ಬೆಳಗಾವಿ: ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ವಿಚಾರದಲ್ಲಿ ಮಾರಿಹಾಳ ಪೊಲೀಸ್ ಠಾಣೆ ಸಿಪಿಐ ತಮ್ಮ ಕರ್ತವ್ಯ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ. ಅವರು ಯಾರ ಒತ್ತಡಕ್ಕೆ ಮಣಿದರು ಅಂತಾ ಅವರನ್ನೇ ಕೇಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮತ್ತು ಯಾರ ಗಮನಕ್ಕೂ ಅವರು ಬಂದಿಲ್ಲ. ನಾನು ಮತ್ತು ಸಹೋದರ ಚನ್ನರಾಜ ಅವರು ಪೊಲೀಸ್ ಕಮಿಷನರ್ ಜೊತೆಗೆ ಅವತ್ತು ರಾತ್ರಿ 11 ಗಂಟೆವರೆಗೆ ಸಂಪರ್ಕದಲ್ಲಿ ಇದ್ದೆವು. ತ್ವರಿತವಾಗಿ ಕ್ರಮ ತೆಗೆದುಕೊಳ್ಳದೇ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಅಂತಾನೇ ಹೇಳಿದ್ದೆವು . ಹೀಗೆ ಹೇಳಿದಾಗಲೂ ರಾತ್ರೋ ರಾತ್ರಿ 12 ಗಂಟೆಗೆ ಪೋಕ್ಸೋ ಕೇಸ್ ಹಾಕಿದ್ದಾರೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸುತ್ತೇವೆ. ಈ ಪ್ರಕರಣ ಬಗ್ಗೆ ಗೃಹ ಸಚಿವರು ಮತ್ತು ಡಿಜಿ ಅವರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದರು.
‘ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸುತ್ತೇನೆ’: ಕಂಡಕ್ಟರ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ. ನಾವೆಲ್ಲರೂ ಸಹೋದರತ್ವದಿಂದ ಚೆನ್ನಾಗಿದ್ದೇವೆ. ಘಟನೆ ತಿಳಿದ ಐದೇ ನಿಮಿಷಕ್ಕೆ ನಾನು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಕರೆ ಮಾಡಿದ್ದೆ. ಆಗ ಅವರು ಬೆಂಗಳೂರಿನಲ್ಲಿದ್ದರು. ಡಿಸಿಪಿ ರೋಹನ್ ಜಗದೀಶ ಅವರಿಂದ ಮಾಹಿತಿ ಪಡೆದುಕೊಂಡಿದ್ದೆ. ಅಲ್ಲದೇ ಯಾರು ಸರ್ಕಾರಿ ನೌಕರನ ಮೇಲೆ ಕೈ ಮಾಡಿದ್ದಾರೆ ಅವರನ್ನು ತಕ್ಷಣ ಬಂಧಿಸುವಂತೆ ನಿರ್ದೇಶನ ನೀಡಿದ್ದೆ ಎಂದರು.
ಇದರಲ್ಲಿ ರಾಜಕೀಯ ಮಾಡೋದನ್ನು ನಾನು ಒಪ್ಪುವುದಿಲ್ಲ: ಕರ್ನಾಟಕ ಸುವರ್ಣ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ 10 ಜನ ಪುಂಡರು ಬಂದು ಭಾಷಾ ವಿವಾದವನ್ನು ಎಳೆದು ತಂದು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ನಾನು ಖಂಡಿಸುತ್ತೇನೆ. ಬೆಳಗಾವಿಯಲ್ಲಿ ಎಲ್ಲರೂ ಗೌರವ ಮತ್ತು ಭ್ರಾತೃತ್ವದಿಂದ ಬಾಳುತ್ತಿದ್ದೇವೆ. ನನ್ನ ಕ್ಷೇತ್ರದಲ್ಲಿ ಇಡೀ ಮರಾಠಿಗರು ಮತ ಹಾಕಿ ಗೆಲ್ಲಿಸುತ್ತಾರೆ. ಯಾಕೆಂದರೆ ಭಾಷಾ ವಿವಾದವನ್ನು ನಾವು ಬೇರು ಸಮೇತ ಇಲ್ಲಿ ಕಿತ್ತು ಹಾಕಿದ್ದೇವೆ. ಹಬ್ಬ ಹರಿದಿನ ಸೇರಿ ರಜಾ ದಿನಗಳನ್ನು ಬಿಟ್ಟು ನಮಗಾಗಿ ಸಾರಿಗೆ ಸಿಬ್ಬಂದಿ ಸೇವೆ ಸಲ್ಲಿಸುತ್ತಾರೆ. ಇಂಥ ಸಂದರ್ಭದಲ್ಲಿ ಅವರ ಮೇಲೆ ಕೈ ಮಾಡಿದ್ದು, ಅಕ್ಷಮ್ಯ ಅಪರಾಧ. ತಪ್ಪಿತಸ್ಥ ಕಿಡಿಗೇಡಿಗಳಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ನಾವೆಲ್ಲಾ ನೋಡಿಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಕಾನೂನು ಸುವ್ಯವಸ್ಥಿತ ದೃಷ್ಟಿಯಿಂದ ಇದೆಲ್ಲ ಇಲ್ಲಿಗೆ ನಿಲ್ಲಿಸಿ; ಕಂಡಕ್ಟರ್ ಮೇಲಿನ ಪೋಕ್ಸೊ ಕೇಸ್ ತನಿಖೆ ನಡೆಯುತ್ತಿದೆ. ಈಗಾಗಲೇ ಸಾರಿಗೆ ಸಚಿವರು ಹೇಳಿದ್ದಾರೆ. ಬಸ್ನಲ್ಲಿ 90 ಜನ ಪ್ರಯಾಣಿಸುತ್ತಿದ್ದರು ಅಂತಾ. ಆದರೆ, ಈ ರೀತಿ ಪೋಕ್ಸೊ ಕೇಸ್ ಹಾಕಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ಸತ್ಯಾಂಶ ಹೊರಗೆ ಬರುತ್ತದೆ. ಕರ್ನಾಟಕ ಮತ್ತು ಬೇರೆ ರಾಜ್ಯ ಬೇರೆ ಅಲ್ಲ. ದೇಶ ಅಂತಾ ಬಂದಾಗ ನಾವೆಲ್ಲರೂ ಒಂದೇ. ಆ ರಾಜ್ಯದ ಜನರು ನಿನ್ನೆ ನಮ್ಮ ಬಸ್ ಚಾಲಕ, ನಿರ್ವಾಹಕರಿಗೆ ಧಮ್ಕಿ ಕೊಡುವುದನ್ನು ಗಮನಿಸಿದ್ದೇನೆ. ನಾವು ನಾವೇ ಹೊಡೆದಾಡುವುದಲ್ಲ. ಎಲ್ಲರೂ ಬಹಳಷ್ಟು ಪ್ರಬುದ್ಧರಾಗಿ ವರ್ತಿಸಬೇಕಾಗುತ್ತದೆ. ಎಲ್ಲರಿಗೂ ಅವರವರ ಭಾಷೆ ಮೇಲೆ ಅಭಿಮಾನ ಇರುತ್ತದೆ. ಹಾಗಾಗಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇದೆಲ್ಲಾ ಇಲ್ಲಿಗೆ ನಿಲ್ಲಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.
ಸುಮಧುರ ವಾತಾವರಣ ಕೆಡಸಬೇಡಿ- ಹೆಬ್ಬಾಳ್ಕರ್ ಮನವಿ: ಬೆಳಗಾವಿ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಗಟ್ಟಿ ಧ್ವನಿ ಎತ್ತುತ್ತಿಲ್ಲ ಎಂಬ ಆರೋಪಕ್ಕೆ ನಮ್ಮ ಭಾಷೆ, ಸಂಸ್ಕೃತಿ ಬೇರೆ ಬೇರೆ. ಆದರೆ, ದೇಶ ನಮಗೆಲ್ಲಾ ಒಂದೇ. ನಾವೆಲ್ಲಾ ಒಂದೇ ತಾಯಿ ಮಕ್ಕಳು. ಭಾಷಾಭಿಮಾನ ಎಲ್ಲರಿಗೂ ಇರುತ್ತದೆ. ಹಾಗಾಗಿ, ಯಾರೂ ಇದನ್ನು ರಾಜಕೀಯವಾಗಿ ತೆಗೆದುಕೊಳ್ಳಬಾರದು. ಸುಮಧುರ ವಾತಾವರಣ ಕೆಡಸಬೇಡಿ, ನಮ್ಮನ್ನು ಕೆಣಕಲು ಹೋಗಬೇಡಿ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ- ಭರವಸೆ: ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ತಾಪಂ ಮೂಲಕ ಮಾಡುವುದರಿಂದ ತಡವಾಗಿದೆ. ಯಾವುದೇ ಗೃಹಲಕ್ಷ್ಮೀಯರು ವಿಚಾರ ಮಾಡುವ ಪ್ರಮೇಯ ಇಲ್ಲ. 2 ಸಾವಿರ ರೂ. ಬರುತ್ತದೆ ಅಂತಾ ತಾವು ಏನೇನೋ ಯೋಜನೆ ಹಾಕಿಕೊಂಡಿರುತ್ತಿರಿ. ಹಾಗಾಗಿ, ಬರುವ 8 ದಿನಗಳಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
ಮಾ.3ರಂದು ಬಜೆಟ್ ಅಧಿವೇಶನದಲ್ಲಿ ಭಾಗಿ ಆಗಬೇಕು ಎನ್ನುವ ಆಸೆ ಇದೆ. ನಾಳೆ ಸಿಟಿ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಹೋಗುತ್ತಿದ್ದೇನೆ. ಪ್ರಯಾಣ ಮಾಡಲು ವೈದ್ಯರು ಅನುಮತಿ ನೀಡಿದರೆ ಮತ್ತೆ ಕರ್ತವ್ಯಕ್ಕೆ ಮರಳುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಮ್ಮ ಕಂಡಕ್ಟರ್ ಮೇಲೆ ಬೇಕು ಅಂತಾನೆ ಪೋಕ್ಸೋ ಕೇಸ್ ಕೊಟ್ಟಿದ್ದಾರೆ: ಸಚಿವ ರಾಮಲಿಂಗಾರೆಡ್ಡಿ
ಇದನ್ನೂ ಓದಿ: ಹಲ್ಲೆಗೊಳಗಾದ ಕಂಡಕ್ಟರ್ ಆರೋಗ್ಯ ವಿಚಾರಿಸಿದ ಸಾರಿಗೆ ಸಚಿವರು: ಮಹಾದೇವ ಪರ ನಾವಿದ್ದೇವೆ ಎಂದ ರಾಮಲಿಂಗಾರೆಡ್ಡಿ