ಕರ್ನಾಟಕ

karnataka

ETV Bharat / state

ಯಥೋ ಧರ್ಮ ತತೋ ಜಯಂ ಸಂದೇಶ ಪಾಲನೆ: ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೇಶ್ ಕುಮಾರ್ - Dinesh Kumar

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ನಿವೃತ್ತರಾಗುತ್ತಿದ್ದು, ಅವರಿಗೆ ಬೀಳ್ಕೊಡಲಾಯಿತು.

Farewell to High Court Chief Justice PS Dinesh Kumar
Farewell to High Court Chief Justice PS Dinesh Kumar

By ETV Bharat Karnataka Team

Published : Feb 23, 2024, 4:57 PM IST

ಬೆಂಗಳೂರು: ಭಾರತದ ಸುಪ್ರೀಂ ಕೋರ್ಟ್​ನ ಲಾಂಛನದಲ್ಲಿರುವ ಯಥೋ ಧರ್ಮಃ ತತೋ ಜಯಃ ಸಂದೇಶ ಪಾಲಿಸಿದ್ದೇನೆ. ಅದರೊಂದಿಗೆ ನನ್ನ ಇಡೀ ವೃತ್ತಿ ಜೀವನದಲ್ಲಿ ಅದನ್ನು ಪಾಲನೆ ಮಾಡಿದ್ದೇನೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದರು. ವೃತ್ತಿ ಜೀವನದಿಂದ ಶನಿವಾರ(ಫೆ.24) ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಹೈಕೋರ್ಟ್​ನ ಹಾಲ್ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯಮೂರ್ತಿಗಳ ಬದುಕು ಒಂದು ರೀತಿಯಲ್ಲಿ ಅರಣ್ಯದಲ್ಲಿ ಏಕಾಂತ ವಾಸಿಯಾದಂತಿದ್ದರೂ, ಈ ಸೇವಾ ಅವಧಿಯಲ್ಲಿ ಜನರಿಗೆ ಅರ್ಥವಾಗುವ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆದಿರುವೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು. ಅಲ್ಲದೆ, ನ್ಯಾಯಾಂಗ ಮೂಲಸೌಕರ್ಯ ಮತ್ತು ರಾಜ್ಯಾದ್ಯಂತ ವ್ಯವಸ್ಥಿತವಾಗಿ ಇ-ಕೋರ್ಟ್ ಪ್ರಾಜೆಕ್ಟ್ ಜಾರಿ ಮಾಡಲು ಎಲ್ಲರ ಜೊತೆಗೂಡಿ ಶ್ರಮಿಸಿದ್ದೇನೆ. ತಂತ್ರಜ್ಞಾನಕ್ಕೆ ತೆರೆದುಕೊಂಡಿರುವುದರಿಂದ ನ್ಯಾಯದಾನ ವ್ಯವಸ್ಥೆಯು ಕ್ರಿಯಾತ್ಮಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಹಲವಾರು ನವೀನ ಸಕಾರಾತ್ಮಕ ಕ್ರಮಗಳಿಂದ ಸಮಯ ಉಳಿತಾಯವಾಗಿದ್ದು, ದಾವೆದಾರರಿಗೆ ನ್ಯಾಯದಾನ ಸಾಧ್ಯವಾಗಿದೆ ಎಂದು ಹೇಳಿದರು.

ವೃತ್ತಿ ಜೀವನದಲ್ಲಿ ಮಾರ್ಗದರ್ಶನ ಮಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ, ದಿವಂಗತ ಭಾರತದ ಸಾಲಿಸಿಟರ್ ಜನರಲ್ ಆಗಿದ್ದ ಸೋಲಿ ಸೊರಾಬ್ಜಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸೇರಿದಂತೆ ಹಲವು ಕಾನೂನು ಪಂಡಿತರನ್ನು ದಿನೇಶ್ ಕುಮಾರ್ ಇದೇ ವೇಳೆ ಸ್ಮರಿಸಿದರು.

2015, ಜನವರಿ 2ರಂದು ಕರ್ನಾಟಕ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ದಿನೇಶ್ ಕುಮಾರ್ ಅವರು 2016ರ ಡಿಸೆಂಬರ್ 30ರಂದು ಕಾಯಂಗೊಂಡಿದ್ದರು. ಕೇವಲ 24 ದಿನಗಳ ಅವಧಿಗೆ ಕರ್ನಾಟಕ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿರುವ ದಿನೇಶ್ ಕುಮಾರ್ ಅವರಿಗೆ ಕಡಿಮೆ ಅವಧಿಯ ಮುಖ್ಯನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಇರಲಿದ್ದು, ನ್ಯಾಯಮೂರ್ತಿ ಎಸ್ ಎ ಹಕೀಮ್ ಅವರಿಗೆ ಮೊದಲ ಸ್ಥಾನವಿದೆ.

ಇದನ್ನೂ ಓದಿ: ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಂಚೂಣಿ: ಮುಖ್ಯ ನ್ಯಾ.ದಿನೇಶ್​ ಕುಮಾರ್​

ABOUT THE AUTHOR

...view details