ಬಳ್ಳಾರಿ: ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ದಲ್ಲಿ ಶನಿವಾರ ಬೆಳಗ್ಗೆ ಬಾಣಂತಿಯೊಬ್ಬರು ಸಾವಿಗೀಡಾಗಿದ್ದಾರೆ. ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಎಂಬುವವರ ಪತ್ನಿ ಮಹಾದೇವಿ(21) ಮೃತರು.
ಮಹಾದೇವಿ ಅವರಿಗೆ ಜ. 25 ರಂದು ಸಿಸೇರಿಯನ್ ಮೂಲಕ ಹೆಣ್ಣು ಮಗುವಿನ ಜನನವಾಗಿತ್ತು. ಅಂದಿನಿಂದಲೂ ಆರೋಗ್ಯವಾಗಿದ್ದ ಮಹಾದೇವಿ ಅವರು ಮೂರು ದಿನಗಳ ಹಿಂದೆ ಅಸ್ವಸ್ಥರಾಗಿದ್ದರು, ವಿಪರೀತ ಜ್ವರ ಬಂದಿತ್ತು. ಸೋಂಕಿನಿಂದಾಗಿ ಮಹಾದೇವಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಅವರು ಕೊಟ್ಟಿಲ್ಲ ಎಂದು ಪತಿ ನಂದೀಶ್ ಆರೋಪಿಸಿದ್ದಾರೆ.
"ಕೆಲವು ಔಷಧಿ ಮತ್ತು ನೆಬುಲೈಸರ್ನ್ನು ಹೊರಗಿನಿಂದ ತರುವಂತೆ ಚೀಟಿ ಬರೆದು ಕೊಡಲಾಗಿದೆ. ತಂದು ಕೊಟ್ಟದ್ದನ್ನೂ ಬಳಸಿಲ್ಲ. ಮಾದೇವಿ ಅವರಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ ಎಂದು ಮೃತರ ಸಂಬಂಧಿಯಾದ ಹೊನ್ನೂರಮ್ಮ" ಆರೋಪಿಸಿದ್ದಾರೆ.
"ಸಿಸೇರಿಯನ್ ಆಗುವುದಕ್ಕೂ ಮೊದಲು ನನ್ನ ಸೋದರಿ ಆರೋಗ್ಯವಾಗಿಯೇ ಇದ್ದರು. ಸಿಸೇರಿಯನ್ ಬಳಿಕವೂ ಒಂದೆರಡು ದಿನ ಆರಾಮವಾಗಿಯೇ ಇದ್ದರು. ಆದರೆ ಸೋಂಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಶಸ್ತ್ರಚಿಕಿತ್ಸಾ ಕೊಠಡಿ ಅಥವಾ ಶಸ್ತ್ರಚಿಕಿತ್ಸೆಗೆ ಬಳಸಿದ ಸಾಧನಗಳು ಸರಿಯಾಗಿ ಸ್ವಚ್ಛ ಗೊಳ್ಳದ ಕಾರಣದಿಂದಲೇ ಹೀಗೆ ಆಗಿದೆ" ಎಂದು ಬಿಮ್ಸ್ ಸಿಬ್ಬಂದಿಯೂ ಆದ ಮಹಾದೇವಿ ಸೋದರ ಹೇಳಿದ್ದಾರೆ.
ಈ ಬಗ್ಗೆ ಬಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, "ಥೋಂಬೋಎಂಬಾಲಿಸಂ" ಎಂಬ ಸಮಸ್ಯೆಯಿಂದಾಗಿ ಬಾಣಂತಿ ಮೃತಪಟ್ಟಿದ್ದಾರೆ. ಆದರೂ ಘಟನೆಯ ಬಗ್ಗೆ ತನಿಖೆ ಮಾಡಲಾಗುವುದು. ವೈದ್ಯರು, ಸಿಬ್ಬಂದಿಯ ನಿರ್ಲಕ್ಷ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಮ್ಸ್ನಲ್ಲಿ ಬಾಣಂತಿ ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ