ಕರ್ನಾಟಕ

karnataka

ETV Bharat / entertainment

'ಚೌಕಿದಾರ್​' ಮುಹೂರ್ತ: ದಿಯಾ ಹೀರೋ ಪೃಥ್ವಿ ಅಂಬಾರ್​ಗೆ ಆ್ಯಕ್ಷನ್​ ಕಟ್​​ ಹೇಳಲಿದ್ದಾರೆ ರಥಾವರ ನಿರ್ದೇಶಕ - Chowkidar

ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ಚೌಕಿದಾರ್‌' ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ.

By ETV Bharat Karnataka Team

Published : Jul 4, 2024, 2:19 PM IST

Chowkidar Muhurta program
'ಚೌಕಿದಾರ್‌' ಮುಹೂರ್ತ ಕಾರ್ಯಕ್ರಮ (ETV Bharat)

ಸೂಪರ್ ಹಿಟ್ 'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಚೌಕಿದಾರ್‌'ಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಚಿತ್ರದ ನಿರ್ಮಾಪಕರಾದ ಕಲ್ಲಹಳ್ಳಿ ಚಂದ್ರಶೇಖರ್ ಕ್ಲ್ಯಾಪ್ ಮಾಡಿದ್ದು, ಸಾಯಿಕುಮಾರ್ ಕ್ಯಾಮರಾ ಸ್ವಿಚ್‌ ಆನ್‌ ಮಾಡಿದರು.

ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ 'ಚೌಕಿದಾರ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಧನ್ಯಾ ರಾಮ್​ಕುಮಾರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತದ ಬಳಿಕ ಚಿತ್ರತಂಡ ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ತೆರೆ ಹಂಚಿಕೊಳ್ಳುತ್ತಿರುವ ಪೃಥ್ವಿ ಅಂಬಾರ್ - ಧನ್ಯಾ ರಾಮ್​ಕುಮಾರ್ (ETV Bharat)

ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ಇದು ನನ್ನ ಆರನೇ ಸಿನಿಮಾ. ಬಹುಭಾಷೆಯಲ್ಲಿ ರಿಲೀಸ್ ಆಗಲಿದೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾದ ನಿರ್ಮಾಪಕರು. ರಥಾವರ ಹಿಟ್ ಆದ ಮೇಲೆ ನನಗೆ ಒಂದು ಸಿನಿಮಾ ಮಾಡಿ ಎಂದು ತಿಳಿಸಿದ್ದರು. ಪೃಥ್ವಿ ಅವರನ್ನು ಲವರ್ ಬಾಯ್ ರೀತಿ ತೋರಿಸಿದ್ದಾರೆ. ಬೇರೆ ರೀತಿ ಟ್ರೈ ಮಾಡಬೇಕು ಎಂಬ ಆಸೆಯಿಂದ ಕಥೆ ಹೇಳಿದೆ. ಅವರು ಓಕೆ ಎಂದರು. ಅವರು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಜೋಶ್ ನೋಡಿ ಖುಷಿಯಾಯ್ತು. ಧನ್ಯಾ ಮೇಡಂ, ಸಾಯಿಕುಮಾರ್ ಸರ್, ಧರ್ಮ ಸರ್ ಎಲ್ಲರೂ ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

'ಚೌಕಿದಾರ್‌' ಚಿತ್ರತಂಡ (ETV Bharat)

ನಟ ಪೃಥ್ವಿ ಅಂಬಾರ್ ಮಾತನಾಡಿ, ತಾಯಿ ಆಶೀರ್ವಾದದಿಂದ ಚೌಕಿದಾರ್ ಸಿನಿಮಾಗೆ ಚಾಲನೆ ಸಿಕ್ಕಿದೆ. ಖುಷಿಯ ದಿನವಿದು. ಕಥೆ ಕೇಳಿದಾಗ, ನಾನು ಈ ಪಾತ್ರಕ್ಕೆ ಸಾಕಷ್ಟು ಶ್ರಮ ಹಾಕಬೇಕು ಎಂದು ನನಗೆ ಗೊತ್ತಾಯ್ತು. ತಯಾರಿ ಮಾಡಲು ಸಮಯ ಬೇಕು ಎಂದೆ. ಅದರಂತೆ ಅವರು ನನಗೆ ಟೈಮ್ ಕೊಟ್ಟರು. ಅಲ್ಲಿಂದ ನನ್ನ ಪಯಣ ಶುರುವಾಯ್ತು. ಒಂದು ದಿನ ಟೀಸರ್ ಶೂಟ್ ಮಾಡಿದ್ದೇವೆ.‌ ಬಹಳ ಖುಷಿಯಾಗಿದೆ.‌ ಲಕ್ಕಿ ಫೀಲ್ ಮಾಡುತ್ತಿದ್ದೇನೆ. ಜೀವನದ ಬಗ್ಗೆ ಬಹಳ ಅನುಭವವಿದೆ. ಕಂಪ್ಲೀಟ್ ಫ್ಯಾಮಿಲಿ ಜೊತೆಗೆ ಬೇರೆ ಎಲಿಮೆಂಟ್ ಮಿಕ್ಸ್ ಮಾಡಲಾಗಿದೆ. ಚೌಕಿದಾರ್ ಟೈಟಲ್ ಕೊಡುವ ವೈಬ್ಸ್ ಕಥೆಯಲ್ಲಿರುತ್ತದೆ ಎಂದರು.

ಇದನ್ನೂ ಓದಿ:ಯಕ್ಷಗಾನ ಅಥವಾ ಕಂಬಳ ಕಥೆ? ಕುತೂಹಲ ಹೆಚ್ಚಿಸಿದ ಪ್ರಜ್ವಲ್ ದೇವರಾಜ್ 'ಕರಾವಳಿ' ಪೋಸ್ಟರ್ - Prajwal Devaraj Birthday

ಸಾಯಿಕುಮಾರ್ ಮಾತನಾಡಿ, ಬಹಳ ಸಂತೋಷವಾಗುತ್ತಿದೆ. ಮುಂದಿನ ವರ್ಷಕ್ಕೆ ನಟನಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಇದಕ್ಕೆಲ್ಲಾ ಅಪ್ಪ ಅಮ್ಮ ಕಾರಣ. ನೀವು ಕನ್ನಡ ಸಿನಿಮಾ ಮಾಡಬೇಕು ಎಂದು ಅಮ್ಮ ಹೇಳುತ್ತಿದ್ದರು. ಕನ್ನಡ ಜರ್ನಿಗೂ 30 ವರ್ಷವಾಯ್ತು. ಪ್ರತಿ ದಿನ, ಪ್ರತಿ ಸಿನಿಮಾದ ಪಾತ್ರ ಚಾಲೆಂಜಿಂಗ್​. ಈಗ ಹದಿನೈದು ಸಿನಿಮಾ ನಡೆಯುತ್ತಿದೆ. ಚಂದ್ರಶೇಖರ್ ಅವರ ಸಿನಿಮಾ ಗ್ಲಿಂಪ್ಸ್ ಚೆನ್ನಾಗಿದೆ. ನನ್ನ ತಮ್ಮ ಕೂಡ ಅದ್ಭುತ ಡೈರೆಕ್ಟರ್. ಚೌಕಿದಾರ್ ಕಥೆ ಕೇಳಿದೆ. ಎಮೋಷನಲ್​​ ಡ್ರಾಮಾ. ನಾನು ತುಳು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಪೃಥ್ವಿ ಹೀರೋ. ನಾನದರಲ್ಲಿ ಪೊಲೀಸ್. ಸಬ್ಜೆಕ್ಟ್​​​ ಚೆನ್ನಾಗಿದೆ. ಪೃಥ್ವಿಗೆ ನಾನು ಚೌಕಿದಾರ್. ನನಗೆ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್. ಇದು ಒಂದೊಳ್ಳೆ ಪ್ರಯತ್ನ ಎಂದರು.

ಇದನ್ನೂ ಓದಿ:ಒಂದು ವಾರದಲ್ಲಿ ವಿಶ್ವದಾದ್ಯಂತ ₹700 ಕೋಟಿ ಕಲೆಕ್ಷನ್​ ಮಾಡಿದ 'ಕಲ್ಕಿ', ಭಾರತದಲ್ಲೆಷ್ಟು? - Kalki Collection

ನಟಿ ಧನ್ಯಾ ರಾಮ್​ಕುಮಾರ್ ಮಾತನಾಡಿ, ಚೌಕಿದಾರ್ ಸಿನಿಮಾದಲ್ಲಿ ನನಗೆ ನಟಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದ. ಪೃಥ್ವಿ, ಧರ್ಮ ಸರ್, ಸಾಯಿಕುಮಾರ್ ಸರ್ ನಟರ ಜೊತೆ ನಾನು ಸ್ಕ್ರೀನ್ ಶೇರ್ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ವಿದ್ಯಾಶೇಖರ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಅವರ ಸಾಹಿತ್ಯ ಚಿತ್ರಕ್ಕಿದೆ. ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರ ಶೀಘ್ರದಲ್ಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ABOUT THE AUTHOR

...view details