ಮಂಗಳೂರು: ಕರಾವಳಿಯ ಜಾನಪದ ಸೊಗಡು ಕಂಬಳ ಕ್ರೀಡೆ ಇದೀಗ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ. ಕರಾವಳಿ ಜನರಿಗೆ ಮಾತ್ರ ಸೀಮಿತವಾಗಿದ್ದ ಕಂಬಳ ನಿಷೇಧದ ತೂಗುಗತ್ತಿಯಿಂದ ಪಾರಾದ ಬಳಿಕ ಇದು ಮತ್ತಷ್ಟು ಜನಪ್ರಿಯವಾಗಿದೆ. ಕಾಂತಾರ ಸಿನಿಮಾ ಬಂದ ಬಳಿಕವಂತೂ ಕಂಬಳ ಬಹಳಷ್ಟು ಜನಪ್ರಿಯವಾಗಿದೆ. ಈ ಕಂಬಳದಲ್ಲಿ ಮುಖ್ಯ ಹೀರೋ ಕೋಣ. ಇವುಗಳ ಆರೈಕೆ ಬಗ್ಗೆ ವಿಶೇಷ ಮಾಹಿತಿ ತಿಳಿಯೋಣ.
ಕಂಬಳದ ಬಗ್ಗೆ ಮಾಹಿತಿ: ಕಂಬಳದ ಸಾಕಷ್ಟು ಶ್ರಮಪಟ್ಟು ಬೆಳೆಸಿದ ಕೋಣಗಳನ್ನು ಹದ ಮಾಡಿದ ಮಣ್ಣು ಮತ್ತು ನೀರಿನಿಂದ ತುಂಬಿರುವ ಕರೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಕ್ರೀಡೆಯಾಗಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯವಾಗಿರುತ್ತದೆ. ಸ್ಪರ್ಧೆಗೆ 125 ಮೀಟರ್ನಷ್ಟು ಉದ್ದದ ಕರೆಯನ್ನು ಸಜ್ಜುಗೊಳಿಸಿರಲಾಗುತ್ತದೆ.
2020ರಲ್ಲಿ ನಡೆದ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ 100 ಮೀಟರ್ ದೂರವನ್ನು ಕೇವಲ 9.55 ಸೆಕೆಂಡ್ನಲ್ಲಿ ಕ್ರಮಿಸುವ ಮೂಲಕ 2009ರಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಅವರ 9.58 ಸೆಕೆಂಡ್ನಲ್ಲಿ 100 ಮೀಟರ್ ಕ್ರಮಿಸಿದ ದಾಖಲೆಯನ್ನು ಮೀರಿಸಿದ್ದರು. 2021ರಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ 100 ಮೀಟರ್ ದೂರವನ್ನು ಶ್ರೀನಿವಾಸ ಗೌಡ, ಪಾಣಿಲ ಬಾಡ ಪೂಜಾರಿಯವರ ಕೋಣಗಳಿಂದ ಕೇವಲ 8.96 ಸೆಕೆಂಡ್ಗಳಲ್ಲಿ ಪೂರೈಸಿ ಮತ್ತೊಂದು ಹೊಸ ದಾಖಲೆ ಬರೆದಿದ್ದರು.
ಕಂಬಳ ಸೀಸನ್ ಆರಂಭವಾದ ಬಳಿಕ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಅಲ್ಲಲ್ಲಿ ಕಂಬಳ ಕ್ರೀಡೆ ಆಯೋಜಿಸಲಾಗುತ್ತದೆ. ಕರಾವಳಿ ಜಿಲ್ಲೆಯ ಎಲ್ಲಿಯೇ ಕಂಬಳ ನಡೆದರೂ ಸುಮಾರು 150 ಕೋಣಗಳು ಸ್ಪರ್ಧೆಗೆ ಬರುತ್ತವೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿಯೂ 150ಕ್ಕೂ ಅಧಿಕ ಜೋಡಿ ಕಂಬಳ ಕೋಣಗಳು ಭಾಗಿಯಾಗಿದ್ದವು. ಈ ಬಾರಿ ಶಿವಮೊಗ್ಗದಲ್ಲಿಯೂ ಕಂಬಳ ನಡೆಸಲು ತಯಾರಿಯಾಗಿದ್ದು, ಒಂದು ವೇಳೆ ಅಲ್ಲಿ ಕಂಬಳ ನಡೆದರೆ, ಅಲ್ಲಿಯೂ ಅಷ್ಟೇ ಸಂಖ್ಯೆಯಲ್ಲಿ ಕಂಬಳಕ್ಕೆ ಕೋಣಗಳ ಜೋಡಿಗಳು ಭಾಗಿಯಾಗುವ ಸಾಧ್ಯತೆಯಿದೆ.
ಪ್ರತಿ ಕಂಬಳದಲ್ಲಿ ತಪ್ಪದೆ ಭಾಗವಹಿಸುವ ಕೋಣಗಳನ್ನು ಸಣ್ಣಂದಿನಿಂದಲೇ ವಿಶೇಷ ಆಸಕ್ತಿ ವಹಿಸಿ ಸಾಕಲಾಗುತ್ತದೆ. ಕಂಬಳ ಕೋಣಗಳನ್ನು ಇತರ ಜಾನುವಾರುಗಳಂತೆ ಸಾಮಾನ್ಯವಾಗಿ ನೋಡಿಕೊಳ್ಳದೆ, ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಈ ಕಂಬಳ ಕೋಣಗಳನ್ನು ಉಳುಮೆಗೆ ಅಥವಾ ಇನ್ಯಾವುದೆ ಚಟುವಟಿಕೆಗಳಿಗೆ ಬಳಸಲಾಗುವುದಿಲ್ಲ. ಕಂಬಳ ಕೋಣದ ಯಜಮಾನರು ಅದಕ್ಕೆ ವಿಶೇಷ ಆಹಾರದ ವ್ಯವಸ್ಥೆಯ ಜೊತೆಗೆ ಆಧುನಿಕ ವ್ಯವಸ್ಥೆಯನ್ನು ಮಾಡುತ್ತಾರೆ. ಕೋಣಗಳಿಗೆ ಸೆಕೆಯಾಗದಂತೆ ಹಲವೆಡೆ ಫ್ಯಾನ್ ವ್ಯವಸ್ಥೆ ಮಾಡಲಾಗಿದ್ದರೆ, ಕೆಲವೆಡೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೋಣಗಳಿಗೆ ಸ್ನಾನಕ್ಕೆ ಹಲವೆಡೆ ಕೆರೆಗಳ ವ್ಯವಸ್ಥೆ ಇದ್ದರೆ, ಕೆಲವೆಡೆ ಸ್ವಿಮ್ಮಿಂಗ್ ಪೂಲ್ ತರಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇನ್ನು ಅದಕ್ಕೆ ಮಸಾಜ್ ಸೇರಿದಂತೆ ವಿಶೇಷ ಆರೈಕೆಗಳು ಸದಾ ಇರುತ್ತದೆ.
ಲಕ್ಷ ರೂ. ಕೊಟ್ಟು ಕೋಣ ಖರೀದಿ: ಕಂಬಳ ಕೋಣಗಳಿಗೆ ಪ್ರತಿ ದಿನ ಈ ರೀತಿಯ ಆರೈಕೆ ಇರುತ್ತದೆ. ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಅದಕ್ಕೆ ಕಂಬಳದಲ್ಲಿ ಭಾಗಿಯಾಗಲು ತಯಾರಿಗಳು ನಡೆಯುತ್ತಿರುತ್ತವೆ. ಅಂದಾಜು ಪ್ರತಿ ಜೋಡಿ ಕೋಣಕ್ಕೆ ಕಂಬಳ ಕೋಣದ ಯಜಮಾನರು ಪ್ರತಿ ದಿನಕ್ಕೆ 1 ಸಾವಿರದಿಂದ 3 ಸಾವಿರ ರೂಪಾಯಿವರೆಗೆ ಖರ್ಚು ಮಾಡುತ್ತಾರೆ. ಇನ್ನು ಜಾಣ ಮತ್ತು ಗೆಲುವು ತರುವ ಕೋಣಗಳನ್ನು ಲಕ್ಷಾಂತರ ಕೊಟ್ಟು ಖರೀದಿಸುವ ಕ್ರಿಯೆಗಳು ನಡೆಯುತ್ತವೆ.
ಪ್ರತಿ ಕಂಬಳಕ್ಕೆ ಕೋಣಗಳ ಯಜಮಾನರು ಕನಿಷ್ಠ 50 ಸಾವಿರ ರೂಪಾಯಿವರೆಗೆ ಖರ್ಚು ಮಾಡುತ್ತಾರೆ. ಕೋಣಗಳ ಸಾಗಣೆ, ಕೋಣಗಳನ್ನು ಓಡಿಸುವುವುದು ಸೇರಿದಂತೆ ಪ್ರತಿ ಕಂಬಳಕ್ಕೆ ಇಷ್ಟು ಖರ್ಚು ಮಾಡುತ್ತಾರೆ. ಇದರಲ್ಲಿ ಪದಕ ಗೆದ್ದ ಕೋಣಗಳಿಗೆ ಖರ್ಚು ಮಾಡಿದ ದುಡ್ಡು ಬಂದರೆ, ಉಳಿದ ಕೋಣಗಳಿಗೂ ಯಜಮಾನರು ಖರ್ಚು ಮಾಡುತ್ತಾರೆ. ಆದರೂ ಕಂಬಳ ಕೋಣಗಳನ್ನು ವಿಶೇಷ ಕಾಳಜಿಯಿಂದ ಆರೈಕೆ ಮಾಡುತ್ತಾರೆ.
ಕಂಬಳ ಕೋಣಗಳನ್ನು ಸಾಕುವ ಬಗ್ಗೆ ಮಾತನಾಡಿದ ಕೇರಳದ ಕಾಸರಗೋಡಿನ ಕಂಬಳ ಕೋಣದ ಯಜಮಾನ ಇಸುಬು ಮಂಜೇಶ್ವರ, "ಕಂಬಳ ಕೋಣವನ್ನು ಸಣ್ಣಂದಿನಲ್ಲಿ ತಂದು ಅದಕ್ಕೆ ಹುರುಳಿ, ಹುಲ್ಲು ನೀಡಿ, ಎಣ್ಣೆ ಹಾಕಿ ಮಾಲೀಸ್ ಮಾಡಿ ಸಾಕುತ್ತೇವೆ. ಅದಕ್ಕೆ ನಾವು ಪ್ರೀತಿಯಿಂದ ಹೆಸರನ್ನು ಇಡುತ್ತೇವೆ. ಕಂಬಳ ಇಲ್ಲದ ಸಂದರ್ಭದಲ್ಲಿ ಪ್ರತಿ ದಿನ ಈ ರೀತಿ ಮಾಡಬೇಕು. ನಾವು ಹೇಳಿದಂತೆ ಕೇಳುವ ರೀತಿಯಲ್ಲಿ ಅದಕ್ಕೆ ಬುದ್ಧಿ ಕಲಿಸುತ್ತೇವೆ. ಕೋಣೆ ನಿರ್ಮಿಸಿ ಫ್ಯಾನ್, ಬೆಡ್ ವ್ಯವಸ್ಥೆ ಮಾಡುತ್ತೇವೆ. ಈಗ ಇರುವ ಕೋಣ ತಂದು ಮೂರು ವರ್ಷ ಆಯಿತು. ಹಿಂದಿನ ಕೋಣವನ್ನು ಕೊಟ್ಟಿದ್ದೇನೆ. ಕೆಲವು ಪದಕಗಳನ್ನು ಗೆದ್ದಿವೆ. ನಾನು 14 ವರ್ಷದ ಪ್ರಾಯದಲ್ಲಿ ಕಂಬಳ ಓಡಿಸಿದ್ದು, ಇದೀಗ 74 ವರ್ಷ ಆದರೂ ಅದನ್ನು ಮುಂದುವರಿಸಿದ್ದೇನೆ" ಎನ್ನುತ್ತಾರೆ.
ಜೈ ತುಳುನಾಡು ತಂಡದ ಕಂಬಳ ಕೋಣದ ಗಣೇಶ್ ಪೂಜಾರಿ ಮಾತನಾಡಿ, "ನಾವು ಸಣ್ಣ ಮರಿಯನ್ನು ತಂದು ತರಬೇತಿ ಕೊಡುತ್ತೇವೆ. ಆಹಾರವಾಗಿ ಹುರುಳಿ ಬೇಯಿಸಿ ಹಾಕುತ್ತೇವೆ. ಬೈಹುಲ್ಲು, ಬಕೆಟ್ ನೀರು ಕೊಡುತ್ತೇವೆ. ಬೆಳಗ್ಗೆ 6 ಗಂಟೆಗೆ ವ್ಯಾಯಾಮ ಮಾಡಿಸುತ್ತೇವೆ. ನದಿ, ಕೆರೆಯಲ್ಲಿ ಈಜಲು ಬಿಡುತ್ತೇವೆ. ಹಟ್ಟಿಯಲ್ಲಿ ಫ್ಯಾನ್, ಮ್ಯಾಟ್ ಹಾಕಿ ಮಲಗಿಸುತ್ತೇವೆ. ಕಂಬಳ ಆರಂಭವಾಗುವ ಎರಡು ತಿಂಗಳ ಮುಂಚೆ ಅದಕ್ಕೆ ಓಡುವ ತರಬೇತಿ ನೀಡುತ್ತೇವೆ" ಎಂದು ತಿಳಿಸಿದರು.
ಕಂಬಳ ಕೋಣ ಯಜಮಾನ ಚಂದ್ರಹಾಸ ಮಾತನಾಡಿ, "ಕಂಬಳ ಕೋಣವನ್ನು ಮಗುವಿನಂತೆ ಸಾಕುತ್ತೇವೆ. ಇದಕ್ಕೆ ಬೇಕಾದ ಆಹಾರ ನೀಡಿ, ಇದನ್ನು ಕಂಬಳಕ್ಕೆ ಮಾತ್ರ ಉಪಯೋಗಿಸುತ್ತೇವೆ. ಕಂಬಳದಲ್ಲಿ ಭಾಗವಹಿಸಲೆಂದೇ ಹೋಗಲು ಖರ್ಚು ಮಾಡುತ್ತೇವೆ. ಒಂದು ದಿವಸಕ್ಕೆ ಒಂದು ಕೋಣಕ್ಕೆ 1 ಸಾವಿರ ಖರ್ಚು ಮಾಡುತ್ತೇವೆ. ಕಂಬಳ ಇಲ್ಲದಿದ್ದಾಗಲು ಇದರ ಆರೈಕೆ ವಿಶೇಷವಾಗಿ ಮಾಡುತ್ತೇವೆ" ಎಂದರು.
ಕಂಬಳ ಕೋಣ ತಂಡದ ಸತೀಶ್ ಮಾತನಾಡಿ, "ಕಂಬಳ ಕೋಣಗಳಿಗೆ ಕಂಬಳ ಮುಗಿದ ನಂತರ ಕುಂಬಳಕಾಯಿ, ಹುರುಳಿ ಮೊದಲಾದವುಗಳನ್ನು ಕೊಡುತ್ತೇವೆ. ಮಳೆಗಾಲದಲ್ಲಿ ಹುರುಳಿಯನ್ನು ಬೇಯಿಸಿ ಕೊಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಹಾವೇರಿ: ದೇವರ ಕೋಣ ನಾಪತ್ತೆ, ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು