ಕರ್ನಾಟಕ

karnataka

ಅರಮನೆಯಲ್ಲಿ ಶರನ್ನವರಾತ್ರಿ ಪೂಜೆಯ ಮಹತ್ವವೇನು?: ರಾಜವಂಶಸ್ಥ ಯದುವೀರ್‌ ಸಂದರ್ಶನ - Mysuru Dasara 2024

Mysuru Dasara 2024: ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಪೂಜೆಯ ಮಹತ್ವ ಕುರಿತು ರಾಜವಂಶಸ್ಥ ಯದುವೀರ್‌ 'ಈಟಿವಿ ಭಾರತ'ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

By ETV Bharat Lifestyle Team

Published : 4 hours ago

Published : 4 hours ago

Mysuru Dasara celebrations 2024  Mysuru Dasara  Mysuru  Yaduveer special interview
ರಾಜವಂಶಸ್ಥ ಯದುವೀರ್‌ ವಿಶೇಷ ಸಂದರ್ಶನ (ETV Bharat)

ಮೈಸೂರು:ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಜೋರಾಗಿದೆ. ಅರಮನೆಯಲ್ಲಿ ಹತ್ತು ದಿನಗಳ ಕಾಲ ನಡೆಯುವ ಪಾರಂಪರಿಕ ಶರನ್ನವರಾತ್ರಿಯ ಪೂಜೆ ಹೇಗೆ ನಡೆಯುತ್ತದೆ? ಇಲ್ಲಿ ಜರುಗುವ ಧಾರ್ಮಿಕ ಆಚರಣೆಯ ಇತಿಹಾಸ ಏನು? ಸಿಂಹಾಸನ ಪೂಜೆ ಹೇಗಿರುತ್ತದೆ? ಖಾಸಗಿ ದರ್ಬಾರ್‌ ಹೇಗೆ ನಡೆಯುತ್ತದೆ? ಅರಮನೆಗೆ ಈ ಸಿಂಹಾಸನ ಹೇಗೆ ಬಂತು? ನವರಾತ್ರಿಯಲ್ಲಿ ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆಯ ವಿಶೇಷತೆ ಏನು? ಆಯುಧ ಪೂಜೆ ದಿನ ನಡೆಯುವ ಸಂಪ್ರದಾಯಕ ಪೂಜೆಯ ಹಿನ್ನೆಲೆ ಏನು? ವಿಜಯದಶಮಿ ಪೂಜೆಯ ದಿನ ನಡೆಯುವ ಧಾರ್ಮಿಕ ವಿಜಯಯಾತ್ರೆ ಹೇಗೆ ನೆರವೇರುತ್ತದೆ? ಸಿಂಹಾಸನ ಹಾಗೂ ಚಾಮುಂಡಿ ಬೆಟ್ಟದ ಪೂಜಾ ವಿಧಾನಗಳು ಹೇಗಿರುತ್ತವೆ? ಹೀಗೆ ಹಲವು ಪ್ರಶ್ನೆಗಳಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

''ನವರಾತ್ರಿಯನ್ನು 400 ವರ್ಷಗಳಿಂದ ನಮ್ಮ ವಂಶಸ್ಥರು ಆಚರಿಸುತ್ತಾ ಬಂದಿದ್ದಾರೆ. 1610ರ ಆಳ್ವಿಕೆ ಸಮಯದಲ್ಲಿ ಶ್ರೀರಂಗಪಟ್ಟಣದಲ್ಲಿ‌ ದಸರಾ ಪ್ರಾರಂಭವಾಯಿತು. ಬಳಿಕ ಮೈಸೂರಿನಲ್ಲಿ ಆಚರಣೆ ಮಾಡುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯನ್ನು ಈ ಸಮಯದಲ್ಲಿ ವಿಶೇಷವಾಗಿ ಪೂಜೆ ಮಾಡುವ ಮೂಲಕ ಆಚರಣೆ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಪಾಡ್ಯ ದಿನದಿಂದ ದಶಮಿ ದಿನದವರೆಗೂ ನವರಾತ್ರಿ ಅಚರಣೆ ಮಾಡಲಾಗುತ್ತದೆ. ಇದರಲ್ಲಿ ಪಾಡ್ಯದ ದಿನ ಸಿಂಹಾಸನ ಆರೋಹಣ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕಂಕಣ ತೊಟ್ಟು ವಿವಿಧ ಪೂಜೆ ವಿಧಾನಗಳಲ್ಲಿ ‌ಭಾಗವಹಿಸಬೇಕಾಗುತ್ತದೆ'' ಎಂದು ಯದುವೀರ್ ತಿಳಿಸಿದರು.

''ನವರಾತ್ರಿಯ ಪ್ರತಿದಿನ ಬೆಳಗ್ಗೆ ಪೂಜೆ, ರಾತ್ರಿ ಖಾಸಗಿ‌ ದರ್ಬಾರ್ ನಡೆಸಲಾಗುತ್ತದೆ. ಈ ಸಮಯದಲ್ಲಿ ದೇವಿಗೆ ದಿನಕ್ಕೆ ಎರಡು ಬಾರಿ ಮಹಾಮಂಗಳಾರತಿ ಮಾಡಲಾಗುತ್ತದೆ. ವಿಶೇಷವಾಗಿ ಸರಸ್ವತಿ ಪೂಜೆ ಮಾಡಲಾಗುತ್ತದೆ. ಕರಾಳ ರಾತ್ರಿ ದಿನ ಮಹಿಷಿನ ಸಂಹಾರದ ವಿಧಿ ವಿಧಾನ ನಡೆಸಲಾಗುತ್ತದೆ. ಪಾಂಡವರ ಕಾಲದಿಂದಲೂ ಸಿಂಹಾಸನ ಆರೋಹಣ ಬಂದಿದೆ. ರಾಜರು ಆದವರು ಅದರ ಮೇಲೆ ಕುಳಿತುಕೊಂಡು ರಾಜರ ವೈಭವವನ್ನು (ಖಾಸಗಿ ದರ್ಬಾರ್‌ ) ಮಾಡಲಾಗುತ್ತದೆ'' ಎಂದು ಅವರು ತಿಳಿಸಿದರು.

ಸಿಂಹಾಸನದ ಇತಿಹಾಸ:''ಸಿಂಹಾಸನದ ಇತಿಹಾಸ ದೊಡ್ಡದು‌. 1610ರಲ್ಲಿ ‌ನಮ್ಮ ಕೈಗೆ ಬಂದಿದೆ. ದಸರಾ ಸಮಯದಲ್ಲಿ ಖಾಸಗಿ ದರ್ಬಾರ್ ಮಾಡಲಾಗುತ್ತದೆ. ನವರಾತ್ರಿ ಸಮಯದಲ್ಲಿ ಖಾಸಗಿ ದರ್ಬಾರ್ ಅನ್ನು ದಿನದ ಸಾಯಂಕಾಲ ಅರ್ಧ ಗಂಟೆಯಿಂದ 45 ನಿಮಿಷಗಳ ಕಾಲ ನಡೆಸಲಾಗುತ್ತದೆ. ಇದಕ್ಕೂ ಮುನ್ನ ಬೆಳಗ್ಗೆೆಯಿಂದಲೇ ಪೂಜೆ ಕಾರ್ಯಕ್ರಮಗಳನ್ನು ಅರಮನೆಯಲ್ಲಿ ನಡೆಸಲಾಗುತ್ತದೆ'' ಎಂದು ಯದುವೀರ್‌ ಹೇಳಿದರು.

ರಾಜವಂಶಸ್ಥ ಯದುವೀರ್‌ ವಿಶೇಷ ಸಂದರ್ಶನ (ETV Bharat)

ಆಯುಧ ಪೂಜೆ:''ಆಯುಧ ಪೂಜೆಯು ನವಮಿ ದಿನ ಬರುತ್ತದೆ. ಅಂದು ಬೆಳಗ್ಗೆ ರಾಜಮನೆತನಕ್ಕೆ ಸಂಬಂಧಪಟ್ಟ ಎಲ್ಲಾ ಆಯುಧಗಳನ್ನಿಟ್ಟು ಪೂಜೆ ಮಾಡಲಾಗುತ್ತದೆ. ರಾಜಪ್ರಭುತ್ವಕ್ಕೆ ಸಂಬಂಧಿಸಿದ ‌ಎಲ್ಲ ಲಾಂಛನಗಳು, ಪಟ್ಟದ ಕುದುರೆ, ಆನೆ, ಹಸು, ವಾಹನಗಳು ಎಲ್ಲದಕ್ಕೂ ವಿಶೇಷವಾದ ಪೂಜೆ ಮಾಡಲಾಗುತ್ತದೆ'' ಎಂದರು.

ಶಮಿ ಪೂಜೆ:''ವಿಜಯದಶಮಿ ದಿನ ವಿಜಯದ ಯಾತ್ರೆ ನಡೆಯಬೇಕು,‌ ಅರ್ಜುನ ಯುದ್ಧಕ್ಕೆ ಹೋಗುವ ಸಮಯದಲ್ಲಿ ಶಮಿ ಪೂಜೆ ಮಾಡಲಾಗುತ್ತದೆ ಎಂದು ಪುರಾಣದಲ್ಲಿದೆ. ಎಲ್ಲ ಆಯುಧಗಳನ್ನು ಆ ದಿನ ಹೊರತೆಗೆದು ತಾಯಿಗೆ ಪೂಜೆ ಮಾಡಲಾಗುತ್ತದೆ. ಶಮಿ‌ ಎಂದರೆ ತಾಯಿ‌ ಚಾಮುಂಡೇಶ್ವರಿ'' ಎಂದು ಹೇಳಿದರು.

ಕಟ್ಟಿಬದ್ದ ಕಂಕಣ: ಬೆಟ್ಟದಲ್ಲಿ ತಾಯಿಗೆ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ‌. ಈ ಸಮಯದಲ್ಲಿ ನಮಗೆ ಕಂಕಣ ಕಟ್ಟಿರುತ್ತಾರೆ. ಹೀಗಾಗಿ ನಾವು ಅರಮನೆಯಲ್ಲೇ ಇರಬೇಕು. ಜಾತ್ರೆ ಸಮಯದಲ್ಲಿ ಮಾತ್ರ ಬೆಟ್ಟಕ್ಕೆ ಹೋಗುತ್ತವೆ ಎಂದರು.

ಅಂಬಾರಿಯಲ್ಲಿ ತಾಯಿ ದರ್ಶನ:ಅಂಬಾರಿಯಲ್ಲಿ ಹಿಂದೆ ರಾಜರು ಕುಳಿತು ಹೋಗುತ್ತಿದ್ದರು. ಈಗ ತಾಯಿ‌ ಚಾಮುಂಡೇಶ್ವರಿ ಮಾತೆಯನ್ನು ಕೂರಿಸಲಾಗುತ್ತದೆ. ಹಿಂದೆ ರಾಜರು‌ ವಿಜಯಯಾತ್ರೆ ಕೈಗೊಳ್ಳುವ ಸಮಯದಲ್ಲಿ ಆನೆಯ ಮೇಲೆ ಕುಳಿತು ಹೋಗುತ್ತಿದ್ದರು. ಪ್ರತಿ ವರ್ಷವೂ ಈ ಸಮಯದಲ್ಲಿ ನಮ್ಮ ಸಂಕಲ್ಪ ತಾಯಿ ಚಾಮುಂಡೇಶ್ವರಿ ರಾಜ್ಯದ ಜನತೆಗೆ ಒಳ್ಳೆಯದು ಮಾಡಲಿ. ಮಳೆ, ಬೆಳೆ ಆಗಿ ಸಮೃದ್ಧವಾಗಿ ರಾಜ್ಯ ಇರಲಿ, ಒಳ್ಳೆಯದು ಆಗಲಿ ಎಂದು‌ ಸಂಕಲ್ಪ ಮಾಡುತ್ತೇವೆ ಎಂದು ವಿವರಿಸಿದರು.

ಇದನ್ನೂ ಓದಿ:

ABOUT THE AUTHOR

...view details