ಬೆಂಗಳೂರು :ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಮಾಜಿ ರೌಡಿಶೀಟರ್ ಬಿ.ಎಂ.ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಹಾಗೂ ಅವರ ಗನ್ ಮ್ಯಾನ್ನನ್ನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮಶೇಖರ್ ಎಂಬ ಉದ್ಯಮಿಗೆ ಗನ್ ತೋರಿಸಿ ಹಲ್ಲೆಗೈದು, ಬೆದರಿಕೆ ಹಾಕಿದ ಆರೋಪದಡಿ ರವಿಯನ್ನ ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಉದ್ಯಮಿ ಸೋಮಶೇಖರ್ ಅವರು ಶ್ರೀಕಾಂತ್ ಎಂಬಾತನಿಗೆ ಸಾಲದ ರೂಪದಲ್ಲಿ 75 ಲಕ್ಷ ಹಣ ಕೊಟ್ಟಿದ್ದರು. ಹಣ ಮರಳಿ ಪಡೆಯುವ ಸಲುವಾಗಿ ಆಗಾಗ ಶ್ರೀಕಾಂತ್ನನ್ನ ಸೋಮಶೇಖರ್ ಭೇಟಿಯಾಗುತ್ತಿದ್ದರು. ಆದರೆ, ಈ ನಡುವೆ ಮಧ್ಯಪ್ರವೇಶಿಸಿದ್ದ ರವಿ, ಶ್ರೀಕಾಂತ್ ಬಳಿ ಹಣ ಕೇಳದಂತೆ ಹಲ್ಲೆಗೈದು, ತಮ್ಮ ಗನ್ ಮ್ಯಾನ್ ಬಳಿಯಿದ್ದ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸದಾಶಿವನಗರ ಠಾಣೆಗೆ ಸೋಮಶೇಖರ್ ದೂರು ನೀಡಿದ್ದರು. ಅದರನ್ವಯ ರವಿ ಅವರನ್ನ ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.