ಕರ್ನಾಟಕ

karnataka

ರಾಜ್ಯ ಸರ್ಕಾರದ ವಿರುದ್ಧ ದೋಸ್ತಿಗಳ ಪಾದಯಾತ್ರೆ ; ಪಾದಯಾತ್ರೆಗೆ ಬಿಜೆಪಿ-ಜೆಡಿಎಸ್ ತೀರ್ಮಾನ - BJP JDS padayatra

By ETV Bharat Karnataka Team

Published : Jul 28, 2024, 10:40 PM IST

ವಿವಿಧ ಹಗರಣಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ -ಜೆಡಿಎಸ್​ ಆ 3ರಂದು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿವೆ.

BJP State President B Y Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ETV Bharat)

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ETV Bharat)

ಬೆಂಗಳೂರು :ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಸೇರಿ ವಿವಿಧ ವಿಚಾರಗಳ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಕ್ಷ ಆ. 3 ರಂದು ಬೆಂಗಳೂರಿನಿಂದ ಮೈಸೂರುವರೆಗೆ ಜಂಟಿ ಪಾದಯಾತ್ರೆ ಮಾಡಲು ತೀರ್ಮಾನಿಸಿವೆ.

ಈ ಸಂಬಂಧ ನಗರದ ಖಾಸಗಿ ಹೋಟೆಲ್​ನಲ್ಲಿ ಸುದೀರ್ಘ ಸಭೆ ನಡೆಸಿದ ದೋಸ್ತಿ ಪಕ್ಷಗಳ ನಾಯಕರು, ಆ.3 ರಿಂದ ಆರಂಭಿಸಿ ಆ.10ರ ವರೆಗೆ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಬಿ. ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ಸೇರಿ ದೋಸ್ತಿ ನಾಯಕರು ಪಾಲ್ಗೊಂಡು, ಪಾದಯಾತ್ರೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇಂದು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ಭ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣ, ಮುಡಾ ಹಗರಣ, ಎಸ್​ಸಿಪಿ ಟಿಎಸ್​ಪಿ ಹಣ ದುರುಪಯೋಗ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದೇವೆ.

ಮುಂದಿನ ಶನಿವಾರ ಆ.3ಕ್ಕೆ ಮೈಸೂರಿಗೆ ಪಾದಯಾತ್ರೆ ಆರಂಭವಾಗಲಿದೆ. ಏಳು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಆ.10ಕ್ಕೆ ಮೈಸೂರಿನಲ್ಲಿ ಪಾದಯಾತ್ರೆ ಸಮಾರೋಪ ಆಗಲಿದೆ. ಪಾದಯಾತ್ರೆ ಸಮಾರೋಪದಲ್ಲಿ ರಾಷ್ಟ್ರೀಯ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಮಾರ್ಗ, ರೂಪುರೇಷೆ ಬಗ್ಗೆ ಮುಂದೆ ವಿವರಿಸಲಾಗುವುದು ಎಂದು ತಿಳಿಸಿದರು.

ಹಣ ಲೂಟಿ ನಾಯಕತ್ವ ಸಿಎಂ ವಹಿಸಿದ್ದಾರೆ : ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಎರಡೂ ಪಕ್ಷಗಳ ನಾಯಕರು ಸಭೆ ನಡೆಸಿದ್ದೇವೆ. ಜನತೆಯನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಅಕ್ರಮ ಆರಂಭವಾಗಿದೆ. ವರ್ಗಾವಣೆ ಅಕ್ರಮದಿಂದ ಭ್ರಷ್ಟಾಚಾರ ಆರಂಭವಾಗಿದೆ. ಇದರ ವಿರುದ್ಧ ಆ.3 ರಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ ಎಂದರು.

ಸಿಎಂ ಮೊದಲ ಬಾರಿಗೆ ಸದನದ ಕಲಾಪ ಎದುರಿಸಲಾಗದೆ ಮಾಧ್ಯಮಗಳ ಮುಂದೆ ಪ್ರಾಯೋಜಿತ ಹೇಳಿಕೆ ನೀಡುವ ದೈನೇಸಿ ಸ್ಥಿತಿಗೆ ಬಂದಿದ್ದಾರೆ. ಅಷ್ಟು ಸುದೀರ್ಘ ಅನುಭವ ಇರುವ ಸಿಎಂ ವಿಧಾನಸಭೆಯಲ್ಲಿ ಉತ್ತರ ಕೊಡದೆ ಪಲಾಯನ ಮಾಡಿದ್ದಾರೆ. ಈ ತರ ರಾಜ್ಯದಲ್ಲಿ ಎಂದೂ ನಡೆದಿಲ್ಲ. ಮೈತ್ರಿ ನಾಯಕರು ಸದನದಲ್ಲಿ ದಾಖಲೆ ಸಮೇತ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ವಿವರಿಸಿದ್ದಾರೆ. ಹಿಂದುಳಿದವರಿಗೆ ಯಾರೂ ಕೊಡದ ಅನುದಾನ ನಾನು ಕೊಟ್ಟು ರಕ್ಷಣೆ ಕೊಟ್ಟಿದ್ದೇನೆ ಎನ್ನುವ ಸಿಎಂ ಸಿದ್ದರಾಮಯ್ಯ, ಎಸ್​ಸಿ ಎಸ್​ಟಿ ಸಮುದಾಯಕ್ಕೆ ಮೀಸಲಾದ ಹಣವನ್ನೇ ಲೂಟಿ ಮಾಡುತ್ತಿದ್ದಾರೆ. ಅದರ ನಾಯಕತ್ವವನ್ನು ಸಿಎಂ ವಹಿಸಿದ್ದಾರೆ ಎಂದು ಕಿಡಿಕಾರಿದರು.

ಮೊದಲ ಬಾರಿಗೆ ಉತ್ತರ ಕೊಡುವ ನೈತಿಕತೆ ಕಳೆದುಕೊಂಡಿದ್ದಾರೆ. ಯಾರೋ ಬರೆದ ಪುಟಗಳನ್ನು ಓದುವ ದಾಖಲೆ ಸಿದ್ದರಾಮಯ್ಯರಿಂದ ಆರಂಭವಾಗಿದೆ. ಮೈಸೂರು ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ 14 ನಿವೇಶನ ಪಡೆದಿರುವ ಬಗ್ಗೆ ನಮ್ಮ ತಕರಾರಿಲ್ಲ. ಅವರು ಇನ್ನೂ 50 ನಿವೇಶನ ತಗೊಳ್ಳಲಿ. ಆದರೆ, ಕಾನೂನು ವ್ಯಾಪ್ತಿಯಲ್ಲಿ ಆಸ್ತಿ ಗಳಿಕೆ ಮಾಡಲು ಅಧಿಕಾರ ಇದೆ. ನಾನೊಬ್ಬ ಹಿಂದುಳಿದ ನಾಯಕ ಅಂತಾರೆ. ಆ ಭೂಮಿ ಯಾರದ್ದು ಎಂಬುದು ನಮ್ಮ ಪ್ರಶ್ನೆ. ಆ ಭೂಮಿ ದೇವರಾಜುದೂ ಅಲ್ಲ‌. ಅದು ಸರ್ಕಾರಿ ಭೂಮಿಯಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸಿಎಂ ರಾಜೀನಾಮೆ ಕೊಡಬೇಕು :ಈ ಬಗ್ಗೆ ಮಾತನಾಡಿದ ಬಿ. ಎಸ್ ಯಡಿಯೂರಪ್ಪ, ಮೈಸೂರಿಗೆ ಪಾದಯಾತ್ರೆ ನಡೆಸುತ್ತೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಇಂಥ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು. ಹೋರಾಟದಲ್ಲಿ ಜನರು ಭಾಗವಹಿಸಬೇಕು. ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟಕ್ಕೆ ದುಮುಕುವುದರಿಂದ ಸಾವಿರಾರು ಜನರು ಸೇರಿ ದೊಡ್ಡ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡುವ ತನಕ ನಾವು ಇದನ್ನು ನಿಲ್ಲಿಸುವುದಿಲ್ಲ. ಲೋಕಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಸಿಎಂಗೆ ಕಿಂಚಿತ್ ಗೌರವ ಇದ್ದರೆ ಆದ ತಪ್ಪನ್ನು ಒಪ್ಪಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿ ಗಮನಕ್ಕೆ ಬಂದೇ ಭ್ರಷ್ಟಾಚಾರ: ಇದೇ ಸಂದರ್ಭ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇವಲ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. 100% ಸರ್ಕಾರ ಎಂಬ ಬಿರುದು ಪಡೆದ ಏಕೈಕ ಸಿಎಂ ಸಿದ್ದರಾಮಯ್ಯ. ಇದರ ವಿರುದ್ಧ ಒಂದು ಕಡೆ ಜನ ಜಾಗೃತಿ ಮತ್ತೊಂದೆಡೆ ಕಾನೂನು ಹೋರಾಟವನ್ನು ಗಟ್ಟಿಯಾಗಿ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ದೇಶದಲ್ಲಿ ಭ್ರಷ್ಟಾಚಾರದ ಜನಕ ಇದ್ದಾರೆ ಅಂದರೆ ಅದು ಕಾಂಗ್ರೆಸ್. ರಾಜ್ಯದಲ್ಲಿನ ಭ್ರಷ್ಟಾಚಾರದಲ್ಲೂ ಕಾಂಗ್ರೆಸ್ ಹೈ ಕಮಾಂಡ್ ಪಾತ್ರ ಇದೆ. ರಾಹುಲ್ ಗಾಂಧಿ ಗಮನಕ್ಕೆ ಬಂದೇ ಈ ಭ್ರಷ್ಟಾಚಾರಗಳು ನಡೆದಿದೆ. ಹೀಗಾಗಿ ಜನಜಾಗೃತಿ ಮಾಡುತ್ತೇವೆ ಎಂದರು.

ಭ್ರಷ್ಟಾಚಾರದ ಫಲಾನುಭವಿಯಾಗಿರುವ ಇವರು ನೀತಿ ಆಯೋಗ ಸಭೆಯನ್ನೂ ಬಹಿಷ್ಕಾರ ಮಾಡಿದ್ದಾರೆ. ಅವರಿಗೆ ಮುಜುಗರ ಆಗುತ್ತಿದೆ. ನಿರ್ಮಲಾ ಸೀತಾರಾಮನ್ ಹಾಗೂ ನಮ್ಮ ಮಂತ್ರಿಗಳು ಎಲ್ಲಾ ರಾಜ್ಯದಲ್ಲಿ ಬಜೆಟ್​ನಲ್ಲಿ ಏನೇನು ಸಿಕ್ಕಿದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ನೀತಿ ಆಯೋಗ ಸಭೆ ಗೈರಾಗಲು ನೆಪ ಹುಡುಕಿದ್ದಾರೆ ಅಷ್ಟೇ. ಕಾಂಗ್ರೆಸ್, ಸಿದ್ದರಾಮಯ್ಯ ತಮ್ಮ ಭ್ರಷ್ಟಾಚಾರ ಮುಚ್ಚಲು ನೀತಿ ಆಯೋಗ ಸಭೆ ಬಹಿಷ್ಕಾರ ಮಾಡಿದ್ದಾರೆ. ಇದರಿಂದ ರಾಜ್ಯಕ್ಕೆ ನಷ್ಟ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಜೋಶಿ ಆಗ್ರಹಿಸಿದರು.

ಇದನ್ನೂ ಓದಿ :ಪಾದಯಾತ್ರೆ ಹೊರಟಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು; ಸಚಿವ ಮಧು ಬಂಗಾರಪ್ಪ - bjp padayatra

ABOUT THE AUTHOR

...view details