ಕರ್ನಾಟಕ

karnataka

By ETV Bharat Karnataka Team

Published : Jun 12, 2024, 3:33 PM IST

Updated : Jun 12, 2024, 5:29 PM IST

ETV Bharat / international

ಕುವೈತ್​ ಬೆಂಕಿ ದುರಂತದಲ್ಲಿ ಸಾವಿನ ಸಂಖ್ಯೆ 41ಕ್ಕೇರಿಕೆ: ಮೃತರಲ್ಲಿ ಭಾರತೀಯರೇ ಹೆಚ್ಚು, 30 ಭಾರತೀಯ ಕಾರ್ಮಿಕರಿಗೆ ಗಾಯ - Kuwait Fire Accident

ದಕ್ಷಿಣ ಕುವೈತ್​ ನಗರದಲ್ಲಿ ಕಾರ್ಮಿಕರು ವಾಸಿಸುತ್ತಿದ್ದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು 35 ಮಂದಿ ದುರಂತ ಸಾವು ಕಂಡಿದ್ದಾರೆ.

ಕುವೈತ್​ನಲ್ಲಿ ಬೆಂಕಿ ದುರಂತಕ್ಕೆ 35 ಮಂದಿ ದಾರುಣ ಸಾವು
ಕುವೈತ್​ನಲ್ಲಿ ಭಾರೀ ಬೆಂಕಿ ಅವಘಡ (Video Grab)

ಕುವೈತ್​:ಏಷ್ಯಾದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಅರಬ್ ರಾಷ್ಟ್ರ ಕುವೈತ್​ನಲ್ಲಿ ಇಂದು ಬೆಳಗ್ಗೆ ಭಾರೀ ಬೆಂಕಿ ದುರಂತ ಸಂಭವಿಸಿದೆ. ದಕ್ಷಿಣ ಕುವೈತ್​ನ ಮಂಗಾಫ್​ ನಗರದಲ್ಲಿ ಕಾರ್ಮಿಕರು ವಾಸವಿದ್ದ ಬೃಹತ್​ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, 41 ಮಂದಿ ಸಾವಿಗೀಡಾಗಿ, 50 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಪೈಕಿ 30 ಭಾರತೀಯರು ಗಾಯಾಳುಗಳಾಗಿದ್ದು, ಹಲವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಅವಘಡ ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಅಗ್ನಿಶಾಮಕ ದಳ ಸಿಬ್ಬಂದಿ ಜೊತೆ ಬೆಂಕಿ ನಂದಿಸಲು ಸ್ಥಳಕ್ಕೆ ಆಗಮಿಸಿದ್ದರು. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರೇ ಇದ್ದರು. ಈ ಪೈಕಿ ಹಲವರನ್ನು ರಕ್ಷಿಸಲಾಗಿದೆ. ಬೆಂಕಿಯ ತೀವ್ರತೆಯಿಂದ ದಟ್ಟ ಹೊಗೆ ಆವರಿಸಿಕೊಂಡು ಉಸಿರಾಡಲು ಸಾಧ್ಯವಾಗದೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರಲ್ಲಿ ಭಾರತೀಯರೇ ಹೆಚ್ಚು:ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರು. ಸಾವನ್ನಪ್ಪಿದವರ ಪೈಕಿ 35 ಜನರನ್ನು ಸ್ಥಳದಲ್ಲೇ ಪತ್ತೆ ಮಾಡಲಾಗಿದೆ. ಇನ್ನೂ ನಾಲ್ವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇದರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಮೃತರಲ್ಲಿ ಹೆಚ್ಚಿನವರು ಭಾರತೀಯ ಪ್ರಜೆಗಳಾಗಿದ್ದು, 20 ರಿಂದ 50 ವರ್ಷ ವಯಸ್ಸಿನವರು ಇದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಐವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿವೆ. ಹೆಚ್ಚಿನ ಸಾವುಗಳು ಬೆಳಗಿನ ಜಾವ ಮಲಗಿರುವಾಗಲೇ ಹೊಗೆಯಿಂದ ಉಸಿರಾಡಲಾಗದೇ ಸಂಭವಿಸಿವೆ. ಹಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತದಿಂದ ಸಹಾಯವಾಣಿ ಆರಂಭ:ದುರ್ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುವೈತ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ದುರಂತದಲ್ಲಿ 30 ಮಂದಿ ಭಾರತೀಯರು ಗಾಯಗೊಂಡಿದ್ದಾರೆ. ಸಾವಿನ ಬಗ್ಗೆ ನಿಖರವಾಗಿಲ್ಲ. ಮಾಹಿತಿಗಾಗಿ ತುರ್ತು ಸಹಾಯವಾಣಿ ಸಂಖ್ಯೆ: +965-65505246 ಅನ್ನು ಆರಂಭಿಸಲಾಗಿದೆ. ಸಂಬಂಧಿಸಿದವರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಭಾರತೀಯರಿಗೆ ಎಲ್ಲ ನೆರವು ನೀಡಲಾಗುವುದು ಎಂದು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.

ಈ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಡಾ.ಎಸ್​.ಜೈಶಂಕರ್​ ಅವರು, "ಕುವೈತ್ ನಗರದಲ್ಲಿ ಬೆಂಕಿ ಅವಘಡದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. 50 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮ ರಾಯಭಾರಿ ಕಚೇರಿ ಅಧಿಕಾರಿಗಳು ಘಟನಾ ಸ್ಥಳ ಮತ್ತು ಆಸ್ಪತ್ರೆಗಳಿಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕುವೈತ್‌ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರೇ ಶೇಕಡಾ 21 ರಷ್ಟಿದ್ದಾರೆ. ಅಲ್ಲಿನ ಉದ್ಯೋಗಿಗಳ ಪೈಕಿ ಶೇಕಡಾ 30 ರಷ್ಟಿದ್ದಾರೆ.

ಇದನ್ನೂ ಓದಿ:ನೈಋತ್ಯ ದಕ್ಷಿಣ ಕೊರಿಯಾದಲ್ಲಿ 4.8 ತೀವ್ರತೆಯ ಭೂಕಂಪ: ಭೀತಿಗೊಳಗಾದ ಜನ - earthquake in South Korea

Last Updated : Jun 12, 2024, 5:29 PM IST

ABOUT THE AUTHOR

...view details