ಬೆಂಗಳೂರು:ಸೂಕ್ಷ್ಮ ಹಾಗೂ ಗಂಭೀರ ಅಪರಾಧ ಪ್ರಕರಣಗಳ ತನಿಖೆ ನಡೆಸುವ ರಾಜ್ಯ ಅಪರಾಧ ತನಿಖಾ ವಿಭಾಗದಲ್ಲಿ (ಸಿಐಡಿ) ತೆರೆಯಲಾಗಿರುವ ಟ್ರಯಲ್ ಮಾನಿಟರಿಂಗ್ ಸೆಲ್ (ಟಿಎಂಸಿ) ಫಲ ನೀಡಿದ್ದು, ಪ್ರಕರಣಗಳಲ್ಲಿ ಶಿಕ್ಷೆ ಕೊಡಿಸುವ ಪ್ರಮಾಣ ಹೆಚ್ಚಿಸುವಲ್ಲಿ ಸಫಲವಾಗಿದೆ.
ಕಳೆದ ಮೂರು ತಿಂಗಳಲ್ಲಿ 4 ಪ್ರಕರಣಗಳಲ್ಲಿ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. ಇದು ಕಳೆದ 10 ವರ್ಷಗಳಿಗೆ ಹೋಲಿಸಿದರೆ ಶಿಕ್ಷೆ ಪ್ರಮಾಣ ಶೇ.50ಕ್ಕೆ ಏರಿಕೆಯಾಗಿದೆ. 2018ರಲ್ಲಿ 17 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ಸಜೆ ಪ್ರಮಾಣ ಶೇ.34ರಷ್ಟು ಮಾತ್ರವೇ ಇತ್ತು. ಹೊಸದಾಗಿ ರಚಿಸಲಾಗಿರುವ ಟಿಎಂಸಿ ತಂಡವು ಪ್ರಕರಣಗಳ ಮೇಲ್ವಿಚಾರಣೆ ಹಾಗೂ ಪಬ್ಲಿಕ್ ಪ್ರ್ಯಾಸಿಕ್ಯೂಟರ್ ನಡುವೆ ನಿರಂತರ ಸಮನ್ವಯತೆಯಿಂದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳಗೊಳ್ಳಲು ಕಾರಣವಾಗಿದೆ.
2014 ರಿಂದ 2023ರ ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವ 268 ಪ್ರಕರಣಗಳಲ್ಲಿ 54ರಲ್ಲಿ ಮಾತ್ರ (ಶೇ.20) ಶಿಕ್ಷೆ ಪ್ರಕಟವಾಗಿದೆ. 214 ಪ್ರಕರಣಗಳನ್ನ ಖುಲಾಸೆಗೊಳಿಸಲಾಗಿದೆ ಎಂದು ಸಿಐಡಿ ಅಂಕಿ ಅಂಶಗಳೇ ಸ್ಪಷ್ಟಪಡಿಸಿವೆ.
ಸಿಐಡಿಯಲ್ಲಿ ಹಣಕಾಸು, ಸೈಬರ್, ಮಾನವ ಕಳ್ಳಸಾಗಾಣಿಕೆ, ಆರ್ಥಿಕ ಅಪರಾಧ, ನರಹತ್ಯೆ ಮತ್ತು ಚೌರ್ಯ, ಖೋಟಾನೋಟು, ನರಹತ್ಯೆ, ಮಾದಕವಸ್ತು, ಶಿಲ್ಪವಿಭಾಗ, ಅರಣ್ಯ ಘಟಕ ಹಾಗೂ ಹೊಸದಾಗಿ ತೆರೆಯಲಾಗಿರುವ ಕ್ರಿಮಿನಲ್ ಇಂಟಲಿಜೆನ್ಸ್ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವಿಭಾಗದಿಂದ ಓರ್ವ ಇನ್ಸ್ಪೆಕ್ಟರ್ ಆಯಾ ವಿಭಾಗಗಳ ಪ್ರಕರಣಗಳ ವ್ಯಾಜ್ಯದ ನಿಗಾ ವಹಿಸುತ್ತಾರೆ.
ತನಿಖಾಧಿಕಾರಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಯಾವ ಹಂತದಲ್ಲಿ ಕೇಸ್ ಇರುವ ಬಗ್ಗೆ ಪಬ್ಲಿಕ್ ಪ್ರ್ಯಾಸಿಕ್ಯೂಟರ್ಗಳೊಂದಿಗೆ ಸಮನ್ವಯತೆ ಸಾಧಿಸುವುದು, ವ್ಯಾಜ್ಯಕ್ಕೆ ಸಂಬಂಧಿಸಿದ ದಾಖಲೆ, ಸಾಕ್ಷ್ಯಾಧಾರ ಒದಗಿಸುವುದು, ಸಮಯಕ್ಕೆ ಸರಿಯಾಗಿ ಸಾಕ್ಷಿದಾರ ಹಾಗೂ ತನಿಖಾಧಿಕಾರಿಯನ್ನ ಕೋರ್ಟ್ ಮುಂದೆ ಹಾಜರುಪಡಿಸುವ ಹಾಗೂ ನ್ಯಾಯಾಲಯದ ಮೇಲ್ವಿಚಾರಣೆಯನ್ನ ಟಿಎಂಸಿ ಇನ್ಸ್ಪೆಕ್ಟರ್ ವಹಿಸಿಕೊಳ್ಳಲಿದ್ದಾರೆ.