಮುಖ್ಯತೆ ನೀಡುವವರ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ದೀಪಿಕಾ ಮತ್ತು ಬಿಪಾಶಾರಂತಹ ಕೃಷ್ಣಸುಂದರಿಯರ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.
ಇದನ್ನೂ ಓದಿ: ವಿದ್ಯಾಭ್ಯಾಸಕ್ಕೆ ಅಡ್ಡಿಯಾಯ್ತು ಬಡತನ, ಅದೃಷ್ಟ ಬದಲಿಸಿತು ಕುಂಭಮೇಳ: ಬಾಲಿವುಡ್ಗೆ 'ಮೊನಾಲಿಸಾ' ಎಂಟ್ರಿ
ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ, 'ಈ ಪುಟ್ಟ ಹುಡುಗಿ ತನ್ನ ನ್ಯಾಚುರಲ್ ಬ್ಯೂಟಿಯಿಂದ ಇಂಟರ್ನೆಟ್ನಲ್ಲಿ ಸದ್ದು ಮಾಡಿದ್ದಾರೆ' ಎಂದು ಬರೆದಿದ್ದಾರೆ. ಆದರೆ, ಫೋಟೋಗಳು ಮತ್ತು ಸಂದರ್ಶನಗಳಿಗಾಗಿ ಅವರಿಗೆ ಕಿರುಕುಳ ನೀಡಿದ ಜನರನ್ನು ನಾನು ಇಷ್ಟಪಡೋದಿಲ್ಲ. ಮತ್ತೊಂದೆಡೆ, ಗ್ಲ್ಯಾಮರ್ ಲೋಕದಲ್ಲಿರುವ ಜನರು 'ಡಾರ್ಕ್ ಟೋನ್' ಅನ್ನು ಏಕೆ ಇಷ್ಟಪಡುವುದಿಲ್ಲ ಎಂಬುದು ನನಗೆ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಚೆಲುವೆ ಮಹಿರಾ ಶರ್ಮಾ ಪ್ರೀತಿಯಲ್ಲಿ ಕ್ರಿಕೆಟರ್ ಮೊಹಮ್ಮದ್ ಸಿರಾಜ್?
ಡಾರ್ಕ್ ಬ್ಯೂಟಿಯರನ್ನು ಸಹ ಸಮಾನವಾಗಿ ಪ್ರೀತಿಸುತ್ತಿದ್ದ ಭಾರತೀಯ ಚಿತ್ರರಂಗದ ಆ ಯುಗವನ್ನು ಕಂಗನಾ ನೆನಪಿಸಿಕೊಂಡರು. 'ಜನರು ಅನು ಅಗರ್ವಾಲ್, ಕಾಜೋಲ್, ದೀಪಿಕಾ, ಬಿಪಾಶಾ ಮತ್ತು ರಾಣಿ ಮುಖರ್ಜಿ ಅವರನ್ನು ಪ್ರೀತಿಸಿದಷ್ಟು ಯುವ ನಟಿಯರನ್ನು ಪ್ರೀತಿಸುತ್ತಾರೆಯೇ'? ಎಂದು ಕೇಳಿದ್ದಾರೆ. ಸದ್ಯ ಎಲ್ಲಾ ನಟಿಯರು ಹೇಗೆ ಇಷ್ಟೊಂದು ಸುಂದರಿಯಾದರು? ಯೌವನದಲ್ಲಿ ಡಾರ್ಕ್ ಟೋನ್ ಹೊಂದಿದ್ದವರು ಸಹ. ಮೊನಾಲಿಸಾರನ್ನು ಇಷ್ಟಪಡುವವರು ಹೊಸ ಪ್ರತಿಭೆಗಳಿಗೂ ಅದೇ ಮಹತ್ವ ಏಕೆ ಕೊಡಬಾರದು? ಎಂದು ಪ್ರಶ್ನಿಸಿದ್ದಾರೆ.