ಕರ್ನಾಟಕ

karnataka

By ETV Bharat Karnataka Team

Published : Mar 19, 2024, 2:41 PM IST

ETV Bharat / entertainment

14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

ಕೇರಳದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸುತ್ತುವರಿದಿದ್ದರಿಂದ ಜನಪ್ರಿಯ ನಟ ವಿಜಯ್ ಅವರ ಕಾರು ಹಾನಿಗೊಳಗಾಗಿದೆ.

Vijay's Visits Kerala
ಕೇರಳದಲ್ಲಿ ನಟ ವಿಜಯ್​ ಕಾರು ಡ್ಯಾಮೇಜ್

ದಕ್ಷಿಣ ಚಿತ್ರರಂಗದ ಹೆಸರಾಂತ ನಟ ವಿಜಯ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' (The Greatest of All Time). ಇದನ್ನು 'GOAT' ಎಂದೂ ಕರೆಯಲಾಗುತ್ತದೆ. ಈ ಚಿತ್ರದ ಪ್ರಮುಖ ದೃಶ್ಯವೊಂದನ್ನು ಸೆರೆಹಿಡಿಯೋ ಸಲುವಾಗಿ ನಿನ್ನೆ (ಮಾರ್ಚ್ 18, ಸೋಮವಾರ) ವಿಜಯ್​ ಕೇರಳದ ತಿರುವನಂತಪುರಕ್ಕೆ ಭೇಟಿ ನೀಡಿದ್ದರು. 14 ವರ್ಷಗಳ ಸುದೀರ್ಘ ದಿನಗಳು ಬಳಿಕ ಕೇರಳಕ್ಕೆ ಮರಳಿದ ಹಿನ್ನೆಲೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಬಹುಸಮಯದ ಬಳಿಕ ಸೌತ್​ ಸೂಪರ್ ಸ್ಟಾರ್ ವಿಜಯ್​​ ಕೇರಳಕ್ಕೆ ಮರಳಿದ ಹಿನ್ನೆಲೆ, ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಮೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳ ಉತ್ಸಾಹ ವರ್ಣನಾತೀತ. ವಿಮಾನ ನಿಲ್ದಾಣದಿಂದ ಶೂಟಿಂಗ್ ಲೊಕೇಶನ್​​ವರೆಗೂ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮಿಷ್ಟದ ನಟನನ್ನು ನೋಡಲು ಅವರ ಕಾರನ್ನು ಅಭಿಮಾನಿಗಳು ಸುತ್ತುವರಿದರು. ಪರಿಣಾಮ ವಿಜಯ್ ಅವರ ಕಾರಿಗೆ ಹಾನಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗಳೇ ತಿಳಿಸಿವೆ. ಡ್ಯಾಮೇಜ್​ ಆಗಿರುವ ಕಾರಿನ ವಿಡಿಯೋವೊಂದು ಆನ್​ಲೈನ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಇದು ನಟ ವಿಜಯ್​ ಅವರ ಕಾರು ಎಂದು ಹೇಳಲಾಗುತ್ತಿದೆ.

ಭದ್ರತಾ ಕ್ರಮಗಳ ಹೊರತಾಗಿಯೂ, ಲೆಕ್ಕಕ್ಕೆ ಸಿಗದಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ವಿಜಯ್ ಅವರ ಕಾರಿನ ಸುತ್ತ ಸೇರಿದ್ದರು. ಪರಿಣಾಮ, ಅನಿರೀಕ್ಷಿತ ಹಾನಿ ಸಂಭವಿಸಿದೆ. ಜನಸಂದಣಿ ನಿಯಂತ್ರಿಸೋದು ಪೊಲೀಸರಿಗೆ ಹರಸಾಹಸವೇ ಆಗಿತ್ತು. ಮುಂಜಾನೆಯಿಂದಲೇ ವಿಜಯ್ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಕಟ್ಟಾ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ತಂಡ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ, ವಿಜಯ್ ಅವರು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸಂಜೆ 4 ಗಂಟೆಯ ಬಳಿಕ ಕಾಣಿಸಿಕೊಂಡಾಗ "ದಳಪತಿ" ಎಂಬ ಹರ್ಷೊದ್ಘಾರಗಳ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಕೇರಳ, ತಿರುವನಂತಪುರದ ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' ಶೂಟಿಂಗ್​ ಜರುಗಲಿದೆ. ಹಲವು ದಿನಗಳವರೆಗೆ ಚಿತ್ರೀಕರಣ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಇಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಇದೊಂದು ಅದ್ಧೂರಿ ಸೀಕ್ವೆನ್ಸ್ ಎಂದು ನಂಬಲಾಗಿದೆ.

ಇದನ್ನೂ ಓದಿ:ವಿಯೆಟ್ನಾಂನಲ್ಲಿ 'ಕೃಷ್ಣಂ ಪ್ರಣಯ ಸಖಿ' ಚಿತ್ರೀಕರಣ ಪೂರ್ಣ: ಗಣೇಶ್​​ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ

ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿರುವ ಇತರ ಪ್ರಮುಖ ಕಲಾವಿದರು ಸಹ ಕೇರಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸಿನಿಮಾ ಸದ್ಯ ಅಂತಿಮ ಘಟ್ಟದಲ್ಲಿದ್ದು, ಬಿಗ್​​ ಬಜೆಟ್ ಸಿನಿಮಾ ಕೆಲವೇ ವಾರಗಳೊಳಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆಗೆ ರಸ್ತೆಯಲ್ಲಿ ಒಬ್ಬ ಮಹಿಳೆಯೂ ಇಲ್ಲ: ಪುರುಷ ಪ್ರಧಾನ ವ್ಯವಸ್ಥೆ ಬಗ್ಗೆ ಸಿದ್ಧಾರ್ಥ್​ ಟೀಕೆ

ಹಾಲಿವುಡ್‌ನ ಲೂಪರ್‌ ಚಿತ್ರದಿಂದ ಸ್ಫೂರ್ತಿ ಪಡೆದ ಸಿನಿಮಾ ಎಂದು ಹೇಳಲಾಗಿದೆ. ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯೌವನ ಮತ್ತು ಮಧ್ಯವಯಸ್ಕ ವ್ಯಕ್ತಿಯ ನೋಟವನ್ನು ಕಳೆದ ಡಿಸೆಂಬರ್‌ನಲ್ಲಿ ಚಿತ್ರತಂಡ ಅನಾವರಣಗೊಳಿಸಿತ್ತು. ಸಿನಿಪ್ರಿಯರು ಹೆಚ್ಚಿನ ಅಪ್​ಡೇಟ್ಸ್​ಗೆ ಕಾಯುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಕ ವೆಂಕಟ್ ಪ್ರಭು ಚೆನ್ನೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಂದರ್ಭ, ಶೀಘ್ರದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು ಎಂದು ಖಚಿತಪಡಿಸಿದ್ದರು.

ABOUT THE AUTHOR

...view details