ಕರ್ನಾಟಕ

karnataka

ಉಡುಪಿ: ಸೈಬರ್ ಪೊಲೀಸರ ಹೆಸರಿನಲ್ಲಿ ಟೆಕ್ಕಿಗೆ ಕರೆ ಮಾಡಿ 4.80 ಲಕ್ಷ ರೂ. ವಂಚನೆ! - Fraud Case

By ETV Bharat Karnataka Team

Published : Aug 24, 2024, 3:04 PM IST

ಯುವತಿಯೋರ್ವಳನ್ನು ವಿವಿಧ ಆಯಾಮದ ಮೂಲಕ ಮೋಸ ಮಾಡಿದ ವಂಚಕರ ತಂಡವೊಂದು, ಆಕೆಯಿಂದ ಅಪಾರ ಪ್ರಮಾಣದ ಹಣ ವರ್ಗಾಯಿಸಿಕೊಂಡ ಘಟನೆ ನಡೆದಿದೆ. ಮೋಸದ ಜಾಲಕ್ಕೆ ಸಿಲುಕಿದ ಯುವತಿ ಈ ಬಗ್ಗೆ ದೂರು ನೀಡಿದ್ದಾರೆ.

FRAUD CASE
ಕಾಪು ಪೊಲೀಸ್​ ಠಾಣೆ (ETV Bharat)

ಉಡುಪಿ: ಸಾಫ್ಟ್​ವೇರ್‌ ಎಂಜಿನಿಯರ್‌ ಯುವತಿಗೆ ಮುಂಬೈ ಸೈಬರ್‌ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ಆಕೆಯ ಖಾತೆಯಿಂದ ಮೂರು ಗಂಟೆಯಲ್ಲಿ 4.80 ಲಕ್ಷ ರೂ. ನಗದು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಾಪು ಕೊಪ್ಪಲಂಗಡಿ ನಿವಾಸಿಯಾಗಿರುವ ಯುವತಿ ಮಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ಕರ್ತವ್ಯದಲ್ಲಿದ್ದಾಗ ಆಗಸ್ಟ್​ 21ರಂದು ಮೊಬೈಲ್​ ನಂಬರ್‌ನಿಂದ ಮುಂಬೈ ಸೈಬರ್‌ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಹೆಸರಿನಲ್ಲಿ ಕೊರಿಯರ್‌ ಬಂದಿದ್ದು, ಅದರಲ್ಲಿ ನಿಷೇಧಿತ ಡ್ರಗ್ಸ್‌ ಇರುವುದಾಗಿ ತಿಳಿಸಿದ್ದಾಳೆ. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ಬೆದರಿಸಿದ್ದಳು. ಅನಂತರ ಮತ್ತೋರ್ವರಿಗೆ ಕರೆಯನ್ನು ಕನೆಕ್ಟ್ ಮಾಡಿದ್ದಳು.

ಆ ಮಹಿಳೆ ಮಾತನಾಡಿ, ನಾನು ನಾರ್ಕೋಟಿಕ್‌ ಡ್ರಗ್ಸ್​ ಡಿಪಾರ್ಟ್‌ಮೆಂಟ್‌ನ ಪೊಲೀಸ್‌ ಅಧಿಕಾರಿಯಾಗಿದ್ದು, ವಿವರಕ್ಕಾಗಿ ಟೆಲಿಗ್ರಾಂ ಆ್ಯಪ್‌ ಅನ್ನು ಓಪನ್‌ ಮಾಡುವಂತೆ ತಿಳಿಸಿದ್ದಳು. ಆಗ ಆ್ಯಪ್‌ ಇಲ್ಲವೆಂದು ಹೇಳಿದ್ದಕ್ಕೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಬಳಿಕ ಮಹಿಳಾ ಪೊಲೀಸ್‌ ಅಧಿಕಾರಿಯ ಪ್ರೊಫೈಲ್‌ ಇರುವ ಐಡಿಯೊಂದನ್ನು ಕಳುಹಿಸಿ ನೀವು ಕೊರಿಯರ್‌ ಕಳುಹಿಸಿರುವ ಬಗ್ಗೆ ನಾವು ತನಿಖೆ ಮಾಡಬೇಕಿದೆ. ಹಾಗಾಗಿ ಕರೆ ಕಟ್‌ ಮಾಡಬಾರದೆಂದು ಎಚ್ಚರಿಕೆ ನೀಡಿದ್ದರು. ಅವರ ಬೆದರಿಕೆಗೆ ಹೆದರಿದ ಯುವತಿಯು, ಟೆಲಿಗ್ರಾಂ ಆ್ಯಪ್‌ ಮೂಲಕ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಹಂಚಿಕೊಂಡಿದ್ದರು.

ಅವರು ಪೊಲೀಸ್‌ ಇಲಾಖೆಯ ತನಿಖೆಯ ಬಗೆಗಿನ ವಿವರಗಳನ್ನು ಪಿಡಿಎಫ್‌ ಫೈಲ್‌ ಮೂಲಕ ಕಳುಹಿಸಿಕೊಟ್ಟಿದ್ದರು. ಅನಂತರ ಮತ್ತೊಬ್ಬ ವ್ಯಕ್ತಿಯ ಫೋಟೋ ತೋರಿಸಿ, ಈತ ನಿಮ್ಮ ಐಡಿ ಬಳಸಿ, ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆದು ವಂಚಿಸುತ್ತಿದ್ದಾನೆ, ನಿಮಗೆ ಅವರ ಪರಿಚಯವಿದೆಯೇ? ಎಂದು ಪ್ರಶ್ನಿಸಿದ್ದರು. ಪರಿಚಯವಿಲ್ಲವೆಂದು ತಿಳಿಸಿದಾಗ ಆಕೆ ಮತ್ತೋರ್ವ ನಕಲಿ ಅಧಿಕಾರಿಗೆ ಫೋನ್‌ ಕೊಟ್ಟಿದ್ದು, ಆತ ಪಾರ್ಸೆಲ್‌ ಕಳುಹಿಸಿದ ಬಗ್ಗೆ ತನಿಖೆಗಾಗಿ ಬ್ಯಾಂಕ್‌ ಖಾತೆ ಪರಿಶೀಲಿಸಬೇಕು, ಅದಕ್ಕೆ ಆರ್‌ಬಿಐಗೆ ಖಾತೆ ವಿವರ ಕಳುಹಿಸಿಕೊಡಬೇಕಿದೆ, ನಿಮ್ಮ ಖಾತೆಯಿಂದ ಹಣ ರವಾನೆಯಾಗುತ್ತದೆಯೇ ಎಂದು ಪರಿಶೀಲಿಸಬೇಕಿದೆ ಎಂದು ಹೇಳಿ ಒಂದು ಖಾತೆಯನ್ನು ನೀಡಿದ್ದ. ಅದಕ್ಕೆ 2 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಆ ಬಳಿಕ ಮತ್ತೊಂದು ಖಾತೆ ನೀಡಿ ಅದಕ್ಕೆ ಮತ್ತೆ 2 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು.

ಮತ್ತೆ ಖಾತೆಯಲ್ಲಿ 80 ಸಾವಿರ ಉಳಿದಿದ್ದು, ಅದನ್ನು ಯುಪಿಐ ಐಡಿ ನೀಡಿ ವರ್ಗಾಯಿಸಿಕೊಂಡಿದ್ದರು. ಖಾತೆಯಲ್ಲಿದ್ದ ಹಣ ಖಾಲಿಯಾದ ಬಳಿಕ ಐಸಿಐಸಿಐ ಆ್ಯಪ್‌ನಿಂದ ಪ್ರಿ ಅಪ್ರೂವ್‌ ಸಾಲ ಮಾಡುವಂತೆ ತಿಳಿಸಿದ್ದು, ಅದರಂತೆ ಆ್ಯಪ್‌ ಡೌನ್‌ಲೋಡ್‌ ಮಾಡಿದಾಗ 4,29,616 ರೂ. ಸಾಲ ಮಂಜೂರಾಗಿರುವ ಬಗ್ಗೆ ಮೆಸೇಜ್‌ ಕಳುಹಿಸಿದ್ದರು. ಅದರ ವಿವರವನ್ನು ಟೆಲಿಗ್ರಾಂ ಆ್ಯಪ್‌ ಮೂಲಕ ಪಡೆದುಕೊಂಡಿದ್ದು, ಅದರಲ್ಲಿ 1 ಲಕ್ಷ ರೂ. ಹಣವನ್ನು ಬ್ಯಾಂಕ್‌ ಆಫ್‌ ಬರೋಡಾ ಖಾತೆಗೆ ರವಾನಿಸುವಂತೆ ತಿಳಿಸಿದ್ದರು.

ಆ ವೇಳೆ ಬ್ಯಾಂಕ್‌ ಆಫ್‌ ಬರೋಡಾ ಖಾತೆಯ ವಿವರ ಇಲ್ಲದ್ದರಿಂದ ಹಣ ವರ್ಗಾಯಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಗ ಅವರೇ ಐಸಿಐಸಿಐ ಬ್ಯಾಂಕ್‌ನ ಟೋಲ್‌ ಫ್ರೀ ನಂಬರ್​ಗೆ ಕರೆ ಮಾಡಿ ದೂರು ನೀಡಲು ತಿಳಿಸಿದ್ದರು. ಅವರ ಸೂಚನೆಯಂತೆ ಕರೆ ಮಾಡುತ್ತಿದ್ದಾಗ ಸ್ನೇಹಿತರೊಬ್ಬರು ಇದು ಮೋಸದ ಜಾಲ, ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಯುವತಿಯನ್ನು ಎಚ್ಚರಿಸಿದರು. ಅದೇ ವೇಳೆ ವಂಚಕರ ತಂಡದ ಮತ್ತೊಬ್ಬ ವ್ಯಕ್ತಿ ಮತ್ತೆ ಕರೆ ಮಾಡಿದಾಗ, ನಾನು ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಯುವತಿ ಹೇಳಿದಾಗ ಕರೆ ಕಟ್‌ ಮಾಡಿದ್ದರು. ಟೆಲಿಗ್ರಾಂ ಮೂಲಕ ಕಳುಹಿಸಿದ್ದ ಮಾಹಿತಿಗಳನ್ನೂ ಕೂಡ ಡಿಲೀಟ್‌ ಮಾಡಿದ್ದರು. ಮೋಸಕ್ಕೊಳಗಾದ ಯುವತಿ ಈ ಬಗ್ಗೆ ದೂರು ಕಾಪು ಪೊಲೀಸ್​ ಠಾಣೆಯಲ್ಲಿ ನೀಡಿದ್ದಾರೆ.

1.50 ಲಕ್ಷ ರೂ. ತಡೆಹಿಡಿದುಕೊಳ್ಳುವಲ್ಲಿ ಯಶಸ್ವಿ:ಆ. 21ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30ರ ನಡುವಿನ 3 ಗಂಟೆಯ ಅವಧಿಯೊಳಗೆ ಸೈಬರ್‌ ವಂಚಕರಿಂದ ವಂಚನೆಗೊಳಗಾದ ಯುವತಿ, ಸ್ಥಳೀಯ ಪಾಂಡೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಲು ತೆರಳಿದ್ದರು. ಆಗ ಪೊಲೀಸರು ಸಂಜೆ 4.30ಕ್ಕೆ ಬರುವಂತೆ ತಿಳಿಸಿದ್ದರು. ಅಲ್ಲಿಂದ ಐಸಿಐಸಿಐ ಬ್ಯಾಂಕ್‌ಗೆ ತೆರಳಿದ ಯುವತಿ ತನ್ನ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಬ್ಯಾಂಕ್‌ ಸಿಬಂದಿ ತಕ್ಷಣ 1930ಗೆ ಕರೆ ಮಾಡಿ ದೂರು ನೀಡುವಂತೆ ತಿಳಿಸಿದ್ದರು. ಸೈಬರ್‌ ಕ್ರೈಂನವರು ತುರ್ತು ಸ್ಪಂದಿಸಿದ ಪರಿಣಾಮ 1.50 ಲಕ್ಷ ರೂ. ತಡೆಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ದೂರು ಕಾಪು ಪೊಲೀಸ್​ ಠಾಣೆಗೆ ವರ್ಗವಾಗಿದೆ.

ಸಾಲದ ಹಣ ಉಳಿಸಿಕೊಂಡರು: ಲೋನ್‌ ಆ್ಯಪ್‌ ತೆರೆದು ಅದರ ಮೂಲಕ ಪಡೆದಿದ್ದ ಸಾಲವನ್ನೂ ಸೈಬರ್‌ ವಂಚಕರು ವರ್ಗಾಯಿಸುವ ಆಲೋಚನೆ ಹೊಂದಿದ್ದರು. ಆದರೆ, ಅದು ತತ್‌ಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಯುವತಿ ಎಚ್ಚೆತ್ತುಕೊಂಡು ಬ್ಯಾಂಕ್‌ಗೆ ಹೋಗಿ ತನ್ನ ಖಾತೆಗೆ ಬಂದಿದ್ದ ಹಣವನ್ನು ತಂದೆಯ ಖಾತೆಗೆ ವರ್ಗಾಯಿಸಿ ತನ್ನ ಖಾತೆಯಲ್ಲಿ ಸ್ಥಗಿತಗೊಳಿಸಿದ್ದರಿಂದ ಸಾಲದ ಹಣ ಉಳಿದುಕೊಂಡಿತು.

ಇದನ್ನೂ ಓದಿ: ಉಡುಪಿ: 3 ತಿಂಗಳಿಂದ ಇನ್​ಸ್ಟಾಗ್ರಾಮ್​​ನಲ್ಲಿ ಪರಿಚಯ, ಅಪಹರಿಸಿ ಯುವತಿಯ ಮೇಲೆ ಅತ್ಯಾಚಾರ - Girl RAPE IN UDUPI

ABOUT THE AUTHOR

...view details