ಮಂಗಳೂರು: "ಗೋವಾದ ಸತ್ತಾರಿ ತಾಲೂಕಿನಲ್ಲಿ ಇರುವ ಪರ್ಯೆಯ ಪಾಳು ಬಿದ್ದಿರುವ ಭೂಮಿಕಾದೇವಿ ದೇವಾಲಯದ ಎದುರು ಒಂದು ಕಲ್ಲಿನ ಸ್ತಂಭವೊಂದನ್ನು ನಿಲ್ಲಿಸಲಾಗಿದ್ದು, ಆ ಸ್ತಂಭದ ಮೇಲೆ ಬ್ರಾಹ್ಮಿಲಿಪಿಯ ಶಾಸನವೊಂದು ಇತ್ತೀಚಿಗೆ ಪುರಾತತ್ವ ಅನ್ವೇಷಣೆಯನ್ನು ಕೈಗೊಂಡ ಸಂದರ್ಭದಲ್ಲಿ ಕಂಡುಬಂದಿದೆ. ಈ ಶಾಸನವನ್ನು ಬ್ರಾಹ್ಮಿಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಕೇವಲ ಎರಡು ಸಾಲಿನ ಈ ಶಾಸನ ಗೋವಾದ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನದಲ್ಲಿ ಬಹಳ ಮಹತ್ವದ್ದಾಗಿದೆ" ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇತಿಹಾಸ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಈ ಶಾಸನವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾವ್ ರಾಣೆ ಅವರು 1993ರಲ್ಲಿ ಈ ಶಾಸನವನ್ನು ಗುರುತಿಸಿ, ಗೋವಾ ರಾಜ್ಯದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ.ಪಿ.ಪಿ. ಶಿರೋಡ್ಕರ್ ಅವರ ಗಮನಕ್ಕೆ ತಂದಿದ್ದರು. ಆ ಶಾಸನವನ್ನು ಅಧ್ಯಯನ ಮಾಡಿದ ಶಿರೋಡ್ಕರ್ ಅವರು ಅವೈಜ್ಞಾನಿಕ ಶಾಸನ ಪಡಿಯಚ್ಚಿನಿಂದಾಗಿ ಆ ಸ್ತಂಭದ ಮೇಲೆ ಕೊರೆಯಲಾಗಿದ್ದ ಎಲ್ಲಾ ಅಕ್ಷರಗಳನ್ನು ಗುರುತಿಸಲು ಸಾಧ್ಯವಾಗದೆ ಅಪೂರ್ಣ ಪಠ್ಯವೊಂದನ್ನು ಗೋವಾದ ಸ್ಥಳೀಯ ನವೆ ಪರ್ವ ಎಂಬ ಪತ್ರಿಕೆಯಲ್ಲಿ ಒಂದು ಕಿರು ಬರಹವನ್ನು ಪ್ರಕಟಿಸಿದ್ದರು. ಅವರ ಓದಿನ ಪಠ್ಯವನ್ನು ಶಾಸನದೊಂದಿಗೆ ಮರು ಪರಿಶೀಲಿಸಿದಾಗ ಅದು ಸಂಪೂರ್ಣ ದೋಷಪೂರಿತವಾಗಿದೆ ಎಂದು ಕಂಡುಬಂದಿತ್ತು" ಎಂದು ಅವರು ಹೇಳಿದ್ದಾರೆ.
ಶಾಸನದ ಮಹತ್ವ: "ಶಾಸನದ ಮರುಪರಿಶೀಲನೆಯಿಂದ, ಪ್ರಾಚೀನ ಕಾಲದಲ್ಲಿ ಗೋವಾವನ್ನು ಆಳ್ವಿಕೆ ಮಾಡಿದ್ದ ಹೈಹಯ ಎಂಬ ಒಂದು ಹೊಸ ರಾಜಮನೆತನ ಬೆಳಕಿಗೆ ಬಂದಿದೆ. ಶಾಸನದ ಪ್ರಕಾರ ಧರ್ಮಯಜ್ಞೋ ಎಂಬ ಹೆಸರಿನ ಹೈಹಯ ದೊರೆ ತನ್ನ ಸೈನ್ಯದೊಂದಿಗೆ ಒಂದು ಯಜ್ಞವನ್ನು ನಡೆಸಿದ ಅಪೂರ್ವ ಮಾಹಿತಿಯನ್ನು ಶಾಸನ ಒಳಗೊಂಡಿದೆ. ಹಾಗೂ ಶಾಸನೋಕ್ತ ಈ ಸ್ತಂಭವೇ ಯೂಪಸ್ತಂಭವಾಗಿದೆ. ಲಿಪಿ ಲಕ್ಷಣದ ಆಧಾರದ ಮೇಲೆ ಶಾಸನದ ಕಾಲವನ್ನು 4 ಅಥವಾ 5ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಪರ್ಯೆ ಭೂಮಿಕಾ ದೇವಾಲಯದ ಪ್ರಾಚೀನತೆಯ ಅಧ್ಯಯನ ದೃಷ್ಟಿಯಿಂದ ಈ ಶಾಸನ ಬಹಳ ಮುಖ್ಯ ದಾಖಲೆಯಾಗಿದೆ" ಎಂದು ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.