ಕರ್ನಾಟಕ

karnataka

ಡಾ.‌ ಗಂಗೂಬಾಯಿ ಹಾನಗಲ್ ಗುರುಕುಲದಿಂದ ವಿದ್ಯಾರ್ಥಿಗಳ ವರ್ಗಾವಣೆ ; ಸರ್ಕಾರದ ನಿರ್ಧಾರಕ್ಕೆ ಆಕ್ರೋಶ - Gurukula Students Transfer

By ETV Bharat Karnataka Team

Published : Jul 31, 2024, 8:06 PM IST

ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಮೈಸೂರಿನ ಗಂಗೂಬಾಯಿ ಹಾನಗಲ್ ವಿವಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

Dr Gangubai Hanagal Gurukula Trust
ಡಾ ಗಂಗುಬಾಯಿ ಹಾನಗಲ್ ಗುರುಕುಲ ಟ್ರಸ್ಟ್ (ETV Bharat)

ಗುರುಕುಲ ವಿದ್ಯಾರ್ಥಿ ಮಹೇಶ್​ ಮಾತನಾಡಿದರು (ETV Bharat)

ಹುಬ್ಬಳ್ಳಿ :ಭಾರತದ ಸಂಗೀತ ಕ್ಷೇತ್ರದಲ್ಲಿ ಹಿಂದೂಸ್ತಾನಿ ಸಂಗೀತದ ಮೂಲಕ ಬಹುದೊಡ್ಡ ಕೊಡುಗೆ ನೀಡಿದವರು ಗಂಗೂಬಾಯಿ ಹಾನಗಲ್. ಏಷ್ಯಾ ಖಂಡದಲ್ಲಿಯೇ ಏಕೈಕ ಗುರು ಪರಂಪರೆಯ ಗುರುಕುಲ ಎಂದೇ ಖ್ಯಾತಿ ಪಡೆದಿರುವ ಗಂಗೂಬಾಯಿ ಹಾನಗಲ್ ಗುರುಕುಲದ ವಿದ್ಯಾರ್ಥಿಗಳಿಗೆ ಇದೀಗ ಸಂಕಷ್ಟ ಶುರುವಾಗಿದೆ.

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.‌

ಉಣಕಲ್‌ನ ಗುರುಕುಲದಲ್ಲಿ 20 ವರ್ಷಗಳಿಂದ ಸಂಗೀತ ತರಬೇತಿ ನೀಡಲಾಗುತ್ತಿದೆ. ಗುರುಕುಲದಲ್ಲಿ ರಾಜ್ಯ ಅಲ್ಲದೇ ಹೊರರಾಜ್ಯಗಳ (ಉತ್ತರ ಪ್ರದೇಶ, ಮಧ್ಯಪ್ರದೇಶ) ವಿದ್ಯಾರ್ಥಿಗಳೂ ಇದ್ದಾರೆ. ಆದರೆ ಈಗ ಸಿಬ್ಬಂದಿ ಗುರುಕುಲವನ್ನು ಮೈಸೂರು ಸಂಗೀತ ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸಿದ್ದಾರೆ.

'ಗುರುಕುಲವನ್ನು ಬಂದ್ ಮಾಡಿ ಕಾಲೇಜು ಮಾಡಲು ಮುಂದಾಗಿದ್ದಾರೆ. ನಾವು ಸಂಗೀತ ಕಲಿಯಬೇಕು. ಅದರಲ್ಲೂ ಗುರುಕುಲ ಮಾದರಿಯಲ್ಲಿ ಕಲಿಯಬೇಕು ಎಂದು ಎರಡು ವರ್ಷಗಳಿಂದ ವಿದ್ಯಾಭ್ಯಾಸ ಮಾಡಿದ್ದೆವು. ವಿಸಿಯವರು ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದೇವೆ ಎಂದಿದ್ದಾರೆ. ನಮಗೆ ಊಟ, ವಸತಿ ಸೌಲಭ್ಯ ಕೂಡ ಇಲ್ಲದಂತಾಗಿದೆ. ಸಂಗೀತಕ್ಕಾಗಿ ಮನೆ ಮಠ ಬಿಟ್ಟು ಬಂದವರು ನಾವು ಈಗ ಎಲ್ಲಿಗೆ ಹೋಗಬೇಕು?' ಎಂದು ಮಹೇಶ ಎಂಬ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾರೆ.

ಬೆಳಗಾವಿ ಮೂಲದ ಶ್ರೀಕೃಷ್ಣ ಎಂಬ ವಿದ್ಯಾರ್ಥಿ ಮಾತನಾಡಿ, 'ಸರ್ಕಾರದ ನಿಯಮದಂತೆ ಐವರು ಗುರುಗಳು ಹಾಗೂ 19 ಜನ ವಿದ್ಯಾರ್ಥಿಗಳನ್ನು ಸರ್ಕಾರವೇ ಆಯ್ಕೆ ಮಾಡಿಕೊಂಡಿದೆ. ನಾಲ್ಕು ವರ್ಷ ಅಭ್ಯಾಸ ಮಾಡಬೇಕು ಎಂದು ಬಾಂಡ್ ಕೂಡ ಮಾಡಿಸಿಕೊಂಡಿದ್ದಾರೆ. ಆದರೆ ಈಗ ನಾವು ಕಳೆದ ಎರಡು ವರ್ಷಗಳಿಂದ ಇಲ್ಲಿಯೇ ಇದ್ದು ಅಭ್ಯಾಸ ಮಾಡಿದ್ದೇವೆ.‌ ಇನ್ನೂ ಎರಡು ಮೂರು ವರ್ಷಗಳ ಕಾಲ ಅಭ್ಯಾಸವಿದೆ. ಆದ್ರೆ ಕಳೆದ ಡಿಸೆಂಬರ್​ನಿಂದ ಊಟ, ಅಭ್ಯಾಸ ಯಾವುದೂ ಇಲ್ಲ. ಈಗ ಏಕಾಏಕಿಯಾಗಿ ಗುರುಕುಲ ‌ಬಿಟ್ಟು ಹೋಗಿ ಎಂದರೆ ಎಲ್ಲಿ ಹೋಗಬೇಕು. ಹೀಗಾಗಿ‌ ಗುರುಕುಲ ಉಳಿಸಿಕೊಳ್ಳಲು ದೇಶಾದ್ಯಂತ ಹೋರಾಡುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರದೇಶ ಮೂಲದ ಅನಂತ ಗೌತಮ್ ಮಾತನಾಡಿ, 'ನಾನು ದೂರದ ಮಧ್ಯಪ್ರದೇಶದಿಂದ ಸಂಗೀತದಲ್ಲಿ ‌ಜೀವನ‌ ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಆದರೆ ರಾಜ್ಯ ಸರ್ಕಾರದ ನಿರ್ಧಾರ ಈಗ ನಾವು ಬೀದಿಗೆ ಬೀಳುವಂತೆ ಮಾಡಿದೆ. ಸರ್ಕಾರ ತನ್ನ ನಿರ್ಧಾರ ಬದಲಿಸಿ ನಮಗೆ ಮೊದಲಿನಂತೆ ಗುರುಕುಲ ಮಾದರಿಯಲ್ಲಿ ಅಭ್ಯಾಸಕ್ಕೆ ಅನುಕೂಲ ‌ಮಾಡಿಕೊಡಬೇಕು' ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಮೈಸೂರು ಗಂಗೂಬಾಯಿ ಹಾನಗಲ್ ವಿವಿಯಲ್ಲಿ ಪರೀಕ್ಷೆಯಿಂದ ವಂಚಿತರಾದ ನೂರಾರು ಸಂಗೀತ ವಿದ್ಯಾರ್ಥಿಗಳು - Students are deprived of exams

ABOUT THE AUTHOR

...view details