ಬೆಂಗಳೂರು : ಡಿನ್ನರ್ ಮೀಟಿಂಗ್ನಲ್ಲಿ ಏನೂ ಪ್ಲಾನ್ ಇಲ್ಲ, ಅಜೆಂಡಾನೂ ಇಲ್ಲ. ಸುಮ್ಮನೆ ಊಟಕ್ಕೆ ಸೇರಿದ್ದೆವು ಅಷ್ಟೇ ಎಂದು ಸಚಿವ ಹೆಚ್. ಸಿ ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಿವಾಸದಲ್ಲಿ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಿನ್ನೆ ಸಿಎಂ ಜೊತೆಗೂಡಿ ಸಚಿವರ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸತೀಶ್ ಜಾರಕಿಹೊಳಿ ಊಟಕ್ಕೆ ಸೇರೋಣ ಅಂದಿದ್ರು. ಸಿಎಂ ಏನು ವಿಷ್ಯ ಅಂದ್ರು?. ಏನೂ ಇಲ್ಲ ಊಟಕ್ಕೆ ಸೇರುತ್ತಿದ್ದೇವೆ ಅಂದ್ರು. ಹಾಗಾಗಿ ಇಷ್ಟೇ ಕಾರಣ, ಬೇರೇನೂ ಇಲ್ಲ. ಸಚಿವ ಪರಮೇಶ್ವರ್ ಮಲೇಷ್ಯಾಗೆ ಹೋಗ್ತೇವೆ ಅಂದ್ರು. ಹಾಗಾಗಿ ಊಟ ಮಾಡಿ ಅವರು ಹೊರಟ್ರು. ಇದು ಪ್ಲಾನ್ ಅಲ್ಲ, ಅಜೆಂಡಾನೂ ಅಲ್ಲ. ಸುಮ್ಮನೆ ಊಟಕ್ಕೆ ಸೇರಿದ್ದು. ನಾವು ಏನೂ ಮಾತೇ ಆಡಿಲ್ಲ ಎಂದರು.
ಡಿನ್ನರ್ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ವಿಪಕ್ಷಗಳು ಎಲ್ಲದಕ್ಕೂ ರಾಜೀನಾಮೆ ಕೊಡಿ ಅಂತಾರೆ. ಜನರ ಮನಸ್ಸಲ್ಲಿ ಬೇರೆ ಭಾವನೆ ಮೂಡಿಸ್ತಾರೆ. ಅದಕ್ಕೆ ಹೇಗೆ ಕೌಂಟರ್ ಕೊಡೋದು ಅಂತ ಚರ್ಚಿಸಿದ್ದೇವೆ. ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಹೈಕಮಾಂಡ್ ಮಾಡಲಿದೆ ಎಂದು ಹೇಳಿದರು.
ನಮಗೆ ಈಗ ಸಿದ್ದರಾಮಯ್ಯ ಸಿಎಂ : ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರಾ ಎಂಬ ಪ್ರಶ್ನೆಗೆ, ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ. ಮುಂದೆಯೂ ಅವರೇ ಮುಂದುವರಿಯುತ್ತಾರೆ. ಯಾಕೆ ಈ ವಿಚಾರದಲ್ಲಿ ಪದೇ ಪದೆ ಪ್ರಶ್ನೆ. ಸಿಎಂ ಬದಲಾವಣೆ ಎಲ್ಲಾ ಎಐಸಿಸಿಗೆ ಬಿಟ್ಟಿದ್ದು. ನಮಗೆ ಈಗ ಸಿದ್ದರಾಮಯ್ಯ ಸಿಎಂ ಎಂದರು.
ಬಸ್ ದರ ಏರಿಕೆ ವಿಚಾರವಾಗಿ ಮಾತನಾಡಿ, ಬಸ್ ದರ ಎಂಟತ್ತು ವರ್ಷಗಳಿಂದ ರಿವ್ಯೂ ಆಗಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮಲ್ಲಿ ಕಡಿಮೆ ಇದೆ. ಹಾಲಿನ ದರ ಹೆಚ್ಚಳ ರೈತರಿಗೆ ಒಳ್ಳೆಯದು ಆಗುತ್ತದೆ. ಕಾಂಗ್ರೆಸ್ನಲ್ಲಿ ಎಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಜಾತಿಗಣತಿ ವಿಚಾರದಲ್ಲಿ ಮೀನಮೇಷ ಇಲ್ಲ. ಏನು ಎತ್ತ ಅಂತ ತೀರ್ಮಾನವಾಗಿಲ್ಲ. 150 ಕೋಟಿ ಖರ್ಚು ಮಾಡಿ ಮಾಡಿದ್ದೇವೆ. ಅದನ್ನ ಜಾರಿಗೆ ತರದೇ ಬಿಡೋಕೆ ಆಗುತ್ತಾ?. ಅಹಿಂದ ಸಮುದಾಯಗಳೇ ನಮಗೆ ಬ್ಯಾಕ್ ಬೋನ್. ಅವರಿಗೆ ಅನ್ಯಾಯ ಮಾಡೋಕೆ ಆಗುತ್ತಾ?. ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ಸಮಯ ಬೇಕು ಎಂದರು.
ಇದನ್ನೂ ಓದಿ : ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ - DINNER MEETING