ಕರ್ನಾಟಕ

karnataka

ಮಯೋಪಿಯಾ ರೋಗಕ್ಕೆ ಚಿಕಿತ್ಸೆಯಿಲ್ಲ: ನಾರಾಯಣ ನೇತ್ರಾಲಯ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ - No treatment for myopia

By ETV Bharat Karnataka Team

Published : Jul 18, 2024, 9:14 PM IST

ಮಯೋಪಿಯಾ ರೋಗಕ್ಕೆ ಚಿಕಿತ್ಸೆ ಇಲ್ಲ, ಅದರ ತಡೆಗಟ್ಟುವಿಕೆಯ ಬಗ್ಗೆ ಶಿಕ್ಷಣ ನೀಡುವುದೇ ಇದಕ್ಕಿರುವ ಚಿಕಿತ್ಸೆ ಎಂದು ಡಾ.ರೋಹಿತ್ ಶೆಟ್ಟಿ ಹೇಳಿದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಇತ್ತೀಚಿನ ಶಾಲಾ ಮಕ್ಕಳ ಛಾಯಾಚಿತ್ರಗಳನ್ನು ನೋಡಿದರೆ, ಬಹುತೇಕ ಎಲ್ಲ ಮಕ್ಕಳು ಕನ್ನಡಕ ಧರಿಸಿರುವುದನ್ನು ಕಾಣಬಹುದಾಗಿದೆ. ಇದು ಆತಂಕಕಾರಿಯಾಗಿದೆ. ಕನ್ನಡಕವು ಅಂಗವೈಕಲ್ಯವಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ ರೋಹಿತ್ ಶೆಟ್ಟಿ ಹೇಳಿದರು.

ಮಯೋಪಿಯಾ ರೋಗದ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಈ ರೋಗಕ್ಕೆ ಚಿಕಿತ್ಸೆ ಇಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದರ ತಡೆಗಟ್ಟುವಿಕೆಯ ಬಗ್ಗೆ ಶಿಕ್ಷಣ ನೀಡುವುದೇ ಇದಕ್ಕಿರುವ ಚಿಕಿತ್ಸೆಯಾಗಿದೆ. ನಿತ್ಯ 2 ಗಂಟೆಗಳ ಕಾಲ ಕಡ್ಡಾಯವಾಗಿ ಹೊರಾಂಗಣದಲ್ಲಿ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮಯೋಪಿಯಾದ ಅಪಾಯವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ" ಎಂದು ಹೇಳಿದರು.

"ಶಾಲೆಗಳಲ್ಲಿ ಮಕ್ಕಳನ್ನು ಕಡ್ಡಾಯವಾಗಿ ಪರೀಕ್ಷಿಸಲು, ಮಕ್ಕಳಿಗೆ ಕನ್ನಡಕವನ್ನು ಒದಗಿಸಲು ಮತ್ತು ಸರಿಯಾದ ಚಿಕಿತ್ಸೆಗಾಗಿ ಮಯೋಪಿಯಾ ಆರಂಭಿಕ ಹಂತದ ಚಿಹ್ನೆಗಳನ್ನು ಗುರುತಿಸಲು ಶಿಕ್ಷಕರಿಗೆ ಶಿಕ್ಷಣ ಮತ್ತು ತರಬೇತಿ ನೀಡಬೇಕು. ಕನ್ನಡಕ ಮುಕ್ತ ಜಗತ್ತನ್ನು ಸೃಷ್ಟಿಸಲು ಮುಂದಾಗಬೇಕಿದ್ದು, ಈ ಬಗ್ಗೆ ನಾವು ಸರ್ಕಾರವನ್ನು ಒತ್ತಾಯಿಸಬೇಕಿದೆ" ಎಂದು ಡಾ.ರೋಹಿತ್ ಶೆಟ್ಟಿ ತಿಳಿಸಿದರು.

ನಾರಾಯಣ ನೇತ್ರಾಲಯದ ಸಿಇಒ ಮಾಜಿ ಗ್ರೂಪ್ ಕ್ಯಾಪ್ಟನ್ ಎಸ್ ಕೆ ಮಿತ್ತಲ್ ಮಾತನಾಡಿ, "ಡಾ.ಕೆ.ಭುಜಂಗ್ ಶೆಟ್ಟಿ ಅವರ ದೂರದೃಷ್ಟಿ ಹಾಗೂ ನಾಯಕತ್ವದಲ್ಲಿ ಮಯೋಪಿಯಾ ಕ್ಲಿನಿಕ್ ಅನ್ನು ಪ್ರಾರಂಭಿಸಿದ ಕರ್ನಾಟಕದ ಮೊದಲ ಕಣ್ಣಿನ ಆಸ್ಪತ್ರೆ ನಮ್ಮದಾಗಿದೆ. ಸುಧಾರಿತ ರೋಗನಿರ್ಣಯ ಮತ್ತು ಮಯೋಪಿಯಾ ಮಾಸ್ಟರ್, ಮಕ್ಕಳು 18 ವರ್ಷ ವಯಸ್ಸು ತಲುಪುವುದರಲ್ಲಿ ಮಯೋಪಿಯಾದ ಪ್ರಗತಿಯನ್ನು ತೋರಿಸುತ್ತದೆ. ನಾವು ಮಯೋಪಿಯಾ ವೃದ್ಧಿಸುವುದನ್ನು ತಡೆಗಟ್ಟುವ ಗುರಿ ಹೊಂದಿದ್ದೇವೆ. ಈ ದಿನಗಳಲ್ಲಿ ಡಿಜಿಟಲೀಕರಣ ಹೊಸ ಜೀವನ ವಿಧಾನವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು, ಆಸ್ಪತ್ರೆಗಳು, ಶಾಲೆಗಳು, ಪೋಷಕರು ಮತ್ತು ಸರ್ಕಾರ ಒಗ್ಗೂಡಿ ಕೆಲಸ ಮಾಡುವುದು ಬಹಳ ಮುಖ್ಯ" ಎಂದು ವಿವರಿಸಿದರು.

ನಾರಾಯಣ ನೇತ್ರಾಲಯದ ಮಕ್ಕಳ ನೇತ್ರವಿಭಾಗದ ಮುಖ್ಯಸ್ಥೆ ಡಾ.ಎಂ ಭಾನುಮತಿ, "10 ವರ್ಷಗಳ ಹಿಂದೆ, ಗ್ರಾಮೀಣ ಶಾಲೆಗಳಲ್ಲಿ ಮಯೋಪಿಯಾ ಹೊಂದಿರುವ ಮಕ್ಕಳ ಸಂಖ್ಯೆ ಇಂದಿನಕ್ಕಿಂತ ಕಡಿಮೆಯಿತ್ತು. ಆದರೆ, ಈಗ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಲ್ಲಿ ಸ್ಮಾರ್ಟ್​ ಫೋನ್‌ಗಳ ಬಳಕೆ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಕಣ್ಣಿನ ತಪಾಸಣೆ ಮತ್ತು ಅಂತಹ ಪ್ರಕರಣಗಳನ್ನು ಗುರುತಿಸುವ ಅಗತ್ಯತೆ ಮತ್ತು ಕನ್ನಡಕಗಳನ್ನು ಒದಗಿಸುವುದು ನಿರ್ಣಾಯಕವಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ವಯಸ್ಸಿಗೆ ಅನುಗುಣವಾಗಿ ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡಬೇಕು; ಇಲ್ಲಿದೆ ಮಾಹಿತಿ - Sleep According to Age

ABOUT THE AUTHOR

...view details