ಕರ್ನಾಟಕ

karnataka

By ETV Bharat Karnataka Team

Published : May 18, 2024, 11:43 AM IST

Updated : May 18, 2024, 2:35 PM IST

ETV Bharat / state

ಭ್ರೂಣಲಿಂಗ ಪತ್ತೆ ಪ್ರಕರಣ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು - case of prenatal gender detection

ವಿಜಯಪುರದಲ್ಲಿ ಕೆಲವು ಖಾಸಗಿ ಹೆರಿಗೆ ಆಸ್ಪತ್ರೆಗಳಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಆಯೋಗದಿಂದ ಸೂಕ್ತ ಕ್ರಮವಹಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

STATE CHILD RIGHTS COMMISSION  VIJAYAPURA  CASE OF PRENATAL GENDER DETECTION
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸಿಂಧೂರ ಆಸ್ಪತ್ರೆಗೆ ಭೇಟಿ (ETV Bharat)

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿದರು. (ETV Bharat)

ವಿಜಯಪುರ:ನಗರದ ಕೆಲವು ಹೆರಿಗೆ ಆಸ್ಪತ್ರೆಗಳಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆ, ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡ ಕಚೇರಿಗೆ ಸೂಚನೆ ನೀಡಿತ್ತು.

ಆದರೆ, ಆ ಆದೇಶ ಮತ್ತು ಸೂಚನೆಯನ್ವಯ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದು, ಅಲ್ಲದೇ ಅಂತಹ ಆರೋಪ ಕೇಳಿಬಂದ ಆಸ್ಪತ್ರೆಗಳ ಸ್ಕ್ಯಾನಿಂಗ್‌ ಸೆಂಟರ್‌ ಮಾತ್ರ ಸೀಜ್‌ ಮಾಡಲಾಗಿತ್ತು. ಇಂದು ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಮತ್ತು ಶೇಖರಗೌಡ ರಾಮತ್ನಾಳ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಅಥಣಿ ರಸ್ತೆಯಲ್ಲಿರುವ ಸಿಂಧೂರ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ ಸದಸ್ಯರು, ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ಆಸ್ಪತ್ರೆ ಸೀಜ್‌ ಮಾಡದೇ ಕೇವಲ ಸ್ಕ್ಯಾನಿಂಗ್‌ ಸೆಂಟರ್‌ ಸೀಜ್‌ ಮಾಡಿರುವ ಕ್ರಮ ಸರಿಯಲ್ಲ ಎಂದು ಡಿಹೆಚ್‌ಓ ಅವರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ಹೇಳಿಕೆ:ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ''ಕಳೆದ ತಿಂಗಳ ಹಿಂದಷ್ಟೇ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ನರ್ಸ್‌ ಒಬ್ಬರ ಮನೆಯಲ್ಲಿ ಭ್ರೂಣ ಪತ್ತೆ ಮಾಡಲಾಗುತ್ತಿದೆ ಎನ್ನುವ ಪ್ರಕರಣ ಬೆಳಕಿಗೆ ಬಂದಿತ್ತು. ಆ ಘಟನೆ ಮಾಸುವ ಮುನ್ನವೇ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬೇರೆ ಪ್ರಕರಣ ನಡೆದಿದೆ. ಈಗಾಗಲೇ ಇದು ಇಲಾಖೆಯ ಗಮನಕ್ಕೆ ಬಂದಿದೆ. ಇಲಾಖೆಯ ಗಮನಕ್ಕೆ ಬಂದು ಒಂದು ತಿಂಗಳ ಕಾಲ ಕಳೆದಿದೆ. ಆದರೆ, ಇಲಾಖೆಯವರು ಪಿಸಿಆರ್‌ ಎಫ್‌ಐಆರ್‌ ಮಾಡಲು ವಿಳಂಬ ಮಾಡುತ್ತಿರುವುದು ಬಹಳ ದುರ್ದೈವದ ಸಂಗತಿ. ಆಧುನಿಕ ಯುಗದಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣಗಳು ನಡೆಯುತ್ತಿರುವುದು ನಾಗರಿಕ ಸಮಾಜ ಸಹ ತಲೆತಗ್ಗಿಸುವಂತಹದ್ದು. ಇದು ಇನ್ನೂ ಜೀವಂತವಾಗಿರುವುದು ಇದು ಬಹಳ ನೋವಿನ ಸಂಗತಿ'' ಎಂದು ಕಿಡಿಕಾರಿದರು.

ಸ್ವಯಂ ಪ್ರೇರಿತ ದೂರು ದಾಖಲು:''ಡಿಹೆಚ್‌ಒ ಅವರು ರಜೆಯಲ್ಲಿದ್ದಾರೆ, ನಾನು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಕಾನೂನು ನಿಯಮಾವಳಿಗಳ ಪ್ರಕಾರ ಇಂತಹ ಪ್ರಕರಣಗಳ ಪತ್ತೆಯಾದ 48 ಗಂಟೆಗಳಲ್ಲಿ ಪಿಸಿಆರ್‌ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ನ್ಯಾಯಾಲಯದ ಮುಖಾಂತರವೇ ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತೆ. ಆದರೆ, ಈ ಪ್ರಕರಣದಲ್ಲಿ ತಿಂಗಳಾದರೂ ಸಹ ಅವರು ಈ ಕಾರ್ಯನಿರ್ವಹಿಸಿಲ್ಲ. ಆ ಕಾರಣದಿಂದ ನಾವು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳುತ್ತಿದ್ದೇವೆ'' ಎಂದು ಶಶಿಧರ ಕೋಸಂಬೆ ತಿಳಿಸಿದರು.

''ಜೊತೆಗೆ ಈಗಾಗಲೇ ಡಿಹೆಚ್ಒ ಅವರಿಗೆ ದೂರವಾಣಿಯಲ್ಲಿ ಮಾತನಾಡಿರುವಂತೆ ಸಂಜೆಯೊಳಗೆ ಕಾನೂನಿನಡಿ ಕ್ರಮ ಜರುಗಿಸಿ ಆಯೋಗಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಮತ್ತೆ ವಿಳಂಬ ನೀತಿ ಅನುಸರಿಸಿದರೆ ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದೇನೆ'' ಎಂದರು.

ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು: ''ಈ ಪ್ರಕರಣದ ಬಗ್ಗೆ ಸಾರ್ವಜನಿಕರಿಂದ ನಮ್ಮ ಇಲಾಖೆ ಮತ್ತು ಆಯೋಗಕ್ಕೆ ದೂರು ಬಂದಿದ್ದು, ತಕ್ಷಣವೇ ಸ್ಪಾಟ್‌ ವಿಸಿಟ್‌ ಮಾಡಿ ಸ್ಕ್ಯಾನಿಂಗ್‌ ಸೆಂಟರ್‌ ಸೀಜ್‌ ಮಾಡಿದ್ದಾರೆ. ಆದರೆ, ಇಡೀ ಆಸ್ಪತ್ರೆ ಸೀಜ್‌ ಮಾಡಬೇಕು. ಅದನ್ನೂ ಸಹ ನಾನು ಡಿಹೆಚ್‌ಒ ಅವರಿಗೆ ಹೇಳಿದ್ದೇನೆ. ಕಾನೂನಿನಡಿ ಕ್ರಮ ಜರುಗಿಸಿದಾಗ ಮಾತ್ರ ಇಂತಹ ಪ್ರಕರಣ ಮರುಕಳಿಸದಂತೆ ತಡೆಗಟ್ಟಲು ಸಾಧ್ಯ. ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ.

ನಮ್ಮ ಆಯೋಗಕ್ಕೆ ಅನಾಮಧೇಯ ಕರೆಗಳು ಬಂದಿದ್ದಾವೆ. ಆ ಕಾರಣದಿಂದ ನೀವು ಜಿಲ್ಲೆಯಲ್ಲಿರುವ ಎಲ್ಲಾ 159 ಸ್ಕ್ಯಾನಿಂಗ್‌ ಸೆಂಟರ್‌ಗಳನ್ನು‌ ಚೆಕ್‌ ಮಾಡಿ, ಸ್ಟಿಂಗ್‌ ಆಪರೇಶನ್‌ ನಡೆಸಿ, ಇಂತಹ ಭ್ರೂಣ ಪತ್ತೆ ಪ್ರಕರಣಗಳನ್ನು ನಿಯಂತ್ರಣ ಮಾಡಿ ಎಂದು ಹೇಳಿದರೂ ಸಹ ಅವರು ಎಚ್ಚೆತ್ತುಕೊಂಡಿಲ್ಲ. ಇದು ದುರ್ದೈವದ ಸಂಗತಿ. ಇದೇ ರೀತಿ ಮುಂದುವರೆದರೆ, ನಮ್ಮ ಆಯೋಗ ಖಂಡಿತ ಸುಮ್ಮನಿರುವುದಿಲ್ಲ, ಸಹಿಸುವುದಿಲ್ಲ. ಯಾವುದೇ ಕಾರಣಕ್ಕೂ ಯಾವುದೇ ಅಧಿಕಾರಿಗಳು ಯಾರೇ ಇದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ'' ಎಂದು ಶಶಿಧರ ಕೋಸಂಬೆ ಹೇಳಿದರು.

ಇದನ್ನೂ ಓದಿ:ವಿಕಲಚೇತನ ಮಗ, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ಪತಿ: ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ - High Court

Last Updated : May 18, 2024, 2:35 PM IST

ABOUT THE AUTHOR

...view details