ಕರ್ನಾಟಕ

karnataka

ETV Bharat / state

'ದೆಹಲಿಗೆ ಹೋಗುವಾಗ ಧಾರವಾಡ ಪೇಡಾ ಕೊಂಡೊಯ್ಯುತ್ತಿದ್ದೆವು': ಹುಬ್ಬಳ್ಳಿಯಲ್ಲಿದ್ದಾರೆ ಮನಮೋಹನ್​ ಸಿಂಗ್ ಪತ್ನಿಯ ಸಂಬಂಧಿಕರು - MANMOHAN SINGH RELATIVES

ಹುಬ್ಬಳ್ಳಿ ನಗರದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್ ಅವರ ಪತ್ನಿಯ ಕುಟುಂಬಸ್ಥರು ವಾಸವಿದ್ದಾರೆ. ಸಿಂಗ್​ ಅವರೊಂದಿಗಿನ ಒಡನಾಟದ ಕುರಿತು ಅವರು ಮಾತನಾಡಿದರು.

ಮನಮೋಹನ್ ಸಿಂಗ್ ಜೊತೆ ಹರ್ನಾಮ್ ಸಿಂಗ್ ಮತ್ತು ಅವರ ನಿವಾಸ
ಮನಮೋಹನ್ ಸಿಂಗ್ ಜೊತೆ ಹರ್ನಾಮ್ ಸಿಂಗ್ ಮತ್ತು ಅವರ ನಿವಾಸ (ETV Bharat)

By ETV Bharat Karnataka Team

Published : Dec 27, 2024, 4:02 PM IST

ಹುಬ್ಬಳ್ಳಿ:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದು, ದೇಶ ಕಂಡ ಅಪರೂಪದ ನಾಯಕನಿಗೆ ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಸಿಂಗ್ ಅವರ ಪತ್ನಿಯ ಸಂಬಂಧಿಕರು ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಮಾಧ್ಯಮದವರಿಗೆ ಮಾತಿಗೆ ಸಿಕ್ಕಿದ್ದಾರೆ.

ಮನಮೋಹನ್​ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬದವರು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಾಸವಿದ್ದಾರೆ. ಇಲ್ಲಿನ ಹರ್ನಾಮ್ ಸಿಂಗ್ ಕೊಹ್ಲಿ ಎಂಬವರನ್ನು ಹರ್ಪ್ರೀತ್ ಕೌರ್ ವಿವಾಹವಾಗಿದ್ದರು. ಈ ಕಾರಣದಿಂದ ಮನಮೋಹನ್ ಸಿಂಗ್ ಅವರಿಗೂ ಹುಬ್ಬಳ್ಳಿಗೂ ಹಲವು ವರ್ಷಗಳಿಂದಲೂ ನಂಟಿತ್ತು.

ಮನಮೋಹನ್​ ಸಿಂಗ್ ಪತ್ನಿಯ ಸಂಬಂಧಿಕರು (ETV Bharat)

ಆಟೋಮೊಬೈಲ್ ಶಾಪ್ ಹೊಂದಿರುವ ಹರ್ನಾಮ್ ಸಿಂಗ್ ಕೊಹ್ಲಿ, ಹುಬ್ಬಳ್ಳಿಯ ಹೊರವಲಯದಲ್ಲಿ ದಾಬಾ ನಡೆಸುತ್ತಿದ್ದಾರೆ. 14 ವರ್ಷಗಳ ಹಿಂದೆ ಹರ್ಪ್ರೀತ್ ಕೌರ್ ಸಾವನ್ನಪ್ಪಿದ್ದಾರೆ. ಕೌರ್ ಪತಿ ಹರ್ನಾಮ್ ಸಿಂಗ್ ಕೊಹ್ಲಿ ಅನಾರೋಗ್ಯಪೀಡಿತರಾಗಿದ್ದಾರೆ. ಮನಮೋಹನ್ ಸಿಂಗ್​ ನಿಧನದ ಹಿನ್ನೆಲೆಯಲ್ಲಿ ಹರ್ಪ್ರೀತ್ ಕೌರ್ ಮನೆಯಲ್ಲೀಗ ನೀರವ ಮೌನ ಆವರಿಸಿದೆ.

ಸಿಂಗ್​ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ:ಹರ್ಪ್ರೀತ್ ಕೌರ್ ಪುತ್ರ ಮನಮಿತ್ ಕೊಹ್ಲಿ ಮಾತನಾಡಿ, "ಮನಮೋಹನ್ ಸಿಂಗ್ ಅಗಲಿಕೆ ಅತ್ಯಂತ ನೋವು ತಂದಿದೆ. ನಮಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ನಷ್ಟವಾಗಿದೆ. ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗಿನಿಂದ ನಮ್ಮ ಕುಟುಂಬದ ಜೊತೆ ಒಡನಾಟವಿತ್ತು. ಎಷ್ಟೇ ದೊಡ್ಡ ಸ್ಥಾನಕ್ಕೆ‌ ಹೋದ್ರೂ ಅತ್ಯಂತ ಸರಳ ವ್ಯಕ್ತಿತ್ವ ಅವರದ್ದು. ಬಿಡುವಿಲ್ಲದ ಕೆಲಸದ ಮಧ್ಯೆ ಕುಟುಂಬ ಸದಸ್ಯರ ಜೊತೆ ಬೆರೆಯುತ್ತಿದ್ದರು. ಮುಂಬೈನಲ್ಲಿದ್ದಾಗ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ದೆಹಲಿಗೆ ಶಿಫ್ಟ್ ಆದ ಬಳಿಕ ಒಡನಾಟ ಕಡಿಮೆಯಾಗಿತ್ತು. ಪ್ರಧಾನಮಂತ್ರಿ ಸ್ಥಾನಕ್ಕೆ ಹೋದ್ರೂ ಒಂದಿಷ್ಟು ಸೊಕ್ಕು, ಗರ್ವ ಇರಲಿಲ್ಲ. ಎಲ್ಲರೊಂದಿಗೂ ಅತ್ಯಂತ ಸರಳವಾಗಿ ಬೆರೆತು ಮಾತನಾಡುತ್ತಿದ್ದರು" ಎಂದು ಸ್ಮರಿಸಿಕೊಂಡರು.

ಸಿಹಿ ತಿಂಡಿ ಇಷ್ಟಪಡುತ್ತಿದ್ದ ಸಿಂಗ್​:ಮನಮಿತ್ ಕೊಹ್ಲಿ ಅವರ ಪತ್ನಿ ಅಪರ್ಣಾ ಮಾತನಾಡಿ, "ಮನಮೋಹನ್ ಸಿಂಗ್ ಅವರು ಸಿಹಿ ತಿಂಡಿಗಳನ್ನು ಇಷ್ಟಪಡುತ್ತಿದ್ದರು. ನಾವು ದೆಹಲಿಗೆ ಹೋಗುವಾಗ ಧಾರವಾಡ ಪೇಡಾ ಮತ್ತಿತರ ಸಿಹಿ ತೆಗೆದುಕೊಂಡು ಹೋಗುತ್ತಿದ್ದೆವು. ಸಿಂಗ್ ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಹುಬ್ಬಳ್ಳಿಯಿಂದ ನಾಲ್ಕು ಜನ ದೆಹಲಿಗೆ ತೆರಳಿ ನಾಳಿನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಮನಮೋಹನ ಸಿಂಗ್​​ ಬದುಕು ಒಂದು ರೀತಿ ಪವಾಡ: ಸಿಎಂ ಸಿದ್ದರಾಮಯ್ಯ ಸಂತಾಪ

ABOUT THE AUTHOR

...view details