ಕರ್ನಾಟಕ

karnataka

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿ: ಬೊಮ್ಮಾಯಿ - Former CM Bommai

By ETV Bharat Karnataka Team

Published : May 31, 2024, 1:14 PM IST

Updated : May 31, 2024, 2:16 PM IST

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಪ್ರಜ್ವಲ್​ ರೇವಣ್ಣ ಅವರ ಬಂಧನ ಹಾಗೂ ಎಸ್​ಐಟಿ ತನಿಖೆ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Former CM Basavaraja Bommai
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ETV Bharat)

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ETV Bharat)

ಹುಬ್ಬಳ್ಳಿ:"ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಈ ಮೂಲಕ ಸಂತ್ರಸ್ತರಿಗೆ ನ್ಯಾಯ ಸಿಗಬೇಕಿದೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, "ಕಾನೂನು ತನ್ನದೇ ಆದ ಪ್ರಕ್ರಿಯೆ ನಡೆಸಲಿದೆ. ಕಾನೂನಾತ್ಮಕವಾಗಿ ಪ್ರಜ್ವಲ್ ರೇವಣ್ಣ ಶರಣಾಗಿದ್ದಾರೆ. ಎಸ್​ಐಟಿಯವರು ಕಟಿಬದ್ಧವಾಗಿ ತನಿಖೆ ಮಾಡಬೇಕು. ಪ್ರಕರಣದಲ್ಲಿನ ಸಂತ್ರಸ್ತರಿಗೆ ನ್ಯಾಯ ಸಿಗಬೇಕು.‌ ಈ ನಿಟ್ಟಿನಲ್ಲಿಯೇ ತನಿಖೆ ನಡೆಯಬೇಕೆಂಬುದು ರಾಜ್ಯದ ಜನರ ಇಚ್ಛೆ" ಎಂದರು.

ಪ್ರಜ್ವಲ್ ಪ್ರಕರಣ ರಾಜಕೀಯಪ್ರೇರಿತ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, "ಪ್ರಕರಣ ಯಾವ ರೀತಿ ಬೆಳಕಿಗೆ ಬಂದಿತು. ಯಾರು ಪೆನ್​ಡ್ರೈವ್ ಹಂಚಿಕೆ ಮಾಡಿದರು, ಯಾಕೆ ಮಾಡಿದರು, ಇವೆಲ್ಲವನ್ನೂ ನೋಡಿದಾಗ ಇದರಲ್ಲಿ ರಾಜಕಾರಣ ಬೆರೆತಿರುವುದು ಸ್ಪಷ್ಟ. ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಕೊಡುವುದು ಒಂದು ಭಾಗ. ಇಂತಹ ವಿಚಾರಗಳನ್ನು ಪ್ರಚಾರ ಮಾಡುವುದು ಕೂಡ ಕಾನೂನಿಗೆ ವಿರುದ್ಧ. ಆ ಮಗ್ಗುಲಿನಲ್ಲಿಯೂ ಎಸ್​ಐಟಿ ತನಿಖೆ ಮಾಡಬೇಕು" ಎಂದು ಹೇಳಿದರು.

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಬಂಧನ: ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು? - G Parameshwar

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, "ಸಿಬಿಐ ತನಿಖೆಗೆ ವಹಿಸಲೇಬೇಕಾದ ಪ್ರಕರಣ ಇದು. ಈ ಪ್ರಕರಣದಲ್ಲಿ ಬ್ಯಾಂಕ್ ಸಹ ತೊಡಗಿಗೊಂಡಿದೆ. ಯಾವುದೇ ಬ್ಯಾಂಕ್​ನಲ್ಲಿ 10 ಕೋಟಿಗಿಂತ ದೊಡ್ಡ ಮೊತ್ತದ ಹಗರಣವಾದರೆ ಸಿಬಿಐಗೆ ಕೊಡುವ ವಾಡಿಕೆ ಇದೆ. ಈ ಪ್ರಕರಣದಲ್ಲಿ 10 ಕೋಟಿಗಿಂತಲೂ ಹೆಚ್ಚು ಅಕ್ರಮವಾಗಿದೆ" ಎಂದರು.

ಸಚಿವ ನಾಗೇಂದ್ರ ವಿಚಾರದಲ್ಲಿ ಸರ್ಕಾರ ಮೊಂಡುತನ ತೋರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, " ಇಡೀ ಪ್ರಕರಣದಲ್ಲಿ ಸರ್ಕಾರದ ನೈತಿಕತೆಯ ಪ್ರಶ್ನೆ ಇದೆ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ನೈತಿಕತೆ ಬಗ್ಗೆ ಮಾತನಾಡಿದ ನಾಯಕರೇ ಈಗ ಸಿಎಂ, ಡಿಸಿಎಂ ಆಗಿದ್ದಾರೆ. ಇವತ್ತು ಅವರ ನೈತಿಕತೆ ಮತ್ತು ಸರ್ಕಾರದ ಪ್ರಾಮಾಣಿಕತೆಯ ಪ್ರಶ್ನೆ ಇದೆ. ಇವರು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುತ್ತಾರೋ ಅಥವಾ ಮಂತ್ರಿಯನ್ನು ಉಳಿಸಿಕೊಳ್ಳುತ್ತಾರೋ ಎನ್ನುವುದು ಸರ್ಕಾರದ ನಿರ್ಣಯದ ಮೇಲೆ ನಿಂತಿದೆ" ಎಂದು ಹೇಳಿದರು.

ಡಿಕೆಶಿ ವಿರುದ್ಧ ಶತ್ರು ಭೈರವಿ ಯಾಗ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, "ಅದರ ಬಗ್ಗೆ ನನಗೆ ಗೊತ್ತಿಲ್ಲ, ಯಾಗ ಯಜ್ಞದ ಬಗ್ಗೆ ಅವರಿಗೇ ಗೊತ್ತು" ಎಂದರು.

ಇದನ್ನೂ ಓದಿ:ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ; ಸಚಿವ ನಾಗೇಂದ್ರಗೆ ಸಮನ್ಸ್ ಕೊಡುತ್ತೇವೆ, ತಪ್ಪಿತಸ್ಥರ ರಕ್ಷಣೆ ಪ್ರಶ್ನೆಯೇ ಇಲ್ಲ: ಶಿವಕುಮಾರ್ - DCM DK Shivakumar

Last Updated : May 31, 2024, 2:16 PM IST

ABOUT THE AUTHOR

...view details