ಬೆಂಗಳೂರು : ಇತ್ತೀಚೆಗೆ ಮೈಸೂರಿನ ಉದಯಗಿರಿಯಲ್ಲಿ ಕೆಲ ದೇಶದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ. ಇವತ್ತು ಅಲ್ಲಿ ಜಾಗೃತಿ ಜಾಥಾಗೆ ಕರೆ ಕೊಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮೈಸೂರಿಗೆ ಹೋಗುವ ಮುನ್ನ ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಕಳೆದೆರಡು ವರ್ಷಗಳಿಂದ ತುಷ್ಟೀಕರಣ ರಾಜಕಾರಣ ಮಾಡ್ತಿದೆ. ಇದನ್ನು ನೋಡಿದರೆ ನಿಜಾಮರ ಆಡಳಿತ ನೆನಪಾಗುತ್ತದೆ. ರಾಜರ ಕಾಲದ ಆಡಳಿತ ಏನೋ ಅನ್ನುವ ಹಾಗೆ ಹಿಂದೂಗಳಿಗೆ ಭಾಸವಾಗುತ್ತಿದೆ ಎಂದರು.
ಪೊಲೀಸರಿಗೂ ಸ್ವಾತಂತ್ರ್ಯ ಕೊಟ್ಟಿಲ್ಲ, ಖುದ್ದು ಪೊಲೀಸ್ ಇಲಾಖೆ ಅಸಹಾಯಕವಾಗಿದೆ. ಗೃಹ ಸಚಿವರೇ ರಾಜೀನಾಮೆ ಬಗ್ಗೆ ಮಾತನಾಡುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾವು ಕೂಡಾ ಇವತ್ತು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿಕೆಗೆ ಖಂಡನೆ : ಸರ್ಕಾರಕ್ಕೆ ತಾಕತ್, ಯೋಗ್ಯತೆ ಇದ್ದಿದ್ರೆ ಆವತ್ತು ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು. ಇವತ್ತು ಹಿಂದೂ ಕಾರ್ಯಕರ್ತರು ಹೋರಾಟ ಮಾಡುತ್ತೇವೆ ಎಂದರೆ ನಿಷೇಧಾಜ್ಞೆ ಹೇರೋದು ಅಲ್ಲ. ಯಾಕೆ ಆವತ್ತು ಸರ್ಕಾರ, ಗೃಹ ಇಲಾಖೆ ಸತ್ತು ಹೋಗಿತ್ತಾ?. ಏನೇ ಆದರೂ ನಾವು ಹೋರಾಟ ಮಾಡ್ತೇವೆ, ನಮ್ಮ ಹೋರಾಟ ತಡೆಯಲು ಏನೇ ನಿಷೇಧಾಜ್ಞೆ ಹಾಕಿದ್ರೂ ಆಗಲ್ಲ. ಇವತ್ತು ಎಲ್ಲ ಹಿಂದೂಪರ ಸಂಘಟನೆಯವರು ಭಾಗವಹಿಸ್ತಿದ್ದಾರೆ ಎಂದು ತಿಳಿಸಿದರು.
ಅಟ್ಟಹಾಸದ ಆಡಳಿತ ರಾಜ್ಯದಲ್ಲಿ ಮರುಕಳಿಸುತ್ತಿದೆ ಅನಿಸ್ತಿದೆ. ಪೊಲೀಸ್ ಠಾಣೆಗೇ ಕಲ್ಲೆಸೆಯುವ, ಪೊಲೀಸರನ್ನೇ ಎದುರಿಸುವ ಮಟ್ಟಕ್ಕೆ ಹೋಗಿದ್ದಾರೆ ಆಂದ್ರೆ ಪೊಲೀಸ್ ಇಲಾಖೆ, ಸರ್ಕಾರ ಅಸಹಾಯಕವಾಗಿದೆ. ಅನಿವಾರ್ಯವಾಗಿ ಹಿಂದೂಗಳ ರಕ್ಷಣೆಗೆ ನಾವು ನಿಲ್ಲಬೇಕಿದೆ ಎಂದು ಹೇಳಿದರು.
ಎಸ್ಕಾಂಗಳಿಗೆ ಜನರಿಂದಲೇ ಗೃಹ ಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೊಡುವಂತೆ ಕೋರಿ ಪ್ರಸ್ತಾವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕಿದೆ. ರಾಜ್ಯ ಸುಭಿಕ್ಷವಾಗಿದೆ, ಜನ ನೆಮ್ಮದಿಯಿಂದ ಇದ್ದಾರೆ ಅಂತ ಸಿಎಂ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಆಲ್ ಈಸ್ ವೆಲ್ ಭಾವನೆಯಿಂದ ಹೊರಗೆ ಬರಬೇಕು ಎಂದರು.
ಸಾರಿಗೆ ಸಂಸ್ಥೆಗಳಿಗೆ 7 ಸಾವಿರ ಕೋಟಿ ರೂ. ಬಾಕಿ ಕೊಡಬೇಕಿದೆ. ವೇತನ ಕೊಡ್ತಿಲ್ಲ. ಸರ್ಕಾರಿ ಇಲಾಖೆ, ಕಚೇರಿಗಳು 6 ಸಾವಿರ ಕೋಟಿ ರೂ. ಬಾಕಿ ವಿದ್ಯುತ್ ಬಿಲ್ ಕಟ್ಟಬೇಕಿದೆ. ಇವರ ಯೋಜನೆಗಳನ್ನು ನೋಡುತ್ತಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸುವ ಲಕ್ಷಣ ಕಾಣಿಸುತ್ತಿದೆ. ಇದನ್ನೆಲ್ಲ ನಾವು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಉದಯಗಿರಿ ಪ್ರಕರಣದ ತಪ್ಪಿತಸ್ಥರು ಯಾರೇ ಇದ್ರೂ ಮುಲಾಜಿಲ್ಲದೆ ಕ್ರಮ ಜರುಗಿಸಿ: ಸಿಎಂ
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್