ಕರ್ನಾಟಕ

karnataka

ಜನರ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಜಾನುವಾರು: ವಿಡಿಯೋ - Cattle washed away

By ETV Bharat Karnataka Team

Published : Jul 18, 2024, 9:41 PM IST

Updated : Jul 18, 2024, 10:48 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದೀಗ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಜಾನುವಾರುವೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

cattle-washed-away
ಜನರ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಜಾನುವಾರು (ETV Bharat)

ಜನರ ಕಣ್ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಜಾನುವಾರು (ETV Bharat)

ಚಿಕ್ಕಮಗಳೂರು:ಜಿಲ್ಲೆಯ ಕಳಸ ಮತ್ತು ಹೊರನಾಡು ಭಾಗದಲ್ಲಿ ಒಂದು ಕ್ಷಣವೂ ಬಿಡುವು ನೀಡದೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದಕ್ಕೆ ಪೈಪೋಟಿ ನೀಡುವಂತೆ ಕುದುರೆಮುಖ ಭಾಗದಲ್ಲೂ ನಿರಂತರ ಮಳೆ ಸುರಿಯುತ್ತಿದ್ದು, ಈಗ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯಲು ಪ್ರಾರಂಭಿಸಿದೆ. ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಜಾನುವಾರುವೊಂದು ಎಲ್ಲರ ಕಣ್ಣ ಮುಂದೆಯೇ ಕೊಚ್ಚಿ ಹೋಗಿದೆ.

ಈಗಾಗಲೇ ಕಳಸ ತಾಲೂಕಿನಲ್ಲಿರುವ ಹೆಬ್ಬಾಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಕಳೆದ ಎರಡು ದಿನಗಳಿಂದ ಪ್ರವಾಸಿಗರಿಗೆ ಈ ಸೇತುವೆ ಮೇಲೆ ಸಂಚಾರ ಮಾಡಲು ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಎರಡು ಭಾಗದಲ್ಲಿಯೂ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬ್ಯಾರಿಕೇಡ್​ ಗೇಟ್​ಗಳನ್ನು ಅಳವಡಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಧಾರಾಕಾರ ಮಳೆಗೆ ಜಲಾವೃತವಾದ ತೋಟಗಳು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಶೃಂಗೇರಿ, ಕೊಪ್ಪ, ಕುದುರೆಮುಖದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದರಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯಲು ಪ್ರಾರಂಭಿಸಿವೆ. ತುಂಗಾ ನದಿ ಅಬ್ಬರಕ್ಕೆ ಶೃಂಗೇರಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ತುಂಬಿ ಹರಿಯುತ್ತಿರುವ ನದಿಯಲ್ಲಿನ ನೀರು ನದಿ ಅಂಚಿನ ಗ್ರಾಮಗಳಲ್ಲಿ ನುಗ್ಗಿ ತೋಟಗಳು ಜಲಾವೃತವಾಗಿವೆ.

ಶೃಂಗೇರಿ ತಾಲೂಕಿನ ಕೂತಗೋಡು ವ್ಯಾಪ್ತಿಯ ಬೆಟ್ಟಗೆರೆ, ಕೆರೆಮನೆ ಗ್ರಾಮಗಳಲ್ಲಿ ಈ ಘಟನೆ ಸಂಭವಿಸಿದ್ದು, ತುಂಗಾ ನದಿ ಉಕ್ಕಿದ ಪರಿಣಾಮ ತೋಟಗಳು ಮುಳುಗಡೆಯಾಗಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದ್ದು, ಕಳೆದ ಮೂರು ದಿನಗಳಿಂದ ಕಡಿಮೆಯಾಗದ ತುಂಗಾ ಪ್ರವಾಹ ನೋಡಿ ಸ್ಥಳೀಯರು ಬೆಚ್ಚಿ ಬೀಳುವಂತಾಗಿದೆ. ನೆರೆ ತಗ್ಗುವಂತೆ ತುಂಗಾ ನದಿ ನೀರಿಗೆ ಸ್ಥಳೀಯರು ಪೂಜೆ ಮಾಡುತ್ತಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಭಾರಿ ಮಳೆ ಆಗುತ್ತಿದ್ದು, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣು ಗುಂಡಿ, ದತ್ತಪೀಠ, ಗಾಳಿ ಕೆರೆ ಸುತ್ತಮುತ್ತ ಬಾರಿ ಮಳೆಯಾಗುತ್ತಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣ ದತ್ತಪೀಠ ರಸ್ತೆಗೆ ಹೋಗುವ ದಾರಿ ಮಧ್ಯೆ ಸಿಗುವ ಹೊನ್ನಮ್ಮನ ಹಳ್ಳ ಜಲಪಾತ ತನ್ನ ರೌದ್ರಾವತಾರ ತೋರಿಸಲು ಪ್ರಾರಂಭಿಸಿದೆ.

ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಮುಂದುವರೆದಿದ್ದು, ನಾನಾ ಅವಘಡಗಳು ಜರುಗಲು ಪ್ರಾರಂಭಿಸಿದೆ. ಭಾರಿ ಮಳೆಗೆ ಮನೆಯ ಹಿಂದೆ ಭೂ ಕುಸಿತ ಉಂಟಾಗಿದ್ದು, ಮನೆಯ ಹಿಂಭಾಗ ಎರಡು ಕಡೆ ಭೂಕುಸಿತ ಸಂಭವಿಸಿದೆ.

ಜಯಪುರ ಸಮೀಪದ ಹುತ್ತಿನಗದ್ದೆ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಹುತ್ತಿನ ಗದ್ದೆಯ ಸಚಿನ್ ಗೌಡ ಎಂಬುವವರ ಮನೆ ಹಾನಿಯಾಗಿದೆ. ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಕುಸಿಯುತ್ತಿದ್ದು, ಭೂ ಕುಸಿತದಿಂದಾಗಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ಅಡುಗೆ ಮಾಡುತ್ತಿದ್ದಾಗಲೇ ಮನೆಯ ಗೋಡೆ ಕುಸಿದು ಬಿದ್ದಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾರೆ.

ಭಾರಿ ಮಳೆಯಿಂದಾಗಿ ‌ಇದ್ದಕ್ಕಿದ್ದಂತೆ ಮನೆ ಕುಸಿದು ಬಿದ್ದಿದೆ. ಸೂರು ಕಳೆದುಕೊಂಡು ಮನೆ ಮಾಲೀಕಿ ಗಿರಿಜಮ್ಮ ಕಂಗಾಲಾಗಿದ್ದು, ಗೋಡೆ ಜೊತೆಗೆ ‌ಮನೆಯ ಮೇಲ್ಛಾವಣಿಯು ಸಂಪೂರ್ಣ ನಾಶವಾಗಿದೆ. ಮಾಹಿತಿ ತಿಳಿಸಿದರೂ ಸ್ಥಳಕ್ಕೆ ಅಧಿಕಾರಿಗಳು ಮಾತ್ರ ಆಗಮಿಸಿಲ್ಲ. ಈ ಕುರಿತು ಗ್ರಾಮಸ್ಥರು ಸ್ಥಳೀಯ ಶಾಸಕಿ ನಯನ ಮೋಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಿರುಕು : ಮಲೆನಾಡ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಂಡಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸುಮಾರು 50 ಅಡಿಗೂ ಹೆಚ್ಚು ದೂರ ಬಿರುಕು ಕಂಡಿದೆ. ಶೃಂಗೇರಿ ತಾಲೂಕಿನ ನೆಮ್ಮಾರು ಎಸ್ಟೇಟ್ ಬಳಿ ಈ ಘಟನೆ ನಡೆದಿದ್ದು, ತುಂಗಾ ನದಿ ಪಕ್ಕದಲ್ಲೇ ಬಿರುಕು ಬಿಟ್ಟಿದ್ದು, ಆತಂಕದಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ :ತುಂಗಭದ್ರೆಯಲ್ಲಿ ಹೆಚ್ಚಿದ ನೀರು-ರಸ್ತೆ ಜಲಾವೃತ: ಸಂಪರ್ಕ ಇಲ್ಲದೇ ಜನ ಹೈರಾಣು, ಐತಿಹಾಸಿಕ ಸೇತುವೆಗೆ ಬೇಕಾಗಿದೆ ಕಾಯಕಲ್ಪ - Tungabhadra river bridge flooded

Last Updated : Jul 18, 2024, 10:48 PM IST

ABOUT THE AUTHOR

...view details