ಕರ್ನಾಟಕ

karnataka

ETV Bharat / sports

ಕನ್ನಡಿಗ ಕೆ.ಎಲ್‌.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ: ಹಾರ್ದಿಕ್​ ಟ್ರೋಲ್​! - KL RAHUL SACRIFICE

KL Rahul: ಬಾಂಗ್ಲಾದೇಶ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್​ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IND VS BAN  KL RAHUL  SHUBMAN GILL  CHAMPIONS TROPHY 2025
ಕೆ.ಎಲ್.ರಾಹುಲ್, ಶುಭಮನ್ ಗಿಲ್ (IANS)

By ETV Bharat Sports Team

Published : Feb 21, 2025, 4:24 PM IST

Updated : Feb 21, 2025, 6:19 PM IST

KL Rahul:ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ಬುಧವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿರುವುದು ಗೊತ್ತೇ ಇದೆ. ಆದರೆ ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್​ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಶಹಬ್ಬಾಸ್ ಹೇಳಿದ್ದಾರೆ.

ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ (22), ಶ್ರೇಯಸ್​ ಅಯ್ಯರ್​ (15), ಅಕ್ಷರ್​ ಪಟೇಲ್​ (8) ವಿಕೆಟ್​ ಬೀಳುತ್ತಿದ್ದಂತೆ ಒತ್ತಡ ಹೆಚ್ಚಾಗತೊಡಗಿತು. ಆದರೆ ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದಿದ್ದ ಶುಭಮನ್​ ಗಿಲ್​ (101*) ಮತ್ತು ಕೆ.ಎಲ್.ರಾಹುಲ್ (41*)​ ಸಮಯೋಚಿತ ಬ್ಯಾಟಿಂಗ್​ ಮಾಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ರಾಹುಲ್​ಗೆ ಅರ್ಧಶತಕ ಮಾಡಿಕೊಳ್ಳುವ ಅವಕಾಶವಿದ್ದರೂ ಶುಭಮನ್​ ಗಿಲ್​ ಶತಕಕ್ಕಾಗಿ ತ್ಯಾಗ ಮಾಡಿದರು.

ಗಿಲ್ 88ರನ್​ ಗಳಿಸಿದ್ದಾಗ ರಾಹುಲ್​ 33 ರನ್​ ಸಿಡಿಸಿದ್ದರು. ಈ ವೇಳೆ ತಂಡದ ಗೆಲುವಿಗೆ 19 ರನ್​ ಬೇಕಿದ್ದವು. ಆದರೆ ರಾಹುಲ್​ ತಮ್ಮ ಬ್ಯಾಟಿಂಗ್​ ವೇಗ ಕಡಿಮೆ ಮಾಡಿಕೊಂಡರು. ಗಿಲ್​ ಬ್ಯಾಟಿಂಗ್​ ವೇಗ ಹೆಚ್ಚಿಸಿಕೊಂಡು ಶತಕ ಬಾರಿಸಿದರು. ಇದರ ಬೆನ್ನಲ್ಲೇ ರಾಹುಲ್​ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಹಾರ್ದಿಕ್​ ಟ್ರೋಲ್​:ನಿನ್ನೆಯ ಪಂದ್ಯದಲ್ಲಿ ರಾಹುಲ್​ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ. ಈ ಪಂದ್ಯದಲ್ಲಿ ರಾಹುಲ್​ ಔಟಾಗಿ ಹಾರ್ದಿಕ್ ಬ್ಯಾಟಿಂಗ್ ಮಾಡಲು ಬಂದಿದ್ದರೆ ಗಿಲ್​ಗೆ ಶತಕ ಮಾಡಲು ಬಿಡುತ್ತಿರಲಿಲ್ಲ ಎಂದು ಕಾಲೆಳೆದಿದ್ದಾರೆ. ಹೀಗೆ ಫ್ಯಾನ್ಸ್​ ಟ್ರೋಲ್​ ಮಾಡುತ್ತಿರುವುದರ ಹಿಂದೆ ಕಾರಣವೂ ಇದೆ.

ಎರಡು ವರ್ಷಗಳ ಹಿಂದೆ, 2023ರಲ್ಲಿ ಆಗಸ್ಟ್​ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ಟಿ20 ಪಂದ್ಯ ನಡೆದಿತ್ತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 159 ರನ್ ಗಳಿಸಿತ್ತು. ಬಳಿಕ ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 17.5 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತ್ತು.

ಪಂದ್ಯದಲ್ಲಿ ತಿಲಕ್ ವರ್ಮಾ (49*) ಮತ್ತು ಹಾರ್ದಿಕ್ ಪಾಂಡ್ಯ (20*) ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ತಿಲಕ್ ವರ್ಮಾ ಅರ್ಧಶತಕ ಪೂರ್ಣಗೊಳಿಸಲು ಒಂದು ರನ್​ ಬೇಕಿತ್ತು. ಗೆಲುವಿಗೆ 2.1 ಓವರ್​ನಲ್ಲಿ 2 ರನ್​ ಬೇಕಿತ್ತು. ಈ ವೇಳೆ ಪಾಂಡ್ಯ ಸಿಕ್ಸರ್​ ಸಿಡಿಸಿ ಪಂದ್ಯ ಮುಗಿಸಿದ್ದರು. ತಿಲಕ್ ವರ್ಮಾ ಅರ್ಧಶತಕದ ಹೊಸ್ತಿಲಲ್ಲಿರುವಾಗಲೇ ಹಾರ್ದಿಕ್ ಸಿಕ್ಸರ್ ಬಾರಿಸಿ ಪಂದ್ಯ ಮುಗಿಸಿದ್ದು ಸರಿಯಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು.

ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ: ಗಿಲ್‌ ಶತಕ, ಶಮಿಗೆ 5 ವಿಕೆಟ್ ಗೊಂಚಲು; ಬಾಂಗ್ಲಾ ಮಣಿಸಿ ಭಾರತ ಶುಭಾರಂಭ

Last Updated : Feb 21, 2025, 6:19 PM IST

ABOUT THE AUTHOR

...view details