ಕರ್ನಾಟಕ

karnataka

ETV Bharat / state

ರತನ್​ ಟಾಟಾ ನಿಧನಕ್ಕೆ ಸಿದ್ದರಾಮಯ್ಯ, ಹೆಚ್​.ಡಿ.ದೇವೇಗೌಡ ಸೇರಿ ಗಣ್ಯರಿಂದ ಸಂತಾಪ

ಸ್ವಂತ ಪರಿಶ್ರಮದಿಂದಲೇ ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಲ್ಲದೇ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ರತನ್​ ಟಾಟಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

By ETV Bharat Karnataka Team

Published : 5 hours ago

Ratan Tata
ರತನ್​ ಟಾಟಾ (IANS)

ಬೆಂಗಳೂರು:ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನ ಹೊಂದಿದ ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ನೇವಲ್ ಟಾಟಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಸೇರಿದಂತೆ ಇತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಎಂ ಸಂತಾಪ:''ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಎಕ್ಸ್​ನಲ್ಲಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

''ಶ್ರೀ ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಲೋಕೋಪಕಾರಿ ಮತ್ತು ಕೈಗಾರಿಕೋದ್ಯಮಿಯಾಗಿ ಅವರ ಪರಂಪರೆಯು ಅಸಂಖ್ಯಾತ ಜೀವನ ಮತ್ತು ಸಮುದಾಯಗಳ ಮೇಲೆ ಬಹಳಷ್ಟು ಪ್ರಭಾವ ಬೀರಿತ್ತು. ಅವರ ದೂರದೃಷ್ಟಿ, ಸಹಾನುಭೂತಿ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅಚಲವಾದ ಸಮರ್ಪಣೆ ಯಾವಾಗಲೂ ನೆನಪಿನಲ್ಲಿ ಉಳಿಯಲಿದೆ. ಈ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ'' ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್​​ನ ದಿಗ್ಗಜ ರತನ್​ ಟಾಟಾ ಇನ್ನಿಲ್ಲ

''ಖ್ಯಾತ ಕೈಗಾರಿಕೋದ್ಯಮಿ ಶ್ರೀಯುತರ ನಿಧನ ಹೊಂದಿದ್ದಾರೆ. ಇದಿರಿಂದ ನಿಜವಾಗಿಯೂ ಒಂದು ಯುಗ ಅಂತ್ಯವಾಗಿದೆ. ಸರಳತೆ, ಸಹಾನುಭೂತಿ ಮತ್ತು ಸಮಗ್ರತೆಗೆ ಹೆಸರುವಾಸಿಯಾಗಿದ್ದ ಅವರು, ನಾವು ಪಾಲಿಸಬೇಕಾದ ಮತ್ತು ಆಚರಿಸಬೇಕಾದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ನಾವೆಲ್ಲರೂ ಭಾರತದ ಅತ್ಯುತ್ತಮ ಪುತ್ರರಲ್ಲಿ ಒಬ್ಬರಾದ ಟಾಟಾ ಅವರಿಗೆ ಅಂತಿಮ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿ ಅವರ ಕುಟುಂಬ, ಪ್ರೀತಿಪಾತ್ರರು ಮತ್ತು ಹಿತೈಷಿಗಳಿಗೆ ನನ್ನ ತೀವ್ರ ಸಂತಾಪಗಳು'' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

''ಭಾರತೀಯ ಉದ್ಯಮದ ನಿಜವಾದ ಟೈಟಾನ್ ಶ್ರೀ ರತನ್ ಟಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ದೂರದೃಷ್ಟಿಯ ನಾಯಕತ್ವ ಮತ್ತು ನಮ್ಮ ಆರ್ಥಿಕತೆ ಮತ್ತು ವ್ಯಾಪಾರಕ್ಕೆ ಅಪಾರ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ, ಸ್ನೇಹಿತರು ಮತ್ತು ಜೀವನದ ಭಾಗವಾಗಿದ್ದ ಎಲ್ಲರಿಗೂ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

ದೇವೇಗೌಡ ಸಂತಾಪ:''ಶ್ರೀ ರತನ್ ಟಾಟಾ ನಿಧನದಿಂದ ಭಾರತ ದೂರದೃಷ್ಟಿಯ ಉದ್ಯಮಿ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರು ಟಾಟಾ ಗ್ರೂಪ್‌ನ ಅಧ್ಯಕ್ಷರಾದ ಆರಂಭಿಕ ವರ್ಷಗಳಲ್ಲಿ, ನಾನು ಅವರೊಂದಿಗೆ ಬೆಂಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಿದ್ದೆ. ಆಗ ನಾನು ಸಿಎಂ ಆಗಿದ್ದೆ, ನಂತರವೂ ಸಂಪರ್ಕದಲ್ಲಿದ್ದೆವು. ಅವರು ತುಂಬಾ ಸೌಮ್ಯ ವ್ಯಕ್ತಿಯಾಗಿದ್ದರು. RIP'' ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಎಕ್ಸ್​ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರತನ್ ಟಾಟಾ ಅವರೊಂದಿಗಿನ ಅಸಂಖ್ಯಾತ ಸಂವಾದಗಳಿಂದ ನನ್ನ ಮನಸ್ಸು ತುಂಬಿದೆ: ಪ್ರಧಾನಿ ಮೋದಿ

ABOUT THE AUTHOR

...view details