ಕರ್ನಾಟಕ

karnataka

ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ: ಅಜ್ಞಾತಸ್ಥಳಕ್ಕೆ ತೆರಳಿದ ಪ್ರಧಾನಿ ಶೇಖ್​ ಹಸೀನಾ - Bangladesh Protest

By ETV Bharat Karnataka Team

Published : Aug 5, 2024, 3:53 PM IST

ಬಾಂಗ್ಲಾದೇಶ ಮತ್ತೆ ಹೊತ್ತಿ ಉರಿಯುತ್ತಿದೆ. ಮೀಸಲಾತಿ ವಿರುದ್ಧದ ಹೋರಾಟದ ಕಿಚ್ಚಿಗೆ ಬೆದರಿ ಅಲ್ಲಿನ ಪ್ರಧಾನಿ ಶೇಖ್​ ಹಸೀನಾ ಗೌಪ್ಯ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ. ಶೀಘ್ರವೇ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಬಾಂಗ್ಲಾದೇಶ ವಿದ್ಯಾರ್ಥಿಗಳ ಹೋರಾಟ
ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ (AP)

ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ಮತ್ತು ಅದರ ಪರವಾಗಿರುವ ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆಗಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರ ಕಿಚ್ಚಿಗೆ ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಪ್ರತಿಭಟನಾಕಾರರು 'ಢಾಕಾ ಚಲೋ ಅಭಿಯಾನ' ನಡೆಸುತ್ತಿದ್ದಾರೆ. ಸಾಗರೋಪಾದಿಯಲ್ಲಿ ಪ್ರತಿಭಟನಾಕಾರರು ರಾಜಧಾನಿ ಕಡೆಗೆ ನುಗ್ಗಿ ಬರುತ್ತಿದ್ದಾರೆ. ಪ್ರಧಾನಿ ನಿವಾಸದ ಮುಂದೆ ಈಗಾಗಲೇ ಭಾರೀ ಪ್ರಮಾಣದಲ್ಲಿ ಹೋರಾಟಗಾರರು ಜಮಾಯಿಸಿದ್ದಾರೆ. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವ ಕಾರಣ, ಶೇಖ್​ ಹಸೀನಾ ಅಲ್ಲಿಂದ ಪಲಾಯನ ಮಾಡಿ ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಢಾಕಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಶಾಂತಿ ಸಂಧಾನಕ್ಕೆ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ದೇಶಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಇತಿಶ್ರೀ ಹಾಡಬೇಕಾದರೆ, ಪ್ರಧಾನಮಂತ್ರಿ ರಾಜೀನಾಮೆ ಅನಿವಾರ್ಯವಾಗಿದೆ. ಇದನ್ನು ಮನಗಂಡಿರುವ ಶೇಖ್​ ಹಸೀನಾ ಅವರು ತಮ್ಮ ಸ್ಥಾನ ತೊರೆಯಲು ಮುಂದಾಗಿದ್ದಾರೆ.

ಪ್ರಧಾನಿಗಳ ಹಿರಿಯ ಸಲಹೆಗಾರರು ಈ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಧಾನಮಂತ್ರಿ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು 'ಸಾಧ್ಯತೆ' ಇದೆ ಉತ್ತರಿಸಿದ್ದಾರೆ. ಅಧಿಕೃತವಾಗಿ ಅವರು ಹೇಳಿಕೆ ನೀಡಲು ಹಿಂಜರಿದಿದ್ದಾರೆ.

ಎರಡು ತಿಂಗಳ ಹಿಂದೆ ನಡೆದ ಹೋರಾಟ ಇತ್ತೀಚೆಗೆ ತಣ್ಣಗಾಗಿತ್ತು. ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ ವಿದ್ಯಾರ್ಥಿಗಳು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು. ಪ್ರಧಾನಿ ಶೇಖ್​ ಹಸೀನಾ ಅವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮತ್ತೆ ಹೋರಾಟ ಆರಂಭವಾಗಿದೆ. ಮೀಸಲಾತಿಗೆ ಹಸೀನಾ ಅವರು ಬೆಂಬಲ ನೀಡಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳು-ಪಕ್ಷಗಳ ನಡುವೆ ಮಾರಾಮಾರಿ:ಆಡಳಿತಾರೂಢ ಅವಾಮಿ ಲೀಗ್​, ಛತ್ರ ಲೀಗ್​ ಮತ್ತು ಜುಬೊ ಲೀಗ್​ ಕಾರ್ಯಕರ್ತರು ಪ್ರತಿಭಟನಾಕಾರರ ವಿರುದ್ಧ ತೊಡೆತಟ್ಟಿದ್ದಾರೆ. ವಿದ್ಯಾರ್ಥಿಗಳು ಕೂಡ ಈ ಮೂರು ರಾಜಕೀಯ ಪಕ್ಷಗಳ ವಿರುದ್ಧ ತೀವ್ರ ಸೆಣಸಾಟ ನಡೆಸುತ್ತಿದ್ದಾರೆ. ಇದರಿಂದ ಮೂರು ದಿನದಲ್ಲಿ 100 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ದೇಶದಲ್ಲಿ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕರ್ಫ್ಯೂ ಜಾರಿ ಮಾಡಿದ್ದರೂ, ವಿದ್ಯಾರ್ಥಿಗಳು ಸಂಘಟನೆಗಳು ಮಾತ್ರ ತಮ್ಮ ಹೋರಾಟವನ್ನು ನಿಲ್ಲಿಸುತ್ತಿಲ್ಲ. ಸರ್ಕಾರ ಮತ್ತು ಸೇನೆಯು ಜನರ ಪರವಾಗಿದೆ ಎಂದು ಹೇಳುತ್ತಿದ್ದರೂ, ಯಾವುದೇ ಫಲ ಕಾಣುತ್ತಿಲ್ಲ.

ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು, ಆಡಳಿತ ಪಕ್ಷದ ಬೆಂಬಲಿಗರ ಮಧ್ಯೆ ಘರ್ಷಣೆ: 100 ಮಂದಿ ಸಾವು - Violence in Bangladesh

ABOUT THE AUTHOR

...view details