ಮಂಗಳೂರು : "ಓರ್ವ ಶಾಸಕ, ಸಚಿವನಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡದೆ, ಕೇಶವ ಕೃಪಾ, ಮೋದಿ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಬೇಕಾ?" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಡಿಕೆಶಿ ಹೈಕಮಾಂಡ್ ಮೀಟಿಂಗ್ಗೆ ಹೋಗುವ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಹೋಗಿ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಖರ್ಗೆ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬೇಕು. ಅದರಲ್ಲಿ ತಪ್ಪೇನಿದೆ" ಎಂದು ಹೇಳಿದರು.
"ಹಣವಿಲ್ಲದ ರಾಜ್ಯ ಸರ್ಕಾರ ಬಜೆಟ್ ಹೇಗೆ ಮಂಡನೆ ಮಾಡುತ್ತದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಕೆಲಸವಿಲ್ಲ. ಕೇಂದ್ರ ಸರ್ಕಾರದ ಪುರಸ್ಕೃತ ಕಾರ್ಯಕ್ರಮಗಳಿಗೆ ಎಷ್ಟು ಹಣ ಕೊಟ್ಟಿದ್ದಾರೆಂದು ಉತ್ತರಿಸಲಿ. ಅವರ ಹಣ ನಾವೇ ಕೊಡುತ್ತೇವೆ. ಜಲಜೀವನ್ ಮಿಷನ್ಗೆ ಕೇಂದ್ರ ಕೊಡಬೇಕಿದ್ದ 3,600 ಕೋಟಿಯಲ್ಲಿ ನಮಗೆ ಬಂದಿದ್ದು ಕೇವಲ 517ಕೋಟಿ ರೂ. ಕುಡಿಯುವ ನೀರಿನ ಯೋಜನೆಯನ್ನು ನಿಲ್ಲಿಸಬಾರದೆನ್ನುವ ಕಾರಣಕ್ಕೆ ನಮ್ಮ ಸರ್ಕಾರ ₹2,900ಕೋಟಿ ಕೊಟ್ಟಿದೆ. ಹೆಸರು ಮಾತ್ರ ಅವರದ್ದು, ದುಡ್ಡು ನಮ್ಮದು. ತೆರಿಗೆ, ಜಿಎಸ್ಟಿ ನಾವೇ ಅತೀ ಹೆಚ್ಚು ಪಾವತಿಸುತ್ತಿದ್ದೇವೆ. ಆದರೆ ನಮಗೆ ಕೇಂದ್ರದಿಂದ ಬಿಡಿಗಾಸು ಸಿಗುತ್ತಿಲ್ಲ. ನಾವು 100ರೂ. ಕೊಟ್ಟರೆ ಕೇಂದ್ರ 13ರೂ. ಕೊಡುತ್ತಿದೆ. ಆದರೆ ಅದೇ 100ರೂ. ಕೊಡುವ ಯುಪಿ, ಬಿಹಾರಕ್ಕೆ 200-300 ರೂ. ಕೊಡುತ್ತಿದೆ. ಇದು ನ್ಯಾಯವೇ. ಬಿಜೆಪಿಯವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ" ಎಂದು ಆಗ್ರಹಿಸಿದರು.
"ಗೃಹಲಕ್ಷ್ಮಿ ಯೋಜನೆ ಹಣ ಬರುವುದು ವಿಳಂಬ ಆಗಿರೋದು ನಿಜ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ, ಡಿಸಿಎಂ ಅವರು ಈ ವಾರದಲ್ಲಿ ಹಣ ಎಲ್ಲರ ಖಾತೆಗೆ ಬೀಳುತ್ತದೆ ಎಂದು ಹೇಳಿದ್ದಾರೆ. ಬಿಟ್ಟಿ ಭಾಗ್ಯ, ಸರಿಯಿಲ್ಲ ಗ್ಯಾರಂಟಿ ಯೋಜನೆ ಎಂದ ಬಿಜೆಪಿಯವರು ಯಾಕೆ ಇದರ ಬಗ್ಗೆ ಮಾತನಾಡುವುದು" ಎಂಉ್ ಪ್ರಶ್ನಿಸಿದರು.
ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯುತ್ತದೆ ಎಂಬ ಡಿಕೆಶಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, "ಡಿಕೆಶಿಯವರು ನಮ್ಮ ಹಿರಿಯ ನಾಯಕರು. ನಮ್ಮದು ಸಾಮೂಹಿಕ ನಾಯಕತ್ವ. ಡಿಕೆಶಿಯವರು ಡಿಸಿಎಂ, ಕೆಪಿಸಿಸಿ ಅಧ್ಯಕ್ಷರು ಆಗಿದ್ದಾರೆ. ಆದ್ದರಿಂದ ಅವರ ನಾಯಕತ್ವದಲ್ಲೂ ಹೋಗುತ್ತೇವೆ. ಸಿದ್ದರಾಮಯ್ಯನವರ ನಾಯಕತ್ವದಲ್ಲೂ ಹೋಗುತ್ತೇವೆ" ಎಂದರು.
ಸಿಎಂ ಬದಲಾವಣೆ ಸಮಯ ಹಿಡಿಯುತ್ತೆ, ಡಿಕೆಶಿ ಸಿಎಂ ಆಗುವ ರೇಸ್ನಲ್ಲಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿದ ಸಚಿವರು, "ನಮ್ಮ ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿಕೆಶಿಯವರೇ, ಪಿಡಬ್ಲ್ಯುಡಿ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸದ್ಯಕ್ಕೆ ಇಷ್ಟೇ. ಹೈಕಮಾಂಡ್ ಎಲ್ಲಾ ಜವಾಬ್ದಾರಿಯನ್ನು ತೀರ್ಮಾನ ಮಾಡಿ ಕೊಟ್ಟಿದ್ದಾರೆ. ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದು ನಮ್ಮ ಕೆಲಸ. ಆದ್ದರಿಂದ ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಷರ ಬದಲಾವಣೆ ಮೀಡಿಯಾದಲ್ಲಿ ಹೇಳಿದ್ರೆ ಆಗೋದಿಲ್ಲ. ಎಲ್ಲಿ, ಯಾವಾಗ, ಯಾರಿಂದ ಆಗಬೇಕೋ, ಆವಾಗಾಗುತ್ತದೆ" ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, "ಸದ್ಯಕ್ಕೆ ಇಲ್ಲ. ಮಾರ್ಚ್ನಲ್ಲಿ ಬಜೆಟ್ ಆಗುತ್ತದೆ" ಎಂದರು.
ಡಿಸಿಎಂ ಎಲ್ಲಾ ಸಚಿವರ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, "ಅವರು ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿಲ್ಲ. ಇದು ತಪ್ಪು ಮಾಹಿತಿ. ಎಐಸಿಸಿಯು, ಮ್ಯಾನಿಫೆಸ್ಟೊನಲ್ಲಿ ಹೇಳಿದ ಭರವಸೆಗಳನ್ನು ಎಷ್ಟು ಈಡೇರಿಸಿದ್ದೀರಾ?, ಎಷ್ಟು ಅನುದಾನವನ್ನು ತೆಗೆದುಕೊಂಡಿದ್ದೀರಾ? ಏನು ವಿನೂತನ ಕಾರ್ಯಕ್ರಮ ಹಾಕಿಕೊಂಡಿದ್ದೀರಾ? ಎಂದು ಎಲ್ಲಾ ಸಚಿವರಲ್ಲಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡಿದೆ. ಇದನ್ನು ನಾವು ಹೈಕಮಾಂಡ್ ಹಾಗೂ ಜನರಿಗೆ ನೀಡಬೇಕು. ಎರಡನ್ನೂ ನಾವು ಕೊಟ್ಟಿದ್ದೇವೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: ಲೇವಾದೇವಿಗಾರ, ಸಾಲಗಾರರ ಕಿರುಕುಳ ನಿಯಂತ್ರಿಸಲು 3 ಕಾಯ್ದೆಗಳ ತಿದ್ದುಪಡಿಗೆ ಅಸ್ತು: ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು